ಹಲ್ಲೆ ಪ್ರಕರಣ : ಸಂಸದನ ಪುತ್ರ ಸೇರಿ 6 ಮಂದಿ ಬಂಧನ

ಬಳ್ಳಾರಿಯ ಕೌಲ್ ಬಜಾರ್ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ 2ನೇ ಎಸಿಜೆ ನ್ಯಾಯಾಲಯದ ನ್ಯಾಯಾಧೀಶೆ ಜರೀನಾ ಮನೆಗೆ ಹಾಜರು ಪಡಿಸಿದ್ದು, ಆರೋಪಿಗಳನ್ನು 6 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ತಾಯಿ ಭ್ಯಾಗಮ್ಮ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಸಣ್ಣಪಕ್ಕೀರಪ್ಪ ಪುತ್ರ ಮುತ್ತು, ಅವರ ಸ್ನೇಹಿತರಾದ ಶೇಖರ, ಸೂರಿ ಸೇರಿದಂತೆ 6 ಜನರನ್ನು ಬಂಧಿಸಲಾಗಿದೆ. ಒಟ್ಟು 13 ಜನರ ವಿರುದ್ಧ ಪ್ರಕಣ ದಾಖಲಾಗಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಏನು : ಬಳ್ಳಾರಿ ಕೌಲ್ ಬಜಾರ್ ಠಾಣೆ ವ್ಯಾಪ್ತಿ ನಿವಾಸಿಯಾದ ಭಾಗ್ಯಮ್ಮ ಅವರ ಮನೆಗೆ ಬುಧವಾರ ಸಂಜೆ ನುಗ್ಗಿದ ಸಣ್ಣಪಕ್ಕೀರಪ್ಪ ಪುತ್ರ ಮತ್ತು ಅವರ ಸ್ನೇಹಿತರು ಭಾಗ್ಯಮ್ಮ ಮಗಳು ಶ್ರೀಲಕ್ಷ್ಮೀ ಮನೆಯಲ್ಲಿ ವೇಶ್ಯಾವಟಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಅವರ ಮೇಲೆ ಹಲ್ಲೆ ನಡೆಸಿದ್ದರು.
ಪಿಯುಸಿ ಓದುತ್ತಿದ್ದ ಶ್ರೀಲಕ್ಮೀ ಬುಧವಾರ ಸಂಜೆ ಕಾಲೇಜು ಮುಗಿಸಿ ಬರುವಾಗ ಗೆಳೆಯನೊಂದಿಗೆ ಮನೆಗೆ ಆಗಮಿಸಿದ್ದಳು. ಇದನ್ನು ನೋಡಿ ಮುತ್ತು ಹಾಗೂ ಅವರ ಸ್ನೇಹಿತರು ಭಾಗ್ಯಮ್ಮ ಅವರ ಮನೆಗೆ ನುಗ್ಗಿ ಎಲ್ಲರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಶ್ರೀಲಕ್ಮೀ, ಆಕೆಯ ಸೇಹ್ನಿತ ಮತ್ತು ಭಾಗ್ಯಮ್ಮ ಮೇಲೆ ಹಲ್ಲೆ ನಡೆಸಿದ್ದರು. ಈ ಕುರಿತು ಭಾಗ್ಯಮ್ಮ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ದ್ವೇಷವೂ ಕಾರಣ : ಸಂಸದರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ ಎಂಬ ಯುವಕ ಶ್ರೀಲಕ್ಮೀಯನ್ನು ಪ್ರೀತಿಸು ಎಂಬ ಪೀಡುಸುತ್ತಿದ್ದ ಎಂದು ತಿಳಿದು ಬಂದಿದೆ. ಇದರ ವಿರುದ್ಧ ಶ್ರೀಲಕ್ಮೀ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಈ ದ್ವೇಷದ ಹಿನ್ನಲೆಯಲ್ಲಿಯೂ ಹಲ್ಲೆ ನಡೆಸಿರಬಹುದು ಎಂದು ಶಂಕಿಸಲಾಗುತ್ತಿದೆ.











Click it and Unblock the Notifications