ಬಳ್ಳಾರಿ; 150 ಅಡಿ ಎತ್ತರದ ಧ್ವಜಸ್ತಂಭದಲ್ಲಿ ರಾಷ್ಟ್ರ ಧ್ವಜ ಹಾರಾಟ
ಬಳ್ಳಾರಿ, ಆಗಸ್ಟ್ 14; ಸೋಮವಾರ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಜಾದಿ ಕಾ ಅಮೃತ್ ಮಹೋತ್ಸವ ಮತ್ತು ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಕಾಶ್ಮೀರದಿಂದ ಕನ್ಯಾಕುಮಾರಿ ತನಕ ವಿವಿಧ ರಾಜ್ಯಗಳಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ.
ಬಳ್ಳಾರಿ ನಗರದ ಎಚ್. ಆರ್. ಗವಿಯಪ್ಪ ವೃತ್ತದಲ್ಲಿ 150 ಅಡಿ ಎತ್ತರ ಬೃಹತ್ ಧ್ವಜ ಸ್ತಂಭದ ಮೇಲೆ ಧ್ವಜಾರೋಹಣ ನಡೆಸಲಾಗಿದೆ. ಶನಿವಾರ ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಧ್ವಜಾರೋಹಣ ಮಾಡಿದರು.
ಬಳಿಕ ಮಾತನಾಡಿದ ಸಚಿವರು, "ನಮ್ಮ ದೇಶದ ಲಕ್ಷಾಂತರ ಜನರ ತ್ಯಾಗ ಬಲಿದಾನಗಳ ಫಲ ಈ ಸ್ವಾತಂತ್ರ್ಯ. ಇದರ ಬಗ್ಗೆ ಎಲ್ಲರೂ ಅರಿತುಕೊಂಡು ನಮ್ಮ ಮುಂದಿನ ಜೀವನ ರೂಪಿಸಿಕೊಳ್ಳಬೇಕು" ಎಂದು ಕರೆ ನೀಡಿದರು.
ಧ್ವಜಾರೋಹಣದ ಸಂದರ್ಭದಲ್ಲಿ ಶಾಸಕರಾದ ಸೋಮಶೇಖರ ರೆಡ್ಡಿ, ವೈ. ಎಂ. ಸತೀಶ್, ಮಹಾನಗರ ಪಾಲಿಕೆ ಮೇಯರ್ ರಾಜೇಶ್ವರಿ, ಬುಡಾ ಅಧ್ಯಕ್ಷ ಪಾಲನ್ನ, ಎಪಿಎಂಸಿ ಅಧ್ಯಕ್ಷ ಉಮೇಶ, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಎಸ್ಪಿ ಸೈದುಲು ಅಡಾವತ್ ಮುಂತಾದವರು ಉಪಸ್ಥಿತರಿದ್ದರು.

ಗೌರವಿಸುವ ಕೆಲಸ ಆಗುತ್ತಿದೆ
ಸಚಿವ ಬಿ. ಶ್ರೀರಾಮುಲು ಮಾತನಾಡಿ, "ದೇಶಾದ್ಯಂತ ಹಬ್ಬದ ವಾತಾವರಣ ಇದೆ. 1947 ಆಗಸ್ಟ್ 15ರ ಭಾರತ ಮತ್ತೆ ಕಣ್ಮುಂದೆ ಬಂದಿದೆ. ಇದು ನಮ್ಮ ಸ್ವಾತಂತ್ರ್ಯದ ಅಮೃತ ಘಳಿಗೆ" ಎಂದರು.
"ಸ್ವಾತಂತ್ರ್ಯ ಅಮೃತ ಮಹೋತ್ಸವದ ಭಾಗವಾಗಿ 75 ವಾರಗಳಿಂದ ದೇಶಾದ್ಯಂತ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ. ನಮ್ಮ ಹೋರಾಟ, ಹೋರಾಟಗಾರರನ್ನ, ಅವರ ತ್ಯಾಗ-ಬಲಿದಾನಗಳನ್ನ ನೆನೆದು ಗೌರವಿಸೋ ಕೆಲಸ ಆಗುತ್ತಿದೆ" ಎಂದು ಬಣ್ಣಿಸಿದರು.

ತ್ಯಾಗ, ಬಲಿದಾನಗಳ ಬಗ್ಗೆ ಜಾಗೃತಿ
"ಇಂದಿನ ಮಕ್ಕಳು ನಾಳಿನ ಭಾರತದ ಭವಿಷ್ಯ. ಯಾವುದೇ ಉತ್ತಮ ಭವಿಷ್ಯ, ಇತಿಹಾಸ ಇಲ್ಲದೇ ಪೂರ್ಣ ಆಗಲ್ಲ. ಆದ್ದರಿಂದ ನಮ್ಮ ದೇಶದ ಶ್ರೀಮಂತ ಇತಿಹಾಸದ ಕುರಿತು ಜಾಗೃತಿ ಮೂಡಿಸುವುದು ಈ ಅಮೃತ ಮಹೋತ್ಸವದ ಗುರಿ. ಯುವ ಪೀಳಿಗೆಯಲ್ಲಿ ಸ್ವಾತಂತ್ರ್ಯ ಯೋಧರು ಮಾಡಿದ ತ್ಯಾಗ, ಬಲಿದಾನಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಅಜಾದಿ ಕಾ ಅಮೃತ್ ಮಹೋತ್ಸವ ಆಚರಿಸಲಾಗುತ್ತಿದೆ