ಯುವತಿ ಕಥೆ: 'ಕೊರೊನಾಕ್ಕಿಂತಲೂ ಸುದ್ದಿಗಳೇ ನಮ್ಮ ಜೀವ ಹಿಂಡಿದವು'
ಬಳ್ಳಾರಿ, ಏಪ್ರಿಲ್ 24: "ಕೊರೊನಾಕ್ಕಿಂತಲೂ ಹೆಚ್ಚಾಗಿ ಸುಳ್ಳುಸುದ್ದಿಗಳೇ ನಮ್ಮ ಜೀವ ಹಿಂಡಿದ್ದವು, ಮುಂದೆ ನಮ್ಮ ಪರಿಸ್ಥಿತಿ ಹೆಂಗೇ ಎಂದು ನೆನಪಿಸಿಕೊಂಡು ಈ ಕೊರೊನಾಕ್ಕಿಂತಲೂ ಹೆಚ್ಚು ಭಯಪಟ್ಟಿದ್ದೇವು. ಮತ್ತೊಂದೆಡೆ ನಮ್ಮ ಕುಟುಂಬದ ಫೋಟೋ ಹರಿಬಿಟ್ಟು ಸುಳ್ಳು ವದಂತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ನಮ್ಮನ್ನು ಕಂಗೆಡಿಸಿತ್ತು.." ಹೀಗೆ ಹೇಳಿದ್ದು
ಕೋವಿಡ್-19 ನಿಂದ ಗುಣಮುಖರಾಗಿ ಮನೆಗೆ ಹೋಗಲು ನಗುಮೊಗದೊಂದಿಗೆ ಅಪ್ಪ ಮತ್ತು ಚಿಕ್ಕಮ್ಮನೊಂದಿಗೆ ಸಿದ್ಧಳಾಗಿ, ಬಳ್ಳಾರಿ ಜಿಲ್ಲಾಸ್ಪತ್ರೆಯ ತುರ್ತುಚಿಕಿತ್ಸಾ ಘಟಕದೊಳಗೆ ನಿಂತಿದ್ದ 26 ವಯಸ್ಸಿನ ಪಿ-91 ಯುವತಿ ವಿವರಿಸುವಾಗ ಮಾತು ಅರ್ಧಕ್ಕೆ ನಿಂತಿತು.
ತಮ್ಮ ನೋವಿನ ಸಮಯವನ್ನು ವಿವರಿಸುವಾಗ ಗದ್ಗದಿತರಾಗಿ ಮತ್ತು ಸ್ವಲ್ಪ ಹೊತ್ತಿನ ಸುಧಾರಿಸಿಕೊಂಡು ಅಪ್ಪ ಹಾಗೂ ಚಿಕ್ಕಮ್ಮನೆಡೆ ಒಮ್ಮೆ ನೋಡಿ, ಎದುರಿಗೆ ನಿಂತಿದ್ದ ಜಿಲ್ಲಾ ಶಸ್ತ್ರಚಿಕಿತ್ಸಕ ಎನ್.ಬಸರೆಡ್ಡಿ ಹಾಗೂ ಡಿಎಚ್ಒ ಡಾ.ಜನಾರ್ಧನ್ ಅವರೆಡೆಗೆ ಧನ್ಯತಾ ಭಾವದಿಂದ ನೋಡುತ್ತಲೇ ಮತ್ತೆ ಮಾತಿಗಿಳಿದಳು. "ಕೊರೊನಾ ವೈರಸ್ ಇದೇ ಅಂತ ಗೊತ್ತಿರಲಿಲ್ಲ.
