ವಿಜಯನಗರ ಜಿಲ್ಲೆ ರಚನೆ; ಪರ, ವಿರೋಧ ಆಕ್ಷೇಪಣೆಗಳು ಎಷ್ಟು?
ಬಳ್ಳಾರಿ, ಫೆಬ್ರವರಿ 7: ಕರ್ನಾಟಕ ಸರ್ಕಾರ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯಾಗಿ ಮಾಡಲು ಕರಡು ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು.
ಬಳ್ಳಾರಿ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಈ ಕುರಿತು ಮಾಹಿತಿ ನೀಡಿದ್ದಾರೆ. "ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜನಯಗರ ಜಿಲ್ಲೆ ರಚನೆ ಅಧಿಸೂಚನೆಗೆ ಸಂಬಂಧಿಸಿದಂತೆ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಷರಾದೊಂದಿಗೆ ಪ್ರಾದೇಶಿಕ ಆಯುಕ್ತರ ಮುಖಾಂತರ ಸರ್ಕಾರಕ್ಕೆ ಸಲ್ಲಿಸಲಾಗಿದೆ" ಎಂದು ಹೇಳಿದ್ದಾರೆ.
"ಜಿಲ್ಲೆ ವಿಭಜಿಸಿ ಹೊಸದಾಗಿ ವಿಜಯನಗರ ಜಿಲ್ಲೆ ರಚನೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಜನವರಿ 13ರವರೆಗೆ ಆಕ್ಷೇಪಣೆಗಳನ್ನು ಕಾಲಾವಕಾಶ ನೀಡಲಾಗಿತ್ತು. ಜಿಲ್ಲೆ ವಿಭಜಿಸಿ ಹೊಸ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಪರ ಮತ್ತು ವಿರೋಧ ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು" ಎಂದರು.

"4,739 ಆಕ್ಷೇಪಣೆಗಳು ಬಳ್ಳಾರಿ ಜಿಲ್ಲೆಯನ್ನು ವಿರೋಧಿಸಿ ಸ್ವೀಕೃತವಾಗಿದ್ದವು. ಹಾಗೆಯೇ ಜಿಲ್ಲೆ ವಿಭಜನೆಯೊಂದಿಗೆ ಆಡಳಿತಾತ್ಮಕ ದೃಷ್ಟಿಯಿಂದ ವಿಜಯನಗರ ಜಿಲ್ಲೆಯಾಗಬೇಕೆಂದು ಸರಕಾರದ ಅಧಿಸೂಚನೆಯನ್ನು ಬೆಂಬಲಿಸಿ ಸುಮಾರು 10,513 ಬೆಂಬಲಿತ ಪತ್ರಗಳು ಸ್ವೀಕೃತವಾಗಿವೆ" ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ಭೂಕಂದಾಯ ಅಧಿನಿಯಮ 1964ರ ಕಲಂ 6 ರಡಿ ಸ್ವೀಕೃತವಾದ ಎಲ್ಲಾ ಸಲಹೆ ಮತ್ತು ಆಕ್ಷೇಪಣೆಗಳನ್ನು ಕರ್ನಾಟಕ ಭೂಕಂದಾಯ ನಿಯಮ 1966ರ ನಿಯಮ 5ರ ಅಡಿ ಪರಿಶೀಲಿಸಿ ಸಮಗ್ರವಾಗಿ ಷರಾ ನಮೂದಿಸಿ ಕಲಬುರಗಿ ಪ್ರಾದೇಶಿಕ ಆಯುಕ್ತರು ಸರಕಾರಕ್ಕೆ ಸಲ್ಲಿಸಿದ್ದಾರೆ.
ಜಿಲ್ಲೆ ವಿಭಜನೆ; ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ಹೊಸಪೇಟೆ, ಹರಪನಹಳ್ಳಿ, ಹೂವಿನ ಹಡಗಲಿ, ಹಗರಿ ಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಗಿ ತಾಲೂಕುಗಳನ್ನು ಸೇರಿಸಿ ವಿಜಯನಗರ ಜಿಲ್ಲೆ ರಚನೆ ಮಾಡಲಾಗುತ್ತದೆ.
ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ, ಸಿರಗುಪ್ಪ, ಸಂಡೂರು, ಕಂಪ್ಲಿ ಮತ್ತು ಕುರಗೋಡು ತಾಲೂಕುಗಳು ಉಳಿಯಲಿವೆ. ಬಳ್ಳಾರಿ ಜಿಲ್ಲಾ ವಿಭಜನೆಯನ್ನು ಕೆಲವು ರಾಜಕೀಯ ನಾಯಕರು ಸೇರಿದಂತೆ ಸಂಘ, ಸಂಸ್ಥೆಗಳು ವಿರೋಧಿಸುತ್ತಿವೆ.
ಸಚಿವರಾದ ಆನಂದ್ ಸಿಂಗ್ ವಿಜಯನಗರ ಜಿಲ್ಲೆ ರಚನೆಗೆ ಒತ್ತಾಯ ಮಾಡಿದ್ದರು. 2019ರ ಸೆಪ್ಟೆಂಬರ್ನಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೊಸ ಜಿಲ್ಲೆ ರಚನೆ ಘೋಷಣೆ ಮಾಡಿದ್ದರು. ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರ ಅಸ್ತಿತ್ವಕ್ಕೆ ಬರಲಿದೆ.












Click it and Unblock the Notifications