ಆಂಧ್ರದಿಂದ ಜನರು ರಾಜ್ಯದ ಗಡಿ ನುಸುಳದಂತೆ ತೀವ್ರ ನಿಗಾ
ಬಳ್ಳಾರಿ,ಮೇ 3: ಕೊರೊನಾ ಪ್ರಕರಣಗಳು ಆಂಧ್ರಪ್ರದೇಶದ ಅನಂತಪುರ ಮತ್ತು ಕರ್ನೂಲ್ ಜಿಲ್ಲೆಗಳಲ್ಲಿ ದಿನೇದಿನೇ ಹೆಚ್ಚಾಗುತ್ತಿದ್ದು, ಈ ರಾಜ್ಯದ ಗಡಿ ಭಾಗದಿಂದ ಆಂಧ್ರದ ವ್ಯಕ್ತಿಗಳು ಬಳ್ಳಾರಿ ಸೇರಿದಂತೆ ರಾಜ್ಯದ ಗಡಿ ಜಿಲ್ಲೆ ಪ್ರವೇಶಿಸುವ ಸಾಧ್ಯತೆಗಳು ದಟ್ಟವಾಗಿದ್ದು, ಜನರು ನುಸುಳದಂತೆ ಕ್ರಮವಹಿಸುವ ಮತ್ತು ತೀವ್ರ ನಿಗಾವಹಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ, ಬಳ್ಳಾರಿ ಮತ್ತು ಸಂಡೂರು ತಾಲ್ಲೂಕುಗಳ ಗಡಿ ಭಾಗಗಳಿಗೆ ಆಂಧ್ರಪ್ರದೇಶ ರಾಜ್ಯದ ಗಡಿ ಭಾಗ ಹೊಂದಿಕೊಂಡಿವೆ. ಆಂಧ್ರಪ್ರದೇಶ ರಾಜ್ಯದ ಜಿಲ್ಲೆಗಳಾದ ಕರ್ನೂಲ್ ಮತ್ತು ಅನಂತಪುರಂ ಜಿಲ್ಲೆಗಳಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣಗಳು ದೃಢಪಟ್ಟ ಕಾರಣ ಈ ಜಿಲ್ಲೆಗಳ ಗಡಿ ಭಾಗದಿಂದ ಆಂಧ್ರದ ವ್ಯಕ್ತಿಗಳು ಬಳ್ಳಾರಿ ಜಿಲ್ಲೆಯಲ್ಲಿ ಪ್ರವೇಶಿಸುವ ಮತ್ತು ಈ ಸೊಂಕು ಹರಡಿಸುವ ಸಾಧ್ಯತೆಗಳೂ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ಯಾವುದೇ ವ್ಯಕ್ತಿಯು ಬಳ್ಳಾರಿ ಜಿಲ್ಲೆಯ ಗಡಿ ಪ್ರದೇಶದಿಂದ ಪ್ರವೇಶಿಸದಂತೆ ನಿಗಾವಹಿಸುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾ ಮತ್ತು ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳನ್ನು ಇದಕ್ಕಾಗಿ ನೇಮಿಸಲಾಗಿದ್ದು, ಅವರು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಮತ್ತು ಒಂದು ವೇಳೆ ಯಾವುದೇ ವ್ಯಕ್ತಿಯು ಈ ರೀತಿ ಗಡಿ ಪ್ರದೇಶದಿಂದ ಪ್ರವೇಶಿಸಿದ್ದಲ್ಲಿ ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಅವರು ಹೇಳಿದರು.
ಸಾರ್ವಜನಿಕರ ಆರೋಗ್ಯದೃಷ್ಟಿಯಿಂದ ಆಂಧ್ರಪ್ರದೇಶ ರಾಜ್ಯದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಸಿರುಗುಪ್ಪ, ಬಳ್ಳಾರಿ ಮತ್ತು ಸಂಡೂರು ತಾಲ್ಲೂಕುಗಳ ಗಡಿ ಭಾಗದಲ್ಲಿ ಪ್ರತಿನಿತ್ಯ ನಿರಂತರ 24 ಗಂಟೆಗಳ ಕಾಲ ಗಸ್ತುವಾಹನಗಳು ಸಂಚರಿಸಿ ನಿಗಾವಹಿಸಲಿವೆ ಎಂದು ವಿವವರಿಸಿದ ಡಿಸಿ ನಕುಲ್ ಅವರು ಬಳ್ಳಾರಿ-29,ಸಿರಗುಪ್ಪ-27 ಮತ್ತು ಸಂಡೂರು-10 ಗ್ರಾಮಗಳು ಆಂಧ್ರದೊಂದಿಗೆ ಗಡಿಹಂಚಿಕೊಂಡಿವೆ ಎಂದರು.