ಮಾ.19 ರಂದು ಬೆಂಗಳೂರಿಗೆ ಹೋಗಿ ಮರುದಿನ ಬಂದಿದ್ದ ನಮ್ಮ ತಂದೆಗೆ ಮೊದಲು ಜ್ವರ ಬಂದಿತು. ನಂತರ ನಮ್ಮ ತಾಯಿಗೆ, ಇದಾದ ನಂತರ ತಮ್ಮನಿಗೆ, ನಂತರ ನನಗೆ ಬಂತು. ಹೊಸಪೇಟೆಯ 100 ಹಾಸಿಗೆ ಆಸ್ಪತ್ರೆಗೆ ಬಂದು ತೋರಿಸಿದೇವು ಮತ್ತು ವೈದ್ಯರಿಗೆ ನಮ್ಮ ತಂದೆಯ ಟ್ರಾವೆಲ್ ಹಿಸ್ಟರಿ ತಿಳಿಸಿದೆವು. ಮಾ.28 ರಂದು ಸಂಜೆ 5.30 ಕ್ಕೆ ಹೊಸಪೇಟೆಯಿಂದ ಹೊರಟು ಬಳ್ಳಾರಿ ಜಿಲ್ಲಾಸ್ಪತ್ರೆಗೆ ರಾತ್ರಿ 8.30 ಕ್ಕೆ ಸೇರಿದೆವು."

ವೈದ್ಯರ ಬಗ್ಗೆ ಅಭಿಮಾನ ಮತ್ತು ಧನ್ಯತಾ ಭಾವ
ಕೊರೊನಾ ಪಾಸಿಟಿವ್ ಅಂತ ವರದಿ ಬಂದಾಗ ಮೊದಲಿಗೆ ಭಯ ಇತ್ತು. ನಂತರ ಎಲ್ಲ ಭಯವನ್ನು ಹೊಗಲಾಡಿಸಿದ್ದು, ಫಿಜಿಶಿಯನ್ ಗಳಾದ ಡಾ.ರಾಮಕೃಷ್ಣ ಮತ್ತು ಡಾ.ರಾಮಲಿಂಗಾರೆಡ್ಡಿ ಅವರು. ವೈದ್ಯರು, ಫಿಜಿಶಿಯನ್ ಗಳು ನಮಗೆ ಬಂದಿರುವ ಕೊರೊನಾಗೆ ಚಿಕಿತ್ಸೆ ನೀಡುವುದರ ಜತೆಗೆ ನಮಗೆ ಮಾನಸಿಕವಾಗಿಯೂ ಚಿಕಿತ್ಸೆ ನೀಡಿದರು ಎಂದು ಪಿ-91 ಯುವತಿ ಹೇಳಿದರು.
''ಡಾ.ರಾಮಕೃಷ್ಣ, ಡಾ.ರಾಮಲಿಂಗಾರೆಡ್ಡಿ ಅವರಂತೂ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಬಂದು ನಮ್ಮ ಆರೋಗ್ಯದಲ್ಲಿನ ಬದಲಾವಣೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತ, ಅದಕ್ಕೆ ತಕ್ಕ ಚಿಕಿತ್ಸೆ ನೀಡುತ್ತಿದ್ದರು. ನಮ್ಮ ಚಿಕ್ಕಮ್ಮನಿಗೆ ಡಯಾಬಿಟಿಸ್ ಇದ್ದು, ಅವರ ಆರೋಗ್ಯದ ಬಗ್ಗೆಯೂ ವಿಶೇಷವಾಗಿ ಗಮನಿಸಿದ್ದರು'' ಎಂದು ಇಬ್ಬರು ವೈದ್ಯರ ಬಗೆಗಿದ ಅಭಿಮಾನ ಮತ್ತು ಧನ್ಯತಾ ಭಾವವನ್ನು ಪರಿಪರಿಯಾಗಿ ವರ್ಣಿಸಿದರು ಆ ಕೊರೊನಾ ಗೆದ್ದು ಬಂದ ಯುವತಿ.

ನಿಮ್ಮೊಂದಿಗೆ ಜಿಲ್ಲಾಡಳಿತವಿದೆ ಎಂದು ಧೈರ್ಯ ತುಂಬಿದರು
''ಇಂದು ಸಾವನ್ನು ಗೆದ್ದು ಬಂದು ತಮ್ಮೆದುರು ಬಂದು ನಿಂತಿರುವುದಕ್ಕೆ ಡಾ.ರಾಮಕೃಷ್ಣ, ಡಾ.ರಾಮಲಿಂಗಾರೆಡ್ಡಿ, ಡಾ.ಲಿಂಗರಾಜ, ಡಾ.ಯೋಗಾನಂದ, ಡಾ.ಸುನೀಲ್, ಡಾ.ಉಮಾ, ಡಾ.ವಿನಯ್, ಡಾ.ಕೋಟ್ರೇಶ್ ಕಾರಣರು. ಅವರ ಋಣವನ್ನು ನಾವೆಂದು ತೀರಿಸುತ್ತೇವೋ ಗೊತ್ತಿಲ್ಲ'' ಅಂತ ಭಾವುಕರಾದರು ಹೊಸಪೇಟೆಯ ಗುಜರಿ ಅಂಗಡಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದ ಗುಣಮುಖರಾಗಿರುವ ಪಿ-89 ಅವರು.
