ಭಾರತ್ ಜೋಡೋ ಯಾತ್ರೆ ಯಶಸ್ವಿಗಾಗಿ ಬಳ್ಳಾರಿಯಲ್ಲಿ ಹೋಮ
ಬಳ್ಳಾರಿ, ಅಕ್ಟೋಬರ್, 02: ಭಾರತ್ ಜೋಡೋ ಯಾತ್ರೆ ಹಿನ್ನೆಲೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಬಳ್ಳಾರಿಯಲ್ಲಿ ನಡೆಸುವ ಸಮಾವೇಶ ಯಶಸ್ವಿಯಾಗಿ ನಡೆಯಬೇಕೆಂದು ಹೋಮ ಮಾಡಿಸಿದ್ದಾರೆ. ಕಾಂಗ್ರೆಸ್ ಮುಖಂಡರು ಸಮಾವೇಶ ಸ್ಥಳದಲ್ಲಿ ಭಾನುವಾರ ಬೆಳಗ್ಗೆಯಿಂದ ಸುದರ್ಶನ ಹೋಮ ಹಮ್ಮಿಕೊಂಡಿದ್ದರು.
ಭಾರತ್ ಜೋಡೋ ಯಾತ್ರೆ ಈಗಾಗಲೇ ಕರ್ನಾಟಕಕ್ಕೆ ಆಗಮಿಸಿದೆ. ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ಅಕ್ಟೋಬರ್ 15ರಂದು ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಸಮಾವೇಶದ ವೇದಿಕೆ ಸಿದ್ಧತೆ ಕಾರ್ಯ ಆರಂಭಿಸುವ ಮುನ್ನ, ಸಮಾವೇಶ ನಡೆಯುವ ಸ್ಥಳದಲ್ಲಿ ಸುದರ್ಶನ ಹೋಮ ನಡೆಸಲಾಯಿತು.
ಭಾರತ್ ಜೋಡೋ ಯಾತ್ರೆ: ನಂಜನಗೂಡಿನ ಬದನವಾಳುಗೆ ಬಂದ ರಾಹುಲ್ ಗಾಂಧಿ ಪಾದಯಾತ್ರೆ
ಜೋಡೋ ಯಾತ್ರೆಯು 21 ದಿನಗಳ ಕಾಲ 511 ಕಿಲೋ ಮೀಟರ್ ರಾಜ್ಯದಲ್ಲಿ ಸಂಚರಿಸಲಿದ್ದು, ಬಳ್ಳಾರಿಯಲ್ಲಿ ಮಾತ್ರ ಸಮಾವೇಶ ಏರ್ಪಡಿಸಲಾಗಿದೆ. ಸಿದ್ದರಾಮೋತ್ಸವ ಜನಸ್ತೋಮವನ್ನು ಮೀರಿಸುವಂತೆ ಇರಬೇಕು ಎನ್ನುವ ಸಂಕಲ್ಪದೊಂದಿಗೆ ಸಮಾವೇಶ ಸಿದ್ಧತೆ ಮಾಡಲಾಗಿದೆ.
ಬೃಹತ್ ಸಮಾವೇಶಕ್ಕೆ ವೇದಿಕೆ ಸಜ್ಜು; ಕೆಪಿಸಿಸಿ ಕಾರ್ಯದರ್ಶಿ ಜೆ. ಎಸ್. ಆಂಜನೇಯಲು ನೇತೃತ್ವದಲ್ಲಿ ಈ ಹೋಮ ನಡೆದಿದೆ. ಪುರೋಹಿತ ನಾಗರಾಜ್ ಶರ್ಮಾ ಮತ್ತು ಅವರ ತಂಡದಿಂದ ಸುದರ್ಶನ ಹೋಮ ನಡೆಯಿತು. ಹೋಮದ ನಂತರ ಕ್ರೈಸ್ತ ಮತ್ತು ಮುಸ್ಲಿಂ ಧರ್ಮ ಗುರುಗಳು ಪ್ರಾರ್ಥನೆ ಸಲ್ಲಿಸಿದರು. ರಾಹುಲ್ ಗಾಂಧಿಯವರ ಪಾದಯಾತ್ರೆ ಹಾಗೂ ಬಳ್ಳಾರಿಯ ಕಾಂಗ್ರೆಸ್ ಸಮಾವೇಶ ಯಶಸ್ವಿ ಅಗಲಿ ಅಂತಾ ಸುದರ್ಶನ ಹೋಮ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ. ಕೆ. ಹರಿಪ್ರಸಾದ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಲೀಂ ಅಹಮ್ಮದ್ ಸೇರಿದಂತೆ ಮುಖಂಡರು ಇತ್ತೀಚೆಗೆ ಭೇಟಿ ನೀಡಿ, ಸಮಾವೇಶದ ಸ್ಥಳ ಪರಿಶೀಲನೆ ಮಾಡಿದರು.
ಅಕ್ಟೋಬರ್ 14ರಂದು ಸಂಜೆ ಬಳ್ಳಾರಿಗೆ ಯಾತ್ರೆ ಆಗಮಿಸಲಿದೆ. ಹಲಕುಂದಿ ಸಮೀಪದ ಮಠದಲ್ಲಿ ರಾಹುಲ್ ಗಾಂಧಿ ವಾಸ್ತವ್ಯ ಹೂಡಲಿದ್ದಾರೆ. ನಂತರ ಪಾದಯಾತ್ರೆ ಮೂಲಕ ಬಳ್ಳಾರಿಗೆ ಆಗಮಿಸಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅಕ್ಟೋಬರ್ 15ರಂದು ಸಮಾವೇಶದಲ್ಲಿ ಭಾಗವಹಿಸಿ, ಮೋಕಾದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಂತರ ಆಂಧ್ರಪ್ರದೇಶದ ಆಲೂರು, ಮಂತ್ರಾಲಯದ ಮಾರ್ಗವಾಗಿ ರಾಯಚೂರು ಜಿಲ್ಲೆಯನ್ನು ಪ್ರವೇಶ ಮಾಡಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ಗಾದೆಪ್ಪ, ಕಾಂಗ್ರೆಸ್ ಮುಖಂಡರಾದ ಸುನೀಲ್ ರವೂರ್, ಮುಂಡಗ್ರಿ ನಾಗರಾಜ್, ರಮಣ, ಕಲ್ಲುಕಂಭ ಪಂಪಾಪತಿ, ವೆಂಕಟೇಶ್ ಹೆಗಡೆ, ಎಲ್. ಮಾರೆಣ್ಣ, ವಿಷ್ಣು, ಮಂಜುಳಾ, ಪದ್ಮಾ, ಶೋಭಾ ಕಾಳಿಂಗ, ಜ್ಯೋತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಬದನವಾಳು ಗ್ರಾಮಕ್ಕೆ ತಲುಪಿದ ಯಾತ್ರೆ; ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರದ ಆವರಣದಲ್ಲಿ ಗಾಂಧಿ ಜಯಂತಿ ಅಂಗವಾಗಿ ಪ್ರಾರ್ಥನೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಸಿದ್ದರಾಮಯ್ಯ ಭಾಗವಹಿಸಿ ಮಹಾತ್ಮ ಗಾಂಧಿ ಪುತ್ಥಳಿಗೆ ಗೌರವ ಸಲ್ಲಿಸಿದರು.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ಮಹಾತ್ಮ ಗಾಂಧಿಯವರು 1927ರಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರಕ್ಕೆ ಚಾಲನೆ ನೀಡಿದ್ದರು. ಇಲ್ಲಿಗೆ ಇದೀಗ ರಾಹುಲ್ ಗಾಂಧಿಯೊಂದಿಗೆ ಸಿದ್ದರಾಮಯ್ಯ ಅವರು ಭೇಟಿ ನೀಡಿ ಅಲ್ಲಿಯ ನೇಕಾರರೊಂದಿಗೆ ಮಾತುಕತೆ ನಡೆಸಿದರು. ಭಾರತ ಐಕ್ಯತಾ ಯಾತ್ರೆ ಮೂಲಕ ಮೈಸೂರು ಜಿಲ್ಲೆ ಪ್ರವೇಶಿಸಿರುವ ರಾಹುಲ್ ಗಾಂಧಿ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ನಡೆದ ಗಾಂಧಿ ಜಯಂತಿ ಹಾಗೂ ಶ್ರಮದಾನದಲ್ಲಿ ಭಾಗಿ ಆಗಿದ್ದಾರೆ.
ಗುಡಿ ಕೈಗಾರಿಕೆ ಮಹತ್ವ ಸಾರಿದ್ದ ಗಾಂಧೀಜಿ; ಮೈಸೂರು ನಗರದಿಂದ 34 ಹಾಗೂ ನಂಜನಗೂಡು ನಗರದಿಂದ 11 ಕಿಲೋ ಮೀಟರ್ ದೂರದಲ್ಲಿ ಚಾಮರಾಜನಗರಕ್ಕೆ ತೆರಳುವ ಮಾರ್ಗದಲ್ಲಿರುವ ಬದನವಾಳು ಗ್ರಾಮ ಹಲವು ಇತಿಹಾಸ ಹಿನ್ನೆಲೆ ಹೊಂದಿದೆ. ದೇಶವಾಸಿಗಳಿಗೆ ಗುಡಿ ಕೈಗಾರಿಕೆ ಮಹತ್ವ ಸಾರಿದ್ದ ಗಾಂಧೀಜಿ 1927ರಲ್ಲಿ ಗ್ರಾಮಕ್ಕೆ ಭೇಟಿ ನೀಡಿ ವಾಸ್ತವ್ಯ ಹೂಡಿದ್ದರು. ಜನರಿಗೆ ಗುಡಿ ಕೈಗಾರಿಕೆ ಆರಂಭಿಸಲು ಪ್ರೇರಣೆ ನೀಡಿದ್ದರು. ಪರಿಣಾಮ ಇಂದಿಗೂ ಈ ಗ್ರಾಮದಲ್ಲಿ ನೂಲು ಉತ್ಪಾದನೆ ಮತ್ತು ಖಾದಿ ಬಟ್ಟೆ ತಯಾರಿಕೆ ನಡೆಯುತ್ತಿದ್ದು, 80ಕ್ಕೂ ಹೆಚ್ಚು ಜನ ಉದ್ಯೋಗಾವಕಾಶ ಪಡೆದುಕೊಂಡಿದ್ದಾರೆ. ಇಲ್ಲಿನ ಖಾದಿ ಕೇಂದ್ರ ಪುನಶ್ವೇತನಕ್ಕೆ ಬಹು ಹಿಂದಿನಿಂದಲೂ ಸ್ಥಳೀಯರು ಒತ್ತಡ ಹೇರಿದ್ದರು.