ಕೊರೊನಾ ವೈರಸ್ ಭೀತಿ: ಬಳ್ಳಾರಿಯಲ್ಲಿ 2 ಶಂಕಿತ ಪ್ರಕರಣ ಪತ್ತೆ
ಬಳ್ಳಾರಿ, ಮಾರ್ಚ್ 06: ಕೊರೊನಾ ವೈರಸ್ ಭೀತಿಯು ಗಣಿ ಜಿಲ್ಲೆ ಬಳ್ಳಾರಿಗೂ ಆವರಿಸಿದಂತೆ ಕಾಣುತ್ತದೆ. ಜಿಲ್ಲೆಯ ಹೊಸಪೇಟೆ ಹಾಗೂ ಸಂಡೂರು ತಾಲ್ಲೂಕಿನ ತೋರಣಗಲ್ಲಿನರುವ ಜಿಂದಾಲ್ ನಲ್ಲಿ ಇಬ್ಬರಲ್ಲಿ ಶಂಕಿತ ಪ್ರಕರಣಗಳು ಪತ್ತೆಯಾಗಿವೆ.
ಹೊಸಪೇಟೆಯಲ್ಲಿ ವ್ಯಕ್ತಿಯೊರ್ವನು ದುಬೈನಿಂದ ಬಂದಾತನಾಗಿದ್ದಾನೆ. ಆತನಿಗೆ ಕೊರೊನಾ ರೋಗದ ಕೆಲ ಗುಣ ಲಕ್ಷಣಗಳು ಕಂಡು ಬಂದಿರುವುದರಿಂದ ಆತನಿಗೆ ಕೊರೊನಾ ವೈರಸ್ ಕಾಯಿಲೆ ಇದೆಯಾ? ಇಲ್ಲವಾ? ಎಂಬ ಬಗ್ಗೆ ಪರೀಕ್ಷೆ ಮಾಡಲು ಬೆಂಗಳೂರಿಗೆ ನಿನ್ನೆ ರಕ್ತದ ಮಾದರಿಯನ್ನು ಕಳುಹಿಸಿ ಕೊಡಲಾಗಿದೆ.
ರಾಜ್ಯದಲ್ಲಿ ಕೊರೊನಾ ಆತಂಕ; ಹಂಪಿಯಲ್ಲಿ ವಿದೇಶಿಗರ ತಪಾಸಣೆ
ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ, ಇದು ಸಾಮಾನ್ಯ. ಹೊರಗಿನಿಂದ ಬಂದಂತಹ ವ್ಯಕ್ತಿಗಳಿಗೆ ಇರಬಹುದು ಎಂದು ಪರೀಕ್ಷೆ ಮಾಡಲು ಮಾಡಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಮಾಹಿತಿ ನೀಡಿದ್ದಾರೆ.
ಇನ್ನೂ ನಮ್ಮ ಜನರಲ್ಲಿ ಕೊರೊನಾ ವೈರಸ್ ಬಗ್ಗೆ ಯಾವುದೇ ಗುಣ ಲಕ್ಷಣಗಳು ಕಂಡುಬಂದಿಲ್ಲ. ಜನರು ಯಾವುದೇ ಕಾರಣಕ್ಕೆ ಈ ರೀತಿಯ ವದಂತಿ ಸುದ್ದಿಗಳಿಗೆ ಕಿವಿಗೊಡಬೇಡಿ. ಇಲ್ಲಿ ಸಕಾಲಕ್ಕೆ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ. ಮತ್ತೊಂದು ಪ್ರಕರಣ ತೋರಣಗಲ್ಲಿನ ಜಿಂದಾಲ್ ಪ್ರದೇಶದಿಂದ ವರದಿಯಾಗಿದ್ದು, ಆ ವ್ಯಕ್ತಿಯ ರಕ್ತದ ಮಾದರಿಯನ್ನೂ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಕೊರೊನಾ; ಟೆಕ್ಕಿಯ ಸಹೋದ್ಯೋಗಿ ಆಸ್ಪತ್ರೆಗೆ ದಾಖಲು, ಸಚಿವರ ಟ್ವೀಟ್
ಹೋಟೆಲ್ ಗಳಿಗೆ ದೇಶ ಮತ್ತು ವಿದೇಶಗಳಿಂದ ಆಗಮಿಸುವ ಪ್ರವಾಸಿಗರ ಮಾಹಿತಿಯನ್ನು ತಕ್ಷಣ ಗಮನಕ್ಕೆ ತರುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಹೋಟೆಲ್ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲೆಯ ಹೋಟೆಲ್ ಮಾಲೀಕರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ದೇಶದ ವಿವಿಧ ರಾಜ್ಯಗಳ ಹಾಗೂ ವಿದೇಶಗಳ ಮತ್ತು ಅದರಲ್ಲೂ ವಿಶೇಷವಾಗಿ ಕೊರೊನಾ ಸೋಂಕು ಕಂಡುಬಂದ ದೇಶಗಳಿಂದ ಬಂದ ಪ್ರವಾಸಿಗರ ಮಾಹಿತಿಯನ್ನು ತಕ್ಷಣ ನೀಡಲೇಬೇಕು ಎಂದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಜನಸ್ಪಂದನಾ ಕೇಂದ್ರಕ್ಕೆ ಮಾಹಿತಿ ನೀಡಬಹುದಾಗಿದೆ. ಈ ಕೇಂದ್ರದ ರೂಂ ಮೊ.ನಂ:8277888866 ಹಾಗೂ ದೂ. ಸಂಖ್ಯೆ:08392-277100 ಗೆ ಕರೆ ಮಾಡಬಹುದು ಮತ್ತು ವ್ಯಾಟ್ಸಪ್ ಮಾಡಬಹುದು.
1077 ಉಚಿತ ಸಹಾಯವಾಣಿಗೂ ಕರೆ ಮಾಡಿ ಮಾಹಿತಿ ನೀಡಬಹುದು.
ಈ ಕೇಂದ್ರದಲ್ಲಿ ವೈದ್ಯಕೀಯ ಸಿಬ್ಬಂದಿ ಲಭ್ಯವಿರುತ್ತಾರೆ ಎಂದು ತಿಳಿಸಿದ ಜಿಲ್ಲಾಧಿಕಾರಿ, ನಿರಂತರವಾಗಿ 24 ಗಂಟೆಗಳ ಕಾಲ ಈ ಕೇಂದ್ರದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದರು. ಕೊರೊನಾ ವೈರಸ್ ಗೆ ಸಂಬಂಧಿಸಿದ ಲಕ್ಷಣಗಳ ಬಗ್ಗೆ ಸಭೆಯಲ್ಲಿ ವಿವರಿಸಿದ ಡಿಸಿ ನಕುಲ್ ಅವರು ಈ ರೀತಿಯ ಲಕ್ಷಣಗಳು ಪ್ರವಾಸಿಗರಲ್ಲಿ ಕಂಡುಬಂದಲ್ಲಿಯೂ ಸಹ ಮಾಹಿತಿ ನೀಡಿ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಭಯಬೇಡ, ಜಾಗೃತಿಯಿರಲಿ ಎಂದರು.