ಕರ್ನಾಟಕದ ಜೈಲುಗಳಲ್ಲಿ 40 ದಿನ ಕಳೆದಿದ್ದ ಏಕನಾಥ್ ಶಿಂಧೆ!
ಬಳ್ಳಾರಿ, ಜೂನ್ 30; ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಉದ್ಧವ್ ಠಾಕ್ರೆ ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದ ಶಿಂಧೆ ಮುಖ್ಯಮಂತ್ರಿಯಾಗಿದ್ದಾರೆ.
ಏಕನಾಥ್ ಶಿಂಧೆಗೆ ಕರ್ನಾಟಕದ ನಂಟಿದೆ. ಬಳ್ಳಾರಿ, ಬೆಳಗಾವಿಯ ಜೈಲುಗಳಲ್ಲಿ 40 ದಿನ ಏಕನಾಥ್ ಶಿಂಧೆ ಇದ್ದರು. ಅವರ ರಾಜಕೀಯ ಜೀವನಕ್ಕೆ ತಿರುವು ಕೊಟ್ಟಿದ್ದು ಬೆಳಗಾವಿನಲ್ಲಿ ನಡೆಸಿದ ಹೋರಾಟ.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ 1986ರಲ್ಲಿ ಬೆಳಗಾವಿ ನಗರದಲ್ಲಿ ನಡೆದ ಮಹಾದಂಗೆಯಲ್ಲಿ ಪಾಲ್ಗೊಂಡಿದ್ದ ಏಕನಾಥ್ ಶಿಂಧೆ ಬಳಿಕ ರಾಜಕೀಯವಾಗಿ ಬೆಳೆದರು. ಈಗ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿದ್ದಾರೆ.

ಬೆಳಗಾವಿಯಲ್ಲಿ ಹಿಂಸಾಚಾರ; 1986ರ ಜೂನ್ 1ರಂದು ಶಿವಸೇನೆ ಹಾಗೂ ಎಂಇಎಸ್ ಕಾರ್ಯಕರ್ತರು 'ಸೀಮಾ ಲಡಾಯಿ' (ಗಡಿ ಸಂಘರ್ಷ)ಕ್ಕೆ ಕರೆ ನೀಡಿದ್ದರು. ನೂರಾರು ಜನರು ಬೆಳಗಾವಿಗೆ ನುಗ್ಗಿದರು. ಆಗ ಏಕನಾಥ್ ಶಿಂಧೆ ಸಹ ಬೆಳಗಾವಿಗೆ ನುಗ್ಗಿದ್ದರು. ಬಳಿಕ ಜೈಲು ಸೇರಿದ್ದರು.
ಆಗ ಶಿವಸೇನೆಯಲ್ಲಿದ್ದ ಈಗ ಎನ್ಸಿಪಿಯಲ್ಲಿರುವ ಛಗನ್ ಭುಜಬಳ ಬೆಂಬಲಿಗರಾಗಿದ್ದ ಏಕನಾಥ್ ಶಿಂಧೆ 'ಸೀಮಾ ಲಡಾಯಿ'ಯಲ್ಲಿ ಪಾಲ್ಗೊಂಡಿದ್ದರು. ಬೆಳಗಾವಿಯಲ್ಲಿ ಆಗ ಹಿಂಸಾಚಾರ ಮಾಡಿದ್ದರು. ಪೊಲೀಸ್ ಠಾಣೆ, ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದ್ದರು.

ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಹಿಂಸಾಚಾರ ತಡೆಯಲು ಗೋಲಿಬಾರ್ಗೆ ಕರೆ ನೀಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿದ್ದ ಕೆ. ನಾರಾಯಣ್ ನೇತೃತ್ವದಲ್ಲಿ ಗೋಲಿಬಾರ್ ನಡೆದಿತ್ತು. 9 ಮರಾಠಿಗರು ಸ್ಥಳದಲ್ಲೇ ಮೃತಪಟ್ಟಿದ್ದರು.
ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಏಕನಾಥ್ ಶಿಂಧೆ ಬಂಧಿಸಲಾಗಿತ್ತು. 40 ದಿನಗಳ ಕಾಲ ಅವರನ್ನು ಬೆಳಗಾವಿ, ಬಳ್ಳಾರಿ ಜೈಲಿನಲ್ಲಿ ಇಡಲಾಗಿತ್ತು. ಆ ಗೋಲಿಬಾರ್ ಘಟನೆ ಸ್ಮರಣಾರ್ಥ ಜೂನ್ 1ರಂದು ಈಗಲೂ ಎಂಇಎಸ್ ಮುಖಂಡರು ಹುತಾತ್ಮ ದಿನ ಆಚರಿಸುತ್ತಾರೆ.
ಬೆಳಗಾವಿಯಿಂದ ಬಳ್ಳಾರಿಗೆ; ಏಕನಾಥ್ ಶಿಂಧೆ ಬಂಧಿಸಿ ಮೊದಲು ಬೆಳಗಾವಿಯ ಹಿಂಡಲಗಾ ಜೈಲಿಗೆ ಕಳಿಸಲಾಗಿತ್ತು. ಬಳಿಕ ಅಲ್ಲಿ ಜಾಗ ಸಾಕಾಗದ ಕಾರಣ ಬಳ್ಳಾರಿ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿತ್ತು. ಈ ಹೋರಾಟದ ಬಳಿಕ ರಾಜಕೀಯವಾಗಿಯೂ ಬೆಳೆದ ಏಕನಾಥ್ ಶಿಂಧೆ ಈಗ ಮುಖ್ಯಮಂತ್ರಿ ಹುದ್ದೆಗೇರಿದ್ದಾರೆ.
ಬೆಳಗಾವಿ ಸೇರಿದಂತೆ 865 ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ದೊಡ್ಡ ಹೋರಾಟವೇ ನಡೆದಿತ್ತು. ಆಗ ಬೆಳಗಾವಿಗೆ ನುಗ್ಗಿದ ಮರಾಠಿಗರಲ್ಲಿ ಏಕನಾಥ್ ಶಿಂಧೆ ಸಹ ಒಬ್ಬರು. ಈಗ ಅವರು ಮುಖ್ಯಮಂತ್ರಿಯಾದ ಬಳಿಕ ಕರ್ನಾಟಕದ ನಂಟು ಪತ್ತೆಯಾಗಿದೆ.












Click it and Unblock the Notifications