ಬಳ್ಳಾರಿ: ಕೊರೊನಾದಿಂದ ಕೆಲಸ ಸಿಗದ ಕೂಲಿ ಕಾರ್ಮಿಕರಿಂದ ಕಳ್ಳತನ
ಬಳ್ಳಾರಿ, ನವೆಂಬರ್ 6: ಕೊರೊನಾ ಮಾಹಾಮಾರಿ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡ ಕೂಲಿ ಕಾರ್ಮಿಕರು ದಾರಿ ಕಾಣದೇ ಕಳ್ಳತನ ಮಾಡಿ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.
ಬಳ್ಳಾರಿಯ ಸಿರುಗುಪ್ಪ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮನೆ ಕಳ್ಳತನದಲ್ಲಿ ಭಾಗಿಯಾಗಿದ್ದ 7 ಜನ ಕಳ್ಳರನ್ನು ಹೆಡೆಮುರಿ ಕಟ್ಟಿದ್ದಾರೆ. ಸಿರುಗುಪ್ಪ ನಗರ ಸೇರಿ ವಿವಿದೆಡೆ ಬೈಕ್, ಮೊಬೈಲ್ ಫೋನ್, ಒಡವೆಗಳನ್ನು ಕಳ್ಳತನ ಮಾಡುತ್ತಿದ್ದರು, ಆರೋಪಿಗಳಿಂದ 7.05 ಲಕ್ಷ ರೂ. ಮೌಲ್ಯದ 16 ಮೋಟಾರ್ ಸೈಕಲ್, 5.56 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸೇರಿದಂತೆ ಒಂಬತ್ತು ಮೊಬೈಲ್ ಫೋನ್ಗಳು ವಶಪಡಿಸಿಕೊಂಡಿದ್ದಾರೆ.
ಸಿರುಗುಪ್ಪ ನಗರದ ಬಿ.ರಾಘವೇಂದ್ರ ನೀಡಿದ ದೂರಿನನ್ವಯ ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಗುರುವಾರ (ನ.5) ರಾತ್ರಿ ವೇಳೆಯಲ್ಲಿ ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಈ ಕಳ್ಳರು ಕೇವಲ ಸಿರುಗುಪ್ಪವಲ್ಲದೇ ದಾವಣಗೆರೆ, ರಾಯಚೂರು ಕಡೆಯೂ ಕಳ್ಳತನ ಮಾಡುತ್ತಿದ್ದರು.

ಸದ್ಯ ಸಿರುಗುಪ್ಪ ನಗರದ ಉಲ್ಲೇಶ್(22) ನಾಗರಾಜ್ (21) ಇಸ್ಮಾಯಿಲ್ (27) ಸೇರಿದಂತೆ ಒಟ್ಟು ಏಳು ಜನರ ಬಂಧನ ಮಾಡಿದ್ದಾರೆ . ಕಳೆದ ಮೂರು ತಿಂಗಳಿಂದ ಕೆಲಸ ಕಳೆದುಕೊಂಡಿದ್ದ ಏಳು ಜನ ಆರೋಪಿಗಳು, ಕೆಲಸ ಕಳೆದುಕೊಂಡ ಹಿನ್ನೆಲೆಯಲ್ಲಿ, ಕಳ್ಳತನ ಮಾಡಲು ಮುಂದಾಗಿದ್ದರು.

ರೈಸ್ ಮಿಲ್, ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳು ನಾಲ್ಕು ತಿಂಗಳಿಂದ ಕೆಲಸ ಸಿಗದ ಕಾರಣ ಕಳ್ಳತನ ಮಾಡಿ ಜೀವನ ನಡೆಸುತ್ತಿದ್ದರು. ಈ ಸಂಬಂಧ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications