ಪರಮೇಶ್ವರ ನಾಯ್ಕಗೆ ಟಿಕೆಟ್ ಕೊಡಿಸಬ್ಯಾಡ್ರಿ: ಕೊಂಡಯ್ಯಗೆ ಒತ್ತಡ
ಹೂವಿನಹಡಗಲಿ (ಬಳ್ಳಾರಿ), ಮಾರ್ಚ್ 26: ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಪರಿಶಿಷ್ಟ ಜಾತಿ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ವಿರುದ್ಧ ಕಾಂಗ್ರೆಸ್ ನ ಒಂದು ಗುಂಪು ತೊಡೆ ತಟ್ಟಿ ನಿಂತಿದೆ.
'ಈ ಬಾರಿ ಸ್ಥಳೀಯರಿಗೆ ಇಲ್ಲವೇ ಬೇರೆಯವರಿಗೆ ಟಿಕೆಟ್ ನೀಡಿ, ನಿಮ್ಮ ಮಾತು ಕೇಳಿ ಗೆಲ್ಲಿಸಿ, ತಪ್ಪು ಮಾಡಿದ್ದೇವೆ' ಎಂದು ಹಿರಿಯ ಕಾಂಗ್ರೆಸ್ಸಿಗ ಕೆ.ಸಿ.ಕೊಂಡಯ್ಯ ಅವರಿಗೆ ದೊಡ್ಡ ಪ್ರಮಾಣದಲ್ಲಿ ದೂರುಗಳು ಸಲ್ಲಿಕೆ ಆಗಿವೆ.
ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೆ.ಸಿ.ಕೊಂಡಯ್ಯ ಅವರನ್ನು ಭೇಟಿ ಮಾಡಿದ ಮೂಲ ಕಾಂಗ್ರೆಸ್ಸಿನ ಒಂದು ದೊಡ್ಡ ಗುಂಪು, 'ಈ ಬಾರಿ ಪರಮೇಶ್ವರ ನಾಯ್ಕಗೆ ಟಿಕೆಟ್ ನೀಡದಂತೆ ಹೈ ಕಮಾಂಡ್ ಗೆ ಹೇಳಬೇಕು' ಎಂದು ಆಗ್ರಹಿಸುತ್ತಲೇ ಮಾತು ಶುರು ಮಾಡಿದೆ. ಪಕ್ಷದ ಅಸ್ತಿತ್ವ ಉಳಿಯಲಿಕ್ಕಾಗಿ ಬೇರೆಯವರಿಗೆ, ಅದರಲ್ಲೂ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದೆ.

ಪುರಸಭೆ ಸದಸ್ಯ ಪಿ.ಎಂ. ವಿಲ್ಸನ್ ಸ್ವಾಮಿ ಮಾತನಾಡಿ, ಕೊಂಡಯ್ಯ ಅವರೇ ಕಳೆದ ಎರಡು ಚುನಾವಣೆಯಲ್ಲೂ ನಿಮ್ಮ ಮಾತು ಕೇಳಿ, ಪಿ.ಟಿ. ಪರಮೇಶ್ವರನಾಯ್ಕನನ್ನು ಗೆಲ್ಲಿಸಿ ಕೊಟ್ಟಿದ್ದೇವೆ. ಶಾಸಕರಾಗಿ, ಸಚಿವರಾಗಿ, ಮಾಜಿ ಸಚಿವರಾಗಿ ಕ್ಷೇತ್ರಕ್ಕೆ ದೊಡ್ಡ ಕಳಂಕ ತಂದಿದ್ದೇವೆ ಎಂದಿದ್ದಾರೆ.
ಪೊಲೀಸ್ ಅಧಿಕಾರಿ ಅನುಪಮಶೆಣೈ ಅವರನ್ನು ವರ್ಗಾವಣೆ ಮಾಡಿಸಿ, ಮಹಿಳಾ ಅಧಿಕಾರಿ ಇಲಾಖೆಯಲ್ಲೇ ಇರದಂತೆ ಮಾಡಿ, ಕ್ಷೇತ್ರಕ್ಕೆ ಅಪಕೀರ್ತಿ, ಕಳಂಕವನ್ನು ತಂದಿದ್ದಾರೆ. ಮಹಿಳೆಯರ ಶಾಪಕ್ಕೆ ಕ್ಷೇತ್ರ ಗುರಿಯಾಗಿದೆ. ಆದ್ದರಿಂದ ಪಿ.ಟಿ. ಪರಮೇಶ್ವರ ನಾಯ್ಕಗೆ ಈ ಬಾರಿ ಟಿಕೆಟ್ ಕೊಟ್ಟರೆ ಸೋಲು ಖಚಿತ ಎಂದಿದ್ದಾರೆ.
ಕೆ.ಕೆ. ತಾಂಡಾದ ಭೀಮಾನಾಯ್ಕ ಮಾತನಾಡಿ, 50 ವರ್ಷಗಳಿಂದ ನಾನು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ. ಪರಮೇಶ್ವರ ನಾಯ್ಕರ ವರ್ತನೆಯಿಂದ ಪಕ್ಷದ ಬೇರುಮಟ್ಟದ ಕಾರ್ಯಕರ್ತರು ಬೇಸತ್ತಿದ್ದಾರೆ. ಶಾಸಕರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಬಂದಿದೆ ಎಂದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಕಾಂಗ್ರೆಸ್ ಮತ ಬ್ಯಾಂಕ್ ಆಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಲು ಮಧ್ಯವರ್ತಿಗಳು ಭಾರೀ ಪ್ರಮಾಣದ ಹಣ ವಸೂಲಿ ಮಾಡುತ್ತಿದ್ದಾರೆ. ಆ ಎಲ್ಲಾ ಮಧ್ಯವರ್ತಿಗಳು ಶಾಸಕರಿಗೆ ಇಂತಿಷ್ಟು ಇಡಗಂಟು ನೀಡುತ್ತಿದ್ದಾರೆ ಎಂದು ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬಿ.ರಾಘವೇಂದ್ರ, ಲಚ್ಯಾನಾಯ್ಕ, ಕೃಷ್ಣ, ಕೃಷಿಕ ಸಮಾಜದ ಅಧ್ಯಕ್ಷ ಪಿ.ವಿ. ಬಸವರಾಜ ಸೇರಿದಂತೆ ಅನೇಕ ಮುಖಂಡರು ತಮ್ಮ ಆಕ್ರೋಶ ಹೊರಹಾಕಿದರು. ದೂರುಗಳನ್ನು ಆಲಿಸಿದ ಕೆ.ಸಿ.ಕೊಂಡಯ್ಯ, ಈ ಕ್ಷೇತ್ರಕ್ಕೆ ಪಿ.ಟಿ. ಪರಮೇಶ್ವರ ನಾಯ್ಕ ಅವರನ್ನು ನಾನು ಕರೆತಂದಿದ್ದೇ ತಪ್ಪಾಗಿದೆ. ನಿಮ್ಮೆಲ್ಲರ, ಕಾರ್ಯಕರ್ತರ ನೋವನ್ನು - ಅಸಮಾಧಾನವನ್ನು ಹೈಕಮಾಂಡ್ ಗೆ ತಲುಪಿಸುವೆ ಎಂದರು.
ಈ ಸಭೆಯಲ್ಲಿ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಮುಖಂಡರು ಕೋಡಿಹಳ್ಳಿ ಮುದುಕಪ್ಪ, ಶ್ರೀನಿವಾಸ ರೆಡ್ಡಿ, ಕೆಪಿಸಿಸಿ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಲ್. ಕೃಷ್ಣನಾಯ್ಕ, ಪುರಸಭೆ ಸದಸ್ಯ ಕೋಡಿಹಳ್ಳಿ ಕೊಟ್ರೇಶ ಭೀಮಾನಾಯ್ಕ, ರಾಮಚಂದ್ರಪ್ಪ ಇತರರಿದ್ದರು.












Click it and Unblock the Notifications