ಬಳ್ಳಾರಿ ಸೀಮೆಯ ಕುರಿ ಹಿಕ್ಕೆಗೆ ಮಲೆನಾಡಿನಲ್ಲಿ ಭಾರೀ ಡಿಮ್ಯಾಂಡ್
ಬಳ್ಳಾರಿ, ಸೆಪ್ಟೆಂಬರ್.18: ಜಿಲ್ಲೆಯ ಕುರುಬರಿಗೆ ಮುಗುಳ್ನಗುವ ದಿನಗಳು ಬಂದಿವೆ. ಹೌದು, ಬರ ಪೀಡಿತ ಜಿಲ್ಲೆಯಲ್ಲಿ ಸಿಗುವ ಕುರಿ ಹಿಕ್ಕೆಗೆ ಮಲೆನಾಡಿನಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದ್ದು, ಕುರಿಗಾರರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುವ ಬದಲು, ಕುರಿ ಗೊಬ್ಬರವನ್ನು ಸಂಗ್ರಹಿಸಿ, ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದಾರೆ.
ಮಳೆ ಕೊರತೆ, ಮೇವಿನ ಅಭಾವ, ವೈರಸ್ ಬಾಧೆ, ಆಕಸ್ಮಿಕ ನಿಧನ ಇನ್ನಿತರೆ ಸಂಕಷ್ಟಗಳಿಂದ ಕೂಡ್ಲಿಗಿ ತಾಲೂಕಿನ ಬೊಪ್ಪಲಾಪುರ, ಬಡೆಲಡಕು, ಈಚಲುಬೊಮ್ಮನಹಳ್ಳಿ, ಅಕ್ಕಾಪುರ ಹಾಗೂ ಇತರ ಕುಗ್ರಾಮಗಳಲ್ಲಿ ಕುರಿಗಾರರ ಕುಟುಂಬಗಳು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದವು.
ಸಾಮಾನ್ಯವಾಗಿ ಕುರಿ ಸಾಕಣೆ ಮಾಡಿಕೊಂಡು ಜೀವನ ನಡೆಸುವವರು ಮುಂಗಾರಿನಲ್ಲಿ ಜಮೀನನ್ನು ಬಿತ್ತನೆಗೆ ಮೊದಲೇ ಹದ ಮಾಡಿ ತಮ್ಮ ಹೊಲಗಳಲ್ಲಿ ದಿನಕ್ಕಿಷ್ಟು ಕಾಳು, ಹಣ ಎಂದು ನಿಗದಿ ಮಾಡಿಕೊಂಡು ಬೀಡುಬಿಡುತ್ತಿದ್ದರು.

ಆದರೆ ನಾಲ್ಕೈದು ವರ್ಷಗಳಿಂದ ಅಗತ್ಯ ಮಳೆ ಇಲ್ಲದ ಕಾರಣ ಕುರಿಗಳನ್ನು ತಮ್ಮ ಜಮೀನುಗಳಲ್ಲಿ ಬೀಡು ಬಿಡಲು ಜಮೀನಿನ ಮಾಲೀಕರು ಅವಕಾಶ ಕೊಡುವುದು ಕಡಿಮೆ ಮಾಡಿದ್ದಾರೆ. ಹಾಗಾಗಿ ಕುರಿಗಳಿಗೆ ಮೇವಿನ ಅಭಾವ ಉಂಟಾದ್ದು, ಕುರಿ ಸಾಕಣೆ ಮಾಡುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೆಲ ರೈತರು ಮಳೆ ಕಡಿಮೆಯಾಗುವುದರಿಂದ ಕುರಿಗಳ ಗೊಬ್ಬರ ಮತ್ತು ಗಂಜಲು ಸಸಿಗಳನ್ನು ಸುಟ್ಟು ಬಿಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕುರಿಗಾರರು ಆರ್ಥಿಕ ಸಂಕಷ್ಟದಿಂದ ಹೊರ ಬರಲು ಕುರಿ ಗೊಬ್ಬರವನ್ನು ಮಾರಾಟ ಮಾಡಲು ಚಿಂತನೆ ಮಾಡಿದ್ದಾರೆ.
ಕೂಡ್ಲಿಗಿ ತಾಲೂಕಿನ ಕುರಿಗಾರರಿಗೆ ಮಲೆನಾಡಿನ ಚಿಕ್ಕಮಗಳೂರು, ತೀರ್ಥಹಳ್ಳಿ, ಶಿವಮೊಗ್ಗ, ದಾವಣಗೆರೆ, ಹರಿಹರ ಹಾಗೂ ಇತರ ಕಡೆಯ ಕಾಫಿ ಹಾಗೂ ಅಡಕೆ ಬೆಳೆಗಾರರು ಸಂಪರ್ಕ ಮಾಡಿ, ಕುರಿಹಿಕ್ಕೆಯ ಗೊಬ್ಬರವನ್ನು ಖರೀದಿಸಲು ಮುಂದಾಗಿದ್ದಾರೆ.

