ಮಧ್ಯರಾತ್ರಿ ವೇಳೆ ದಾವಣಗೆರೆಯಿಂದ ಬಳ್ಳಾರಿ ಪಾಲಾದ ಹರಪನಹಳ್ಳಿ
ದಾವಣಗೆರೆ, ಜನವರಿ 10: ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕು ಕೊನೆಗೂ ಬಳ್ಳಾರಿ ಜಿಲ್ಲೆಗೆ ಅಧಿಕೃತವಾಗಿ ಸೇರ್ಪಡೆಯಾಗಿದೆ. ಬುಧವಾರ(ಜನವರಿ 9) ಮಧ್ಯರಾತ್ರಿ 12 ಗಂಟೆ ನಂತರ ಹರಪನಹಳ್ಳಿ ತಾಲೂಕು ಅಧಿಕೃತವಾಗಿ ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾಗಿದೆ.
ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಗೆಜೆಟ್ ನೋಟಿಫಿಕೇಷನ್ ತಲುಪಿದೆ. ತಾಲೂಕು ಆಡಳಿತದ ಅಧಿಕೃತ ದಾಖಲೆ ಸಂಪೂರ್ಣ ಬಳ್ಳಾರಿಗೆ ಹಸ್ತಾಂತರ ಮಾಡಲಾಗಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾಹಿತಿ ನೀಡಿದ್ದಾರೆ.
1997 ರಿಂದ ದಾವಣಗೆರೆ ಜಿಲ್ಲೆಯ ಭಾಗವಾಗಿದ್ದ ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾಗಬೇಕೆಂದು ಹೋರಾಟ ಕೂಡ ನಡೆಯುತ್ತಿತ್ತು.
ಈ ಹಿಂದೆ ಬಳ್ಳಾರಿ ಜಿಲ್ಲೆಯ ಕಂದಾಯ ವ್ಯಾಪ್ತಿಗೆ ಒಳಪಟ್ಟಿದ್ದ ಹರಪನಹಳ್ಳಿ ತಾಲ್ಲೂಕನ್ನ ಜಿಲ್ಲೆಗಳ ಪುನರ್ ವಿಂಗಡಣೆ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯ ಕಂದಾಯ ವ್ಯಾಪ್ತಿಯಲ್ಲಿ ತರಲಾಗಿರುತ್ತದೆ.

ಆದರೆ, ಹರಪನಹಳ್ಳಿ ತಾಲ್ಲೂಕು ಬಹಳ ಹಿಂದುಳಿದ ತಾಲ್ಲೂಕು ಎಂದು ಸದರಿ ತಾಲ್ಲೂಕನ್ನು ಈ ಹಿಂದೆ ಇದ್ದಂತೆ ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಸೇರಿಸಿ, ಅನುಚ್ಛೇದ 371ಜೆ ಸೌಲಭ್ಯಗಳನ್ನು ಸದರಿ ತಾಲ್ಲೂಕಿಗೂ ವಿಸ್ತರಿಸುವಂತೆ ಹಲವು ಮನವಿಗಳು ಸ್ವೀಕೃತವಾಗಿರುವ ಹಿನ್ನೆಲೆಯಲ್ಲಿ ಹರಪನಹಳ್ಳಿ ತಾಲ್ಲೂಕನ್ನು ಈ ಹಿಂದೆ ಇದ್ದಂತೆ ಬಳ್ಳಾರಿ ಜಿಲ್ಲೆ ವ್ಯಾಪ್ತಿಯಡಿಯಲ್ಲಿ ತರಲು ಸರ್ಕಾರವು ತೀರ್ಮಾನಿಸಿತು.

ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರಿಸಲು ಕರ್ನಾಟಕ ಸರ್ಕಾರ ಡಿಸೆಂಬರ್ 24, 2018ರಂದು ಆದೇಶ ಹೊರಡಿಸಿತ್ತು. ಈ ಆದೇಶದ ಬಳಿಕ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಸ್ಥಾನಗಳನ್ನು ಬಳ್ಳಾರಿಗೆ ವರ್ಗಾವಣೆ ಮಾಡಲಾಗಿದೆ.
ಭಾರತೀಯ ಸಂವಿಧಾನಕ್ಕೆ ತರಲಾದ ತಿದ್ದುಪಡಿಯ ಅನುಚ್ಛೇದ 371ಜೆ ಸೇರ್ಪಡೆಯೊಂದಿಗೆ ಹೈದ್ರಾಬಾದ್ ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿ ಬರುವಂಥ ಬೀದರ್, ಕಲ್ಬುರ್ಗಿ, ರಾಯಚೂರು, ಬಳ್ಳಾರಿ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳು ಅನುಚ್ಛೇದ 371ಜೆ ನಂತೆ ವಿಶೇಷ ಸ್ಥಾನಮಾನ ಹೊಂದಿದ್ದು, ಈ ಜಿಲ್ಲೆಗಳ ಆಡಳಿತ ವ್ಯಾಪ್ತಿಯಲ್ಲಿ ಬರುವಂಥ ತಾಲ್ಲೂಕು, ಹೋಬಳಿ ಮತ್ತು ಗ್ರಾಮಗಳು ಅನುಚ್ಚೇದ 371ಜೆ ಯ ಸವಲತ್ತುಗಳಿಗೆ ಅರ್ಹತೆ ಹೊಂದಿರುತ್ತದೆ.












Click it and Unblock the Notifications