ಬಳ್ಳಾರಿಯಲ್ಲಿ ಪರ್ಲ್ಸ್ ವರ್ಲ್ಡ್ ಕಂಪನಿಯಿಂದ ವಂಚನೆ, ಹೂಡಿಕೆದಾರರು ಕಂಗಾಲು
ಬಳ್ಳಾರಿ, ಆಗಸ್ಟ್, 25: ಗಣಿನಾಡು ಬಳ್ಳಾರಿಯಲ್ಲಿ ನಡೆದ ಪರ್ಲ್ಸ್ ವರ್ಲ್ಡ್ ಕಂಪನಿಯ ಬಹುಕೋಟಿ ವಂಚನೆ ಪ್ರಕರಣ ಸದ್ಯಕ್ಕೆ ಇರ್ತಥ್ಯವಾಗುವ ಲಕ್ಷಣಗಳು ಕಾಣುತ್ತಿಲ್ಲ. ಈ ಕಂಪನಿಯ ಮಾಲೀಕ ಬಂಧನವಾಗಿ ಹಲವು ದಿನಗಳು ಕಳೆದರೂ ಹೂಡಿಕೆ ಮಾಡಿದ ಠೇವಣಿದಾರರಿಗೆ ಮಾತ್ರ ಹಣ ಹಿಂದಿರುಗಿಲ್ಲ. ಹೀಗಾಗಿ ಹಣ ಹೂಡಿಕೆ ಮಾಡಿದ ಠೇವಣಿದಾರರು ನಿತ್ಯ ಪೊಲೀಸ್ ಠಾಣೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಪರ್ಲ್ಸ್ ವರ್ಲ್ಡ್ ಕಂಪನಿಯಿಂದ ವಂಚನೆ
ಬಳ್ಳಾರಿ ನಗರ, ಹೊಸಪೇಟೆ ಸೇರಿದಂತೆ ಆಂಧ್ರದ ರಾಜಮಂಡ್ರಿಯಲ್ಲಿ ಪರ್ಲ್ಸ್ ವರ್ಲ್ಡ್ ಕಂಪನಿ ಆರಂಭ ಮಾಡಿದ್ದರು. ಕಂಪನಿ ಆರಭಿಸಿದ್ದ ದೂಡಂ ರವಿ 400ಕ್ಕೂ ಹೆಚ್ಚು ಠೇವಣಿದಾರರಿಂದ ಲಕ್ಷ ಲಕ್ಷ ಹಣ ಸಂಗ್ರಹಿಸಿ ಕಳೆದ ನಾಲ್ಕು ತಿಂಗಳಿನಿಂದ ಪರಾರಿ ಆಗಿದ್ದ. ಕೋಟಿ ಕೋಟಿ ವಂಚಿಸಿದ್ದ ದೂಡಂ ರವಿ ವಿರುದ್ದ ಬಳ್ಳಾರಿಯ ಗಾಂಧಿನಗರ ಹಾಗೂ ಹೊಸಪೇಟೆ ನಗರ ಠಾಣೆ, ಆಂಧ್ರದ ರಾಜಮಂಡ್ರಿಯ ಒನ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆಂಧ್ರದ ರಾಜಮಂಡ್ರಿಯಲ್ಲಿ ಶರಣಾಗಿದ್ದ ಆರೋಪಿ ದೂಡಂ ರವಿಯನ್ನು ಬಳ್ಳಾರಿಯ ಗಾಂಧಿನಗರ ಠಾಣೆಯ ಪೊಲೀಸರು ಕರೆತಂದು ವಿಚಾರಣೆ ನಡೆಸಿದ್ದಾರೆ. ಆದರೆ, ಇದುವರೆಗೂ ಆರೋಪಿಯಿಂದ ಯಾವುದೇ ಹಣ ಸಂಗ್ರಹಿಸಿಲ್ಲ. ಇತ್ತ ಹಣ ಹೂಡಿಕೆ ಮಾಡಿದ ನೂರಾರು ಜನರು ನಿತ್ಯ ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ನಿತ್ಯ ಠಾಣೆಗೆ ಅಲೆದಾಡಿದರೂ ಹೂಡಿದ ಹಣ ಸಿಗುತ್ತಿಲ್ಲ ಎಂದು ಅಲ್ಲಿನ ಜನರು ಅಸಮಾಧಾನ ಹೊರಹಾಕಿದ್ದಾರೆ.

