ಸೋನಿಯಾ-ಸುಷ್ಮಾ ಜಿದ್ದಾಜಿದ್ದಿ ನೆನಪಿಸಿದ ಬಳ್ಳಾರಿಯ ಉಗ್ರಪ್ಪ ಗೆಲುವು
ಬಳ್ಳಾರಿ, ನವೆಂಬರ್ 06: ಬಿಜೆಪಿ ಭದ್ರಕೋಟೆ ಎನ್ನಿಸಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿನ ವಿ ಎಸ್ ಉಗ್ರಪ್ಪ ಅವರು ಗೆಲುವು ಸಾಧಿಸಿದ್ದು, ಅಚ್ಚರಿಯೇ ಹೌದು.
ನ.3 ರಂದು ಚುನಾವಣೆ ನಡೆಯುವವರೆಗೂ ಬಿಜೆಪಿ ಅಭ್ಯರ್ಥಿ ಜೆ.ಶಾಂತ ಅವರೇ ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸದಲ್ಲಿ ಬಿಜೆಪಿ ಇತ್ತು. ಆದರೆ ಚುನಾವಣೆ ಮುಗಿದು, ಗುಪ್ತಚರ ವರದಿ ವ್ಯತಿರಿಕ್ತ ಫಲಿತಾಂಶದ ಬಗ್ಗೆ ಮಾಹಿತಿ ನೀಡಿದಾಗ ಅಚ್ಚರಿಯಾಗಿತ್ತು. ಅಂತೆಯೇ ಒಂದೂವರೆ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ಉಗ್ರಪ್ಪ ದಾಖಲೆ ಬರೆದಿದ್ದಾರೆ.
ಯುಪಿಎ ಅಧ್ಯಕ್ಷೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ದಾಖಲೆಯನ್ನು ಈ ಮೂಲಕ ಅವರು ಮುರಿದಿದ್ದಾರೆ. ಬಳ್ಳಾರಿಯಲ್ಲಿ ಉಗ್ರಪ್ಪ ದಾಖಲೆಯ ಗೆಲುವು ಸಾಧಿಸುತ್ತಿರುವಾಗಲೇ 1999 ರಲ್ಲಿ ನಡೆದ ಲೋಕಸಭಾ ಚುನಾವಣೆ ನೆನಪಿಗೆ ಬಂತು. ಸೋನಿಯಾ ಗಾಂಧಿ ಮತ್ತು ಸುಷ್ಮಾ ಸ್ವರಾಜ್ ಇಬ್ಬರು ಘಟಾನುಘಟಿ ನಾಯಕಿಯರು ಎದುರಾಳಿಗಳಾಗಿ ಸ್ಪರ್ಧಿಸಿದ್ದ ಈ ಕ್ಷೇತ್ರದಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಸೋನಿಯಾ ಗಾಂಧಿ ಗೆಲುವು ಸಾಧಿಸಿದ್ದರು.

ಸೋನಿಯಾ ದಾಖಲೆ ಮುರಿದ ಉಗ್ರಪ್ಪ
ಬಳ್ಳಾರಿಯ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಅವರು ಸುಮಾರು ಒಂದೂವರೆ ಲಕ್ಷ ಮತಗಳ ಅಂತರದಿಂದ ಬಿಜೆಪಿಯ ಜೆ.ಶಾಂತಾ ಅವರನ್ನು ಸೋಲಿಸಿದ್ದಾರೆ. 1999 ರಲ್ಲಿ ಸೋನಿಯಾ ಗಾಂಧಿ ಅವರು 56,000 ಮತಗಳ ಅಂತರದಿಂದ ಹಾಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಸೋಲಿಸಿದ್ದರು! ಈ ಭಾರೀ ಅಂತರದ ಗೆಲುವಿನ ದಾಖಲೆ ಮುರಿದು, ಒಂದೂವರೆ ಲಕ್ಷ ಮತಗಳ ಅಂತರದಿಂದ ಇದೀಗ ಉಗ್ರಪ್ಪ ಗೆಲುವು ಸಾಧಿಸಿದ್ದಾರೆ.

ಸುಷ್ಮಾ-ಸೋನಿಯಾ ಜಿದ್ದಾಜಿದ್ದಿ!
ಉತ್ತರ ಪ್ರದೇಶದ ಅಮೇಥಿ ಮತ್ತು ಬಳ್ಳಾರಿ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಸೋನಿಯಾ ಗಾಂಧಿ ಸ್ಪರ್ಧಿಸಿದ್ದರು. ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಪ್ರಬಲ ಎದುರಾಳಿಯಾಗಬಲ್ಲ ನಾಯಕಿಯಾಗಿ ಬಿಜೆಪಿಗೆ ಕಂಡಿದ್ದು ಸುಷ್ಮಾ ಸ್ವರಾಜ್. ಸುಷ್ಮಾ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ ಮರುದಿನವೇ ಅವರು ಬಳ್ಳಾರಿಯಲ್ಲಿ ಪ್ರಚಾರ ಆರಂಭಿಸಿದರು. 30 ದಿನಗಳಲ್ಲಿ ಕನ್ನಡವನ್ನು ತಕ್ಕಮಟ್ಟಿಗೆ ಮಾತನಾಡುವುದನ್ನು ಕಲಿತರು. ಕನ್ನಡದಲ್ಲೇ ಸಾರ್ವಜನಿಕ ಭಾಷಣ ನೀಡುವಷ್ಟರ ಮಟ್ಟಿಗೆ ಕನ್ನಡ ಕಲಿತರು. ಆದರೆ ಆ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಮಾತ್ರ ಸಾಧ್ಯವಾಗಲಿಲ್ಲ.