ಜಿಲ್ಲಾ ಶಸ್ತ್ರಚಿಕಿತ್ಸಕ ಎನ್.ಬಸರೆಡ್ಡಿ ಅವರು ಎರಡು ದಿನಗಳಿಗೊಮ್ಮೆ ಬಂದು ನಮ್ಮ ವರದಿಯನ್ನು ಪರಿಶೀಲಿಸುತ್ತಿದ್ದರು. ನಿಮಗೆ ಏನೂ ಆಗಲ್ಲ, ಧೈರ್ಯದಿಂದಿರಿ. ನಿಮ್ಮೊಂದಿಗೆ ಇಡೀ ಜಿಲ್ಲಾಡಳಿತವೇ ಇದೇ ಅಂತ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬುತ್ತಿದ್ದರು ಎಂದು ಗುಣಮುಖರಾಗಿರುವ ಪಿ-89, ಪಿ-91 ಮತ್ತು ಪಿ-141 ಹೇಳಿದರು. ಈ ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್ ಗಳು ಹಾಗೂ ಸಿಬ್ಬಂದಿ ನಮ್ಮನ್ನು ಚೆನ್ನಾಗಿ ನೋಡಿಕೊಂಡರು ಎಂದರು.

ವೈದ್ಯರೇ ನಮ್ಮ ತಂದೆಗೆ ಮಾನಸಿಕ ಧೈರ್ಯ ನೀಡದರು
ಈ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿನಿಂದ ಇಂದಿನವರೆಗೆ ನಮಗೆ ಅತ್ಯಂತ ಗುಣಮಟ್ಟದ ಆಹಾರ ಒದಗಿಸಿದ್ದಾರೆ ಮತ್ತು ಆಸ್ಪತ್ರೆಯಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಇದ್ದು, ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಕೊರೊನಾದಿಂದ ಗುಣಮುಖರಾಗಿರುವ ಪಿ-89, ಪಿ-91 ಮತ್ತು ಪಿ-141 ಹೇಳಿದರು.
ಪ್ರತಿನಿತ್ಯ ಬೆಳಗ್ಗೆ 7.30 ಕ್ಕೆ ಹಾಲು ಮತ್ತು ಬಿಸ್ಕತ್, ಬೆಳಗ್ಗೆ 9 ಕ್ಕೆ ಲಘು ಉಪಹಾರ, ಮಧ್ಯಾಹ್ನ 1 ರಿಂದ 1.30 ರೊಳಗೆ ಊಟ, ಸಂಜೆ 4ಕ್ಕೆ ಟೀ, ಗ್ರೀನ್ ಟೀ ಮತ್ತು ರಾತ್ರಿ ಸರಿಯಾದ ಸಮಯಕ್ಕೆ ಊಟ ಒದಗಿಸುತ್ತಿದ್ದರು. ಹಣ್ಣು-ಹಂಪಲು ಕೂಡ ನೀಡುತ್ತಿದ್ದರು ಎಂದು ವಿವರಿಸಿದ ಪಿ-91 ಯುವತಿ, ನಮ್ಮ ತಂದೆಗೆ ನಿದ್ದೆ ಬರದೇ ಹಾಗೆಯೇ ಕುಳಿತ ಸಂದರ್ಭದಲ್ಲಿ ವೈದ್ಯರೇ ಬಂದು ಮಾತನಾಡಿಸಿ ಮಾನಸಿಕವಾಗಿ ಧೈರ್ಯ ತುಂಬಿ ಅವರನ್ನು ಅನೇಕ ಬಾರಿ ಮಲಗಿಸಿರುವುದನ್ನು ಪ್ರಸ್ತಾಪಿಸಿದರು.