ಬಳ್ಳಾರಿಯಲ್ಲಿ ಠೇವಣಿದಾರರ ಅಳಲು
ಆರೋಪಿಯನ್ನ ಮಂಪರು ಪರೀಕ್ಷೆಗೆ ಒಳಪಡಿಸುವ ಮೂಲಕ ಹಣ ವಾಪಾಸ್ ಕೊಡಿಸಬೇಕು ಎಂದು ಹೂಡಿಕೆದಾರರು ಅಳಲು ತೋಡಿಕೊಂಡಿದ್ದಾರೆ. ಕಡಿಮೆ ಅವಧಿಗೆ ಹೆಚ್ಚಿನ ಲಾಭ ಸಿಗುತ್ತದೆ ಅನ್ನುವ ಕಾರಣದಿಂದ ನೂರಾರು ಜನರು ಪರ್ಲ್ಸ್ ವರ್ಲ್ಡ್ ಕಂಪನಿಗೆ ಲಕ್ಷ ಲಕ್ಷ ಹಣ ಹೂಡಿಕೆ ಮಾಡಿದ್ದಾರೆ. ನೂರಾರು ಮಹಿಳೆಯರು ಸಾಲ ಮಾಡಿ ಹಣ ಹೂಡಿಕೆ ಮಾಡಿದ್ದರು. ಇನ್ನೂ ಕೆಲವರು ಬಂಗಾರವನ್ನು ಒತ್ತೆಯಿಟ್ಟು ಹೂಡಿಕೆ ಮಾಡಿದ್ದಾರೆ. ಆದರೆ ಈಗ ಇದ್ಯಾವುದು ಕೈಗೆ ಸಿಗದಂತೆ ಬಡ್ಡಿ ಸಾಲ ಬೆಳೆಯುತ್ತಿದೆ. ಇತ್ತ ಹೂಡಿಕೆ ಮಾಡಿದ ಹಣವೂ ಸಿಗುತ್ತಿಲ್ಲ. ಇದರಿಂದ ಬೇಸತ್ತ ಠೇವಣಿದಾರರು ನಿತ್ಯ ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದಾರೆ. ಪ್ರತಿನಿತ್ಯವೂ ಠಾಣೆಗೆ ಹೋಗುವುದು, ಮತ್ತೆ ವಾಪಾಸ್ ಬರುವುದು ಆಗಿಬಿಟ್ಟಿದೆ. ಇದುವರೆಗೆ ನಾವು ಹೂಡಿಕೆ ಮಾಡಿದ ಹಣ ವಾಪಾಸ್ ಸಿಗುತ್ತಿಲ್ಲ ಎಂದು ಮಹಿಳೆಯರು ಅಸಮಾಧಾನ ಹೊರಹಾಕಿದರು. ಕಳೆದ ನಾಲ್ಕು ತಿಂಗಳಿನಿಂದಲೂ ಠೇವಣಿದಾರರು ಠಾಣೆಗೆ ಅಲೆದಾಡಿದರೂ ಕೂಡ ಪ್ರಯೋಜನವಾಗಿಲ್ಲ. ಹೀಗಾಗಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ಠೇವಣಿದಾರರು ತೀರ್ಮಾನ ಮಾಡಿದ್ದಾರೆ.

ಬಹುಕೋಟಿ ವಂಚನೆ ಮಾಡಿದ ಆರೋಪಿಯಿಂದ ಬಳ್ಳಾರಿಯ ಗಾಂಧಿನಗರ ಠಾಣೆಯ ಪೊಲೀಸರು ಇದುವರೆಗೆ ಒಂದು ರೂಪಾಯಿಯನ್ನೂ ಜಪ್ತಿ ಮಾಡದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಹೂಡಿಕೆದಾರರು ಅಸಮಾಧಾನ ಹೊರಹಾಕಿದರು.












Click it and Unblock the Notifications