ಇಬ್ಬರು ನಾಯಕಿಯರಿಗೂ ಆ ದಿನಗಳು ಇನ್ನೂ ಮರೆತಿಲ್ಲ!
ಸುಷ್ಮಾ ಸ್ವರಾಜ್ ಮತ್ತು ಸೋನಿಯಾ ಗಾಂಧಿ ಇಬ್ಬರು ನಾಯಕಿಯರೂ ಬಳ್ಳಾರಿಯ ಪ್ರಚಾರದ ಸಮಯದಲ್ಲಿ ಪರಸ್ಪರ ವಾಗ್ದಾಳಿ ಮಾಡಿಕೊಂಡಿದ್ದರು. ಆ ದಿನಗಳು ಇಬ್ಬರಿಗೂ ಇನ್ನೂ ಮರೆತಿಲ್ಲ. ಇಬ್ಬರ ನಡುವೆ ಇದ್ದ ರಾಜಕೀಯ ವೈಷಮ್ಯ ಇಂದಿಗೂ ಕೊಂಚ ಮಟ್ಟಿಗೆ ಹಾಗೆಯೇ ಇದೆ. ನಂತರ 2004 ರಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಸೋನಿಯಾ ಗಾಂಧಿ ಪ್ರಧಾನಿಯಾಗಬೇಕು ಎಂಬ ಕೂಗು ಕೇಳಿಬಂದಿತ್ತು. ಆದರೆ ಅದನ್ನು ಖಡಾಖಂಡಿತವಾಗಿ ವಿರೋಧಿಸಿದ್ದ ಸುಷ್ಮಾ, 'ಸೋನಿಯಾ ಗಾಂಧಿ ಪ್ರಧಾನಿಯಾದರೆ ನಾನು ವಿಧವೆಯಂತೆ, ತಲೆ ಬೋಳಿಸಿಕೊಂಡು ಬದುಕುತ್ತೇನೆ' ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.

ಉಲ್ಟಾ ಹೊಡೆದ ಉಪಚುನಾವಣೆ ಲೆಕ್ಕಾಚಾರ!
ಬಳ್ಳಾರಿ ಬಿಜೆಪಿ ಸಂಸದರಾಗಿದ್ದ ಶ್ರೀರಾಮುಲು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರಿಂದ ತೆರವಾದ ಬಳ್ಳಾರಿ ಕ್ಷೇತ್ರಕ್ಕೆ ನ.3 ರಂದು ಉಪಚುನಾವಣೆ ನಡೆದಿತ್ತು. ಕಳೆದ ಮೂರು ಅವಧಿಯಿಂದಲೂ ಬಿಜೆಪಿಯ ತೆಕ್ಕೆಯಲ್ಲೇ ಇದ್ದ ಬಳ್ಳಾರಿ ಇದೀಗ ಕಾಂಗ್ರೆಸ್ ತೆಕ್ಕೆಗೆ ಜಾರಿದೆ. ಚುನಾವಣೆಗೂ ಮುನ್ನ ಬಿಜೆಪಿಯೇ ಗೆಲ್ಲಬಹುದು ಎಂದು ನಿರೀಕ್ಷಿಸಿದ್ದರೆ, ಚುನಾವಣೆ ಮುಗಿಯುತ್ತಿದ್ದಂತೆಯೇ ಬಂದ ಗುಪ್ತಚರ ವರದಿ ಕಾಂಗ್ರೆಸ್ ಗೆಲ್ಲುತ್ತದೆ ಎನ್ನುವ ಮೂಲಕ ಗಣಿನಾಡಿನ ರಾಜಕೀಯಕ್ಕೆ ಹೊಸತಿರುವು ನೀಡಿತ್ತು. ಶ್ರೀರಾಮುಲು ಸಹೋದರಿ ಜೆ ಶಾಂತ ಅವರೇ ಬಿಜೆಪಿ ಅಭ್ಯರ್ಥಿಯಾಗಿದ್ದರೂ ಅವರು ಒಂದು ಸುತ್ತಿನಲ್ಲೂ ಮುನ್ನಡೆ ಪಡೆಯಲಾಗದೆ ಮುಖಭಂಗ ಅನುಭವಿಸುವಂತಾಯ್ತು. 2019 ರ ಲೋಕಸಭಾ ಚುನಾವಣೆಗೂ ಮುನ್ನ ಬಂದ ಈ ಫಲಿತಾಂಶ ಬಿಜೆಪಿಗೆ ಆತ್ಮಾವಲೋಕನ ಅನಿವಾರ್ಯ ಎಂಬುದನ್ನು ತೋರಿಸಿಕೊಟ್ಟಿದೆ.












Click it and Unblock the Notifications