ಭಯಪಡ್ಬೇಡಿ ಏನು ಆಗಲ್ಲ
ಚಿಕಿತ್ಸೆಗೆ ದಾಖಲಾಗಿ ಐಸೋಲೇಶನ್ ವಾರ್ಡ್ ನಲ್ಲಿದ್ದಾಗ ಮೊಬೈಲ್ ನಲ್ಲಿ ಅನೇಕ ಕಾದಂಬರಿಗಳನ್ನು ಮತ್ತು ಸ್ಟೋರಿಗಳನ್ನು ಓದಿದೆ ಎಂದು ಹೊಸಪೇಟೆಯಲ್ಲಿನ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿರುವ ಪಿ-91 ಯುವತಿ ಹೇಳಿದರೆ, ಅವರ ತಂದೆ ಪಿ-89 ಅವರು ನಮಾಜ್ ಮಾಡಿ ದೇವರ ಧ್ಯಾನದಲ್ಲಿ ತಲ್ಲೀನನಾಗಿರುತ್ತಿದ್ದೆ ಮತ್ತು ಯಾರಾದರೂ ಫೋನ್ ಮಾಡಿದರೆ ಅವರೊಂದಿಗೆ ಮಾತನಾಡುತ್ತಿದ್ದೆ ಎಂದು ವಿವರಿಸಿದರು.
ಕೊರೊನಾ ಬಂದ ತಕ್ಷಣ ನಮ್ಮ ಜೀವನವೇ ಮುಗಿದ ಹೋಯಿತು ಅಂತ ಭಯಪಟ್ಟು ಏನಾದರೂ ಮಾಡಿಕೊಳ್ಳಬೇಡಿ. ಎಲ್ಲ ರೋಗಗಳಂತೆ ಕೊರೊನಾ ಕೂಡ ಒಂದು. ಕೆಮ್ಮು, ಶೀತ, ಜ್ವರದಂತ ಲಕ್ಷಣಗಳಿದ್ದಲ್ಲಿ ಸ್ವತಃ ತಾವೇ ಸರಕಾರಿ ಆಸ್ಪತ್ರೆಗೆ ಬಂದು ತಪಾಸಣೆಗೆ ಒಳಗಾಗಬೇಕು ಎಂದು ಗುಣಮುಖರಾಗಿರುವ ಪಿ-91 ಯುವತಿ ಹೇಳಿದರು.

ವೈದ್ಯರ ಹೃದಯಾಳದ ಮಾತುಗಳು
ಕೊರೊನಾ ಸೊಂಕು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ ಚಿಕಿತ್ಸೆಗೆ ದಾಖಲಾಗುತ್ತಲೇ ನಮ್ಮ ಆಸ್ಪತ್ರೆಯ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿತ್ತು. ಎಲ್ಲ ರೋಗಗಳಂತೆ ಇದು ಒಂದು ರೋಗ ಏನು ಆಗಲ್ಲ, ಇದೊಂದು ನಮಗೆ ಒಲಿದ ಅವಕಾಶ ಅಂತ ಧೈರ್ಯ ತುಂಬಿದ ನಂತರ ನಿಧಾನವಾಗಿ ನಮ್ಮ ಸಿಬ್ಬಂದಿಯ ಆತಂಕ ಮಾಯವಾಗಿ ಹೊಂದಾಣಿಕೆಯಿಂದ ಕೆಲಸ ಮಾಡಲಾರಂಭಿಸಿದರು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಎನ್.ಬಸರೆಡ್ಡಿ ಅವರು ಹೇಳಿದರು.
ಅದೃಷ್ಟವಶಾತ್ ಇದುವರೆಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಜಿಲ್ಲಾಡಳಿತ ನೀಡಿದ ಸಹಾಯ, ಸಹಕಾರವನ್ನು ಅವರು ಇದೇ ಸಂದರ್ಭದಲ್ಲಿ ನೆನಪಿಸಿಕೊಂಡರು. ಇದಕ್ಕೆ ಡಿಎಚ್ಒ ಡಾ.ಜನಾರ್ಧನ್ ಕೂಡ ದನಿಗೂಡಿಸಿದರು.












Click it and Unblock the Notifications