ಕುರಿಗಾರರು ತಮ್ಮ ಕುರಿಗಳ ಹಿಂಡಿನಿಂದ ಒಂದು ಜಾಗದಲ್ಲಿ ಕುರಿಹಿಕ್ಕೆಗಳ ತಿಪ್ಪೆ ಹಾಕಿಕೊಂಡು ಮಾರಾಟ ಮಾಡುತ್ತಿದ್ದಾರೆ. ಲಾರಿಗಟ್ಟಲೇ ಕುರಿ ಗೊಬ್ಬರ ಮಲೆನಾಡು ಸೇರುತ್ತಿದೆ. ಕಾಫಿ - ಅಡಕೆ ತೋಟಗಳಿಗೆ ರವಾನೆ ಆಗುತ್ತಿದೆ. ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ಕುರಿ ಗೊಬ್ಬರ ಮಾರಾಟ ಮಾಡುವ ಕುರಿಗಾರರು ಸಾವಿರಾರು ರೂಪಾಯಿ ಹಣ ದುಡಿದು, ಸಂತುಷ್ಟರಾಗುತ್ತಿದ್ದಾರೆ.
ಕುರಿ ಮಲ್ಲಿ (47), ಹಗರಿಬೊಮ್ಮನಹಳ್ಳಿ, ಜಂಬುನಾಥ (55), ಕುರಿಹಟ್ಟಿ ಕೆಲಚನಹಟ್ಟಿಯ ಶಿವ ಇವರೆಲ್ಲರೂ ಹೇಳುವುದು "ಮಳಿ ಇಲ್ಲ. ಬೆಳಿನೂ ಇಲ್ಲ. ನಮ್ಮ ಕುರಿಗಳನ್ನ ಯಾವ ರೈತನೂ ಹೊಲ್ದಾಗ ತಬ್ಬಿಸಿಕೊಳ್ಳುತ್ತಿಲ್ಲ. ಇನ್ನು ಕುರಿನ ಮೇಯಾಕ ಎಲ್ಲಿಗರಾ ಕರಕೊಂಡು ಹೋಗಾನ ಅಂದ್ರೆ, ನಮ್ಮಲ್ಲಿ ದುಡ್ಡಿಲ್ಲ.
ಅದಕ್ಕಾ, ಊರಲ್ಲಿ ಇದ್ದುಕೊಂಡೇ, ಕುರಿ ಹಿಕ್ಕೆ ಮಾರಿ, ಜೀವನ ಮಾಡಾಕತ್ತೀವಿ' ಎಂದು ತಮ್ಮ ಅಭಿಪ್ರಾಯವನ್ನು ಒನ್ ಇಂಡಿಯಾ ಜೊತೆ ಹಂಚಿಕೊಂಡಿದ್ದಾರೆ.












Click it and Unblock the Notifications