ಪ್ರೀತಿಸಿದವಳೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದಳು; ಪ್ರೇಮಿ ಸಾವು
ಬಳ್ಳಾರಿ, ಜನವರಿ 22: ಐದು ವರ್ಷಗಳಿಂದ ಪರಸ್ಪರ ಪ್ರೀತಿಸಿದ್ದ ಯುವತಿಯೇ ತನ್ನ ಪ್ರಿಯತಮನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರಿಂದ, ನೋವಿನ ಯಾತನೆ ತಾಳಲಾರದೇ ಪ್ರೇಮಿ ಪರಸಪ್ಪ (35) ಇಂದು ಸಾವನ್ನಪ್ಪಿದ್ದಾನೆ.
ತನ್ನ ಪ್ರೇಯಸಿ ಬೇರೊಬ್ಬ ಯುವಕನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರಿಂದ ಕೋಪಗೊಂಡಿದ್ದ ಪರಸಪ್ಪನು, ತನ್ನ ಪ್ರೇಯಸಿಯ ಮನೆಗೆ ಹೋಗಿ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ಹೋಗಿದ್ದರಿಂದ ಯುವತಿಯೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ.
ಇದೇ 20 ರಂದು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ವಡ್ಡಿನಹಳ್ಳಿಯಲ್ಲಿ ಘಟನೆ ನಡೆದಿದ್ದು, ಪರಸಪ್ಪ ಗಂಭೀರವಾಗಿ ಗಾಯಗೊಂಡು ಎರಡು ದಿನಗಳ ನಂತರ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಅದೇ ಗ್ರಾಮದ ಯುವತಿಯ ಜೊತೆ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದು, ಜಾತಿ ಬೇರೆಯಾದರೂ ಕೂಡ ತನ್ನನ್ನೇ ಮದುವೆಯಾಗುವುದಾಗಿ ಯುವತಿ ಲಕ್ಷ್ಮೀ ಹೇಳಿದ್ದಳು, ಆದರೆ ಏಕಾಏಕಿ ಬೇರೋಬ್ಬ ಯುವಕನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರಿಂದ ಪರಸಪ್ಪ ಜಗಳ ಮಾಡಿದ್ದಾನೆ. ಯುವತಿಯೇ ಪರಸಪ್ಪನ ಮೇಲೆ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿದ್ದಾಳೆ.
ನಂತರ ಗಂಭೀರವಾಗಿ ಗಾಯಗೊಂಡಿದ್ದ ಪರಸಪ್ಪನನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಟ್ಟ ಗಾಯಗಳಿಂದ ನರಕಯಾತನೆ ಅನುಭವಿಸುತ್ತಿದ್ದ ಪರಸಪ್ಪ, ಇಂದು ಬೆಳಗಿನ ಜಾವ ಸಾವನ್ನಪ್ಪಿದ್ದಾನೆ.
ಇಡೀ ಕುಟುಂಬಕ್ಕೆ ಆಸೆರೆಯಾಗಿದ್ದ ಪರಸಪ್ಪ ಇಬ್ಬರು ಸಹೋದರಿಯರನ್ನು ಹಾಗೂ ತಂದೆ, ತಾಯಿಯನ್ನು ಅಗಲಿದ್ದಾನೆ. ಪರಸಪ್ಪನ ಕುಟುಂಬಸ್ಥರು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications