ಬಳ್ಳಾರಿ ತಾಲೂಕಿನ ಬಸರಕೋಡು ಗ್ರಾಮದಲ್ಲಿ 48 ಮನೆಗಳು ಜಲಾವೃತ
ಬಳ್ಳಾರಿ, ಸೆಪ್ಟೆಂಬರ್, 08: ಕಳೆದ ಮೂರು ದಿನಗಳಿಂದ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಗಳಲ್ಲಿನ ಮನೆಗಳು ಸಂಪೂರ್ಣ ಜಲಾವೃತವಾಗಿದ್ದು, ಜನರು ಪರದಾಡುತ್ತಿದ್ದಾರೆ. ಇನ್ನು ಜಮೀನುಗಳು ಕೂಡ ಜಲಾವೃತವಾಗಿ ರೈತರು ಕಂಗಾಲಾಗಿದ್ದಾರೆ.
ಜಿಲ್ಲಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ವೇದಾವತಿ ನದಿಯಲ್ಲೂ ಕೂಡ ಪ್ರವಾಹ ಹೆಚ್ಚಾಗಿದೆ. ಕಂಪ್ಲಿ ವಿಧಾನಸಭಾ ಕ್ಷೇತ್ರದ ಹಾಗೂ ಬಳ್ಳಾರಿ ತಾಲೂಕು ವ್ಯಾಪ್ತಿಯ ಬಸರಕೋಡು ಗ್ರಾಮದಲ್ಲಿ 48 ಮನೆಗಳು ಜಲಾವೃತಗೊಂಡಿವೆ. ಇಷ್ಟೆಲ್ಲ ಅನಾಹುತಗಳು ಸಂಭವಿಸಿದರೂ ಕೂಡ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಇತ್ತ ತಲೆ ಹಾಕುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದರು. ವೇದಾವತಿ ನದಿ ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿದ್ದು, ಅಲ್ಲಿನ ಸುತ್ತಮುತ್ತಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಸಿರುಗುಪ್ಪ: ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸಲು ಹೋದ ಅಗ್ನಿಶಾಮಕ ಬೋಟ್ ಪಲ್ಟಿ
ಗ್ರಾಮ ಲೆಕ್ಕಿಗ ಅಧಿಕಾರಿಗಳು ಬಂದು ಎಚ್ಚರಿಕೆ ಸಂದೇಶವನ್ನು ನೀಡಿ ಹೋಗಿದ್ದಾರೆ ಅಷ್ಟೇ. ಮನೆಗಳು ಜಲಾವೃತ ಆದರೂ ಕೂಡ ಕಾಳಜಿ ಕೇಂದ್ರ ಆರಂಭವಾಗಿಲ್ಲ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಪ್ರವಾಹವೂ ಕೂಡ ಹೆಚ್ಚುತ್ತಲೇ ಇದೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಈವರೆಗೂ ಯಾವ ಅಧಿಕಾರಿಗಳು ಕೂಡ ಗ್ರಾಮಕ್ಕೆ ಭೇಟಿ ನೀಡಿಲ್ಲ. ಆದರೆ ಗ್ರಾಮ ಪಂಚಾಯತಿ ಸದಸ್ಯರು ವೈಯಕ್ತಿಕವಾಗಿ ಕಾಳಜಿ ಕೇಂದ್ರ ಆರಂಭಿಸಿ, ಜಲಾವೃತ ಆಗಿರುವ ಮನೆಗಳ ಕುಟುಂಬಸ್ಥರಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ. ಶಾಸಕರು ಮಾತ್ರ ಈವರೆಗೂ ಸ್ಥಳಕ್ಕೆ ಬೇಟಿ ನೀಡಿಲ್ಲ. ಅವರು ನಮ್ಮ ಗ್ರಾಮವನ್ನು ಮೊದಲಿನಿಂದಲೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಅರೋಪಿಸಿದರು.
ಬಳ್ಳಾರಿ, ವಿಜಯನಗರದಲ್ಲಿ ಮನೆಗಳಿಗೆ ಹಾನಿ
ವಿಜಯನಗರ ಜಿಲ್ಲೆಯಲ್ಲಿ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು 132 ಮನೆಗಳು ಭಾಗಶಃ ಕುಸಿದು ಬಿದ್ದಿದ್ದು, ಹೂವಿನಹಡಗಲಿ ಒಂದರಲ್ಲೇ 108 ಮನೆಗಳು ಜಲಾವೃತಗೊಂಡಿವೆ. ಹರಪನಹಳ್ಳಿ ತಾಲೂಕಿನಲ್ಲಿ 16, ಕೊಟ್ಟೂರಿನಲ್ಲಿ 6, ಹಗರಿಬೊಮ್ಮನಹಳ್ಳಿಯಲ್ಲಿ 2 ಮನೆಗಳಿಗೆ ಹಾನಿ ಆಗಿದೆ.
ಹಂಪಿಯ ವಿರೂಪಾಕ್ಷ ದೇಗುಲದ ಕಲ್ಲಿನ ಕಂಬಗಳು ಕುಸಿತ, ಪ್ರವಾಸಿಗರಿಗೆ ಆತಂಕ
ಮಳೆ ಆರ್ಭಟಕ್ಕೆ ತತ್ತರಿಸಿದ ಬಳ್ಳಾರಿ ಜಿಲ್ಲೆ
ಸತತ ಮಳೆಗೆ ವಿಜಯನಗರ, ಬಳ್ಳಾರಿ ಜಿಲ್ಲೆಯ ಬಹುತೇಕ ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿವೆ.ತುಂಗಭದ್ರಾ ಜಲಾಶಯದಿಂದ ನದಿಗೆ ಒಂದು ಲಕ್ಷ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಹೊಸಪೇಟೆ ತಾಲೂಕಿನ ಹಂಪಿಯ ಬಜಾರಿನ ಕಟ್ಟೆ ಕುಸಿದಿದೆ. ಇನ್ನು ಬಳ್ಳಾರಿ ಜಿಲ್ಲೆಯಲ್ಲಿ 34 ಮನೆಗಳು ಭಾಗಶಃ ಕುಸಿದು ಬಿದ್ದಿದ್ದವು. ಕಂಪ್ಲಿ ಒಂದರಲ್ಲೇ 26 ಮನೆಗಳಿಗೆ ಹಾನಿಯಾಗಿದೆ. ಕುರುಗೋಡು ತಾಲೂಕಿನ 6 ಮನೆ, ಒಂದು ಗುಡಿಸಲಿಗೆ ಹಾನಿ ಉಂಟಾಗಿದೆ.
ರಸ್ತೆ ಸಂಪರ್ಕ ಕಡಿತ, ಜನರಿಗೆ ಪರದಾಟ
ನೆರೆಯ ಆಂಧ್ರ ಪ್ರದೇಶದ ಗಡಿಭಾಗದಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ವೇದಾವತಿ ನದಿಯ ಪ್ರವಾಹ ಮಟ್ಟ ಹೆಚ್ಚಾಗಿದೆ. ಕರ್ನಾಟಕ ಮತ್ತು ಆಂಧ್ರಕ್ಕೆ ಸಂಪರ್ಕ ಕಲ್ಪಿಸುವ ರಾರಾವಿ ಸಮೀಪದ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರಕ್ಕೆ ಅಡೆತಡೆ ಉಂಟಾಗಿದೆ. ಸೇತುವೆ ಮುಳುಗಡೆ ಆಗಿರುವುದರಿಂದ ಜನರು 10 ಕಿಲೋ ಮೀಟರ್ ಸುತ್ತು ಬಳಸಿ ಸಂಚರಿಸುತ್ತಿದ್ದಾರೆ.
ಅಗ್ನಿಶಾಮಕ ದಳದ ಬೋಟ್ ಪಲ್ಟಿ
ವೇದಾವತಿ ನದಿಯ ಪ್ರವಾಹದಿಂದ ಬಳ್ಳಾರಿ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ಥವಾಗಿದೆ. ಇನ್ನೂ ಸಿರುಗುಪ್ಪದಲ್ಲಿ ಪ್ರವಾಹಕ್ಕೆ ಸಿಲುಕಿದ 8 ಜನರರನ್ನು ರಕ್ಷಣೆ ಮಾಡಲಾಗಿದೆ. ಕಳೆದ 3-4 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಬಳ್ಳಾರಿ ಜಿಲ್ಲೆಯ ವೇದಾವತಿ, ಹಗರಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಸಿರುಗುಪ್ಪ ತಾಲೂಕಿನ ಮುದೇನೂರು ಬಳಿಯ ಶನೀಶ್ವರ ದೇವಸ್ಥಾನ ವೇದಾವತಿ ನದಿಯ ನೀರಿನ ಪ್ರವಾಹದಿಂದ ಮುಳುಗಡೆಯಾಗಿತ್ತು. ದೇವಸ್ಥಾನಕ್ಕೆ ತೆರಳಿದ್ದ ಪೂಜಾರಿ ಕುಟುಂಬದ ನಾಲ್ವರು ಪ್ರವಾಹಕ್ಕೆ ಸಿಲುಕಿಗೊಂಡಿದ್ದರು. ಇವರನ್ನು ರಕ್ಷಣೆ ಮಾಡಲು ತೆರಳಿದ್ದ ಅಗ್ನಿಶಾಮಕ ಸಿಬ್ಬಂದಿಗಳ ಬೋಟ್ ನೀರಿನ ಸೆಳೆತಕ್ಕೆ ಪಲ್ಟಿ ಆಗಿದೆ. ಮೂವರು ಅಗ್ನಿಶಾಮಕ ಸಿಬ್ಬಂದಿಗಳು ದೇವಸ್ಥಾನ ಸೇರಿದ್ದಾರೆ. ಲಿಂಗರಾಜ ಎನ್ನುವ ಅಗ್ನಿಶಾಮಕ ಸಿಬ್ಬಂದಿ ಸುಮಾರು ಒಂದೂವರೆ ಕಿಲೋ ಮೀಟರ್ ಈಜಿ ದಡ ಸೇರಿದ್ದಾರೆ. ರಕ್ಷಣೆಗೆ ಹೋದವರು ಸೇರಿ ಒಟ್ಟು ಎಂಟು ಜನರು ದೇವಸ್ಥಾನದ ಮೇಲೆ ಕುಳಿತುಕೊಂಡಿದ್ದಾರೆ. ಬಳ್ಳಾರಿಯಿಂದ ಮತ್ತೊಂದು ಬೋಟ್ ಮೂಲಕ ತೆರಳಿದ ಅಗ್ನಿಶಾಮಕ ರಕ್ಷಣಾ ಸಿಬ್ಬಂದಿಗಳು ಎಂಟು ಜನರನ್ನು ರಕ್ಷಣೆ ಮಾಡಿದ್ದಾರೆ.