ಮದುವೆಯಲ್ಲಿ ವಿಪತ್ತು ನಿರ್ವಹಣೆ ಕಾಯ್ದೆ ಉಲ್ಲಂಘನೆ; ಮಾಜಿ ಸಚಿವ, ಮಗನ ಮೇಲೆ ಎಫ್ಐಆರ್
ಬಳ್ಳಾರಿ, ಜೂನ್ 17: ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ನೂರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಿ, ಮದುವೆ ಕಾರ್ಯಕ್ರಮ ನಡೆಸಿದ್ದ ಕಾರಣಕ್ಕೆ ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ ಹಾಗೂ ಅವರ ಪುತ್ರನ ಮೇಲೆ ಎಫ್ ಐಆರ್ ದಾಖಲಿಸಲು ಆದೇಶಿಸಲಾಗಿದೆ.
ಬಳ್ಳಾರಿಯ ಹರಪ್ಪನಹಳ್ಳಿ ತಾಲ್ಲೂಕಿನ ಲಕ್ಷ್ಮೀಪುರದಲ್ಲಿ ಜೂನ್ 15ರಂದು ನಡೆದಿದ್ದ ಪರಮೇಶ್ವರ ನಾಯ್ಕ್ ಅವರ ಮಗನ ಮದುವೆಯಲ್ಲಿ ವಿಪತ್ತು ನಿರ್ವಹಣೆ ಕಾಯ್ದೆ 2020 ಉಲ್ಲಂಘನೆಯಾಗಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ ಹಾಗೂ ಅವರ ಪುತ್ರ ಭರತ್ ನಾಯ್ಕ್ ಮೇಲೆ ಇಂದು ಅರಸಿಕೆರೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪರಮೇಶ್ವರ ನಾಯ್ಕ್ ಮಗನ ಮದುವೆ; ಕ್ವಾರಂಟೈನ್ ಕೂಡ ಉಲ್ಲಂಘನೆಯಾಗಿದೆಯಾ?
ಮದುವೆಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ, ಆರೋಗ್ಯ ಸಚಿವ ಶ್ರೀರಾಮುಲು, ಕಾಂಗ್ರೆಸ್ ನಾಯಕ ಡಾ ಜಿ ಪರಮೇಶ್ವರ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ವೇಳೆ ಸಚಿವರು ಹಾಗೂ ರಾಜಕೀಯ ನಾಯಕರು ಸಹ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಬಹುತೇಕರು ಮಾಸ್ಕ್ ಧರಿಸಿರಲಿಲ್ಲ. ಜೊತೆಗೆ ಮದುವೆ ಕಾರ್ಯಕ್ರಮದಲ್ಲಿ ಜನಜಂಗುಳಿ ಸೇರಿತ್ತು.
ಹರಪ್ಪನಹಳ್ಳಿ ಕೋರ್ಟ್ನಲ್ಲಿ ತಹಶೀಲ್ದಾರ್ ನಾಗವೇಣಿ ಅವರು ನೀಡಿದ್ದ ದೂರನ್ನು ಆಧರಿಸಿದ ಕೋರ್ಟ್, ಮಾಜಿ ಸಚಿವರ ಮೇಲೆ ದೂರು ದಾಖಲಿಸುವಂತೆ ಅದೇಶಿಸಿದೆ. ಈ ಮೇರೆಗೆ ಇಂದು ಮಾಜಿ ಸಚಿವ ಪಿ.ಟಿ ಪರಮೇಶ್ವರ ನಾಯ್ಕ್ ಹಾಗೂ ಪುತ್ರ ಭರತ್ ನಾಯ್ಕ್ ಮೇಲೆ ಐಪಿಸಿ 269, 270, 271, 336ರ ಪ್ರಕಾರ ದೂರು ದಾಖಲಾಗಿದೆ.