ಜಿಲ್ಲೆ ವಿಭಜನೆ: ಬಳ್ಳಾರಿ ಬಂದ್ ಯಶಸ್ವಿಯಾಗಲಿ ಎಂದ ಬಿಜೆಪಿ ಶಾಸಕ
ಬಳ್ಳಾರಿ, ನ 21: "ನಾನು ಆಡಳಿತ ಪಕ್ಷದ ಸದಸ್ಯನಾಗಿರುವುದರಿಂದ ನೇರವಾಗಿ ಬಂದ್ ಗೆ ಬೆಂಬಲ ನೀಡಲು ಸಾಧ್ಯವಿಲ್ಲ. ಆದರೆ, ಈ ಬಂದ್ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ"ಎಂದು ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಹೇಳಿದರು.
"ಜಿಲ್ಲಾ ವಿಭಜನೆಯನ್ನು ವಿರೋಧಿಸಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಇಂದಲ್ಲಾ ನಾಳೆ ಬಳ್ಳಾರಿ ವಿಭಜನೆ ಆಗುವುದು ನಿಲ್ಲುವುದಿಲ್ಲ ಎಂದು ಸಿಎಂ ಆದಿಯಾಗಿ ಹಿರಿಯ ಸಚಿವರು ಹೇಳಿದ್ದಾರೆ"ಎಂದು ರೆಡ್ಡಿ ಹೇಳಿದರು.
"ಪ್ರತಿರೋಧ ತೋರಿಸುವುದನ್ನು ನಿಲ್ಲಿಸಿ, ನಿಮ್ಮ ಜಿಲ್ಲೆಯ ಶಾಸಕರ ಮನವೊಲಿಸಿ ಎಂದು ಸಿಎಂ ಹೇಳಿದ್ದಾರೆ. ಆದರೆ, ಬಳ್ಳಾರಿ ಜಿಲ್ಲೆ ಅಖಂಡವಾಗಿ ಇರಬೇಕು ಎನ್ನುವುದು ನಮ್ಮ ಆಸೆ. ಈ ವಿಭಜನೆ ನನ್ನನ್ನು ಬಹಳವಾಗಿ ಕಾಡಲಿದೆ"ಎಂದು ಸೋಮಶೇಖರ ರೆಡ್ಡಿ ಬೇಸರ ವ್ಯಕ್ತ ಪಡಿಸಿದರು.

"ನಮ್ಮ ಜಿಲ್ಲೆಯ ಎಲ್ಲಾ ಶಾಸಕರು ಬಯಸಿದರೆ, ನಿಯೋಗದೊಂದಿಗೆ ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ, ಜಿಲ್ಲೆಯನ್ನು ವಿಭಜನೆ ಮಾಡದಂತೆ ಮನವಿ ಸಲ್ಲಿಸುತ್ತೇವೆ. ಬಳ್ಳಾರಿ ಜಿಲ್ಲೆ ವಿಭಜನೆಯ ನೋವು ನನ್ನನ್ನು ಬಹುವಾಗಿ ಕಾಡುತ್ತಿದೆ"ಎಂದು ಸೋಮಶೇಖರ ರೆಡ್ಡಿ ನೋವು ತೋಡಿಕೊಂಡರು.
ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರ ಜಿಲ್ಲೆಯನ್ನು ಮಾಡಲು ಬಿಎಸ್ವೈ ಸರಕಾರ ಮುಂದಾಗಿದೆ. ಈ ಕ್ರಮವನ್ನು ಖಂಡಿಸಿ ವಿವಿಧ ಸಂಘಟನೆಗಳು ನವೆಂಬರ್ 26ಕ್ಕೆ ಬಳ್ಳಾರಿ ಬಂದ್ ಕರೆನೀಡಿವೆ.
"ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿದರೆ ಜನರೇ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ. ಜನರು ಈ ಬಗ್ಗೆ ಪ್ರತಿಭಟನೆ ಮಾಡುತ್ತಾರೆ. ನನಗೆ ಪಕ್ಷ ಮುಖ್ಯ ಅಲ್ಲ, ನನಗೆ ಜನರೇ ಮುಖ್ಯ. ಜನರು ಹೋರಾಟ ಮಾಡಿದರೆ ನಾನೂ ಜನರ ಪರವಾಗಿ ಹೋರಾಟಕ್ಕೆ ಇಳಿಯುವೆ" ಎಂದು ಗಾಲಿ ಸೋಮಶೇಖರ ರೆಡ್ಡಿ ಹೇಳಿದ್ದರು.












Click it and Unblock the Notifications