ನೆಚ್ಚಿನ ನಾಯಕನಿಗೆ ಟಿಕೆಟ್ ಸಿಕ್ಕಿದ್ದಕ್ಕೆ 101 ತೆಂಗಿನಕಾಯಿ ಒಡೆದ ಅಭಿಮಾನಿ
ಬಳ್ಳಾರಿ, ಮೇ 01 : ತಮ್ಮ ನೆಚ್ಚಿನ ನಾಯಕನಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದ್ದಕ್ಕಾಗಿ ಅಭಿಮಾನಿ ಓರ್ವ 101 ತೆಂಗಿನಕಾಯಿ ಒಡೆದು, ಆಂಜನೇಯ ಸ್ವಾಮಿಗೆ ಹರಕೆ ತೀರಿಸಿದ್ದಾರೆ.
ಬಳ್ಳಾರಿ ಮಹಾನಗರ ಪಾಲಿಕೆಯ 29 ನೇ ವಾರ್ಡ್ ಸದಸ್ಯ ಬಂಡಿಹಟ್ಟಿ ನಾಗರಾಜ್, ಬಳ್ಳಾರಿ ಗ್ರಾಮೀಣ ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಬಿ. ನಾಗೇಂದ್ರ ಅವರಿಗೆ ಪಕ್ಷದ ಟಿಕೆಟ್ ನೀಡಿದಲ್ಲಿ 101 ತೆಂಗಿನಕಾಯಿ ಒಡೆಯುವುದಾಗಿ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯ ದೇವರಿಗೆ ಹರಕೆ ಹೊತ್ತಿದ್ದರಂತೆ.
ಅದರಂತೆ ಅವರು ಅಂಜಿನಾದ್ರಿ ಬೆಟ್ಟದ ಅಂಜನೇಯ ಸ್ವಾಮಿಗೆ, ತಮ್ಮ ಆತ್ಮೀಯರೊಂದಿಗೆ ಸೋಮವಾರ ಬಳ್ಳಾರಿಯಿಂದ ತೆರಳಿ ನೂರೊಂದು ತೆಂಗಿನಕಾಯಿ ಅರ್ಪಿಸಿ, ಹರಕೆ ತೀರಿಸಿದ್ದಾರೆ. ಇನ್ನು ಬಿ. ನಾಗೇಂದ್ರ ಗೆಲುವು ಸಾಧಿಸಿದಲ್ಲಿ ಯಾವ ಹರಕೆ ತೀರಿಸುವ ಸಂಕಲ್ಪ ಮಾಡಿದ್ದಾರೋ, ಆಂಜನೇಯನೇ ಬಲ್ಲ.

2013ರ ಚುನಾವಣೆಯಲ್ಲಿ ಬಿ.ನಾಗೇಂದ್ರ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 71,477 ಮತಗಳನ್ನು ಪಡೆದಿದ್ದರು. ಇತ್ತೀಚೆಗಷ್ಟೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದರು. ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಣ್ಣಫಕ್ಕೀರಪ್ಪನವರಾದರೂ ಕ್ಷೇತ್ರದಲ್ಲಿ ಜನಾರ್ದನ ರೆಡ್ಡಿ ವರ್ಸಸ್ ಬಿ.ನಾಗೇಂದ್ರ ಎನ್ನುವಂತಾಗಿದೆ.
ಕ್ಷೇತ್ರದಲ್ಲಿ ಎರಡು ಪಕ್ಷಗಳ ಪ್ರತಿಷ್ಠೆಗಿಂತ ಶ್ರೀರಾಮುಲು, ಜನಾರ್ದನ ರೆಡ್ಡಿ ಮತ್ತು ಬಿ.ನಾಗೇಂದ್ರ ಅವರು ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ ಎನ್ನುವಂತಿದೆ. ಈ ಬಾರಿ ವಿಜಯ ಲಕ್ಷ್ಮಿ ಯಾರಿಗೆ ಒಲಿಯುವಳು ಎಂಬುದು ಕಾದುನೋಡಬೇಕಾಗಿದೆ.
ಅಂದಹಾಗೆ ಬಂಡಿಹಟ್ಟಿ ನಾಗರಾಜ್ ಮಾಜಿ ಸಚಿವ ಎಂ. ದಿವಾಕರ ಬಾಬು ಆಪ್ತ.












Click it and Unblock the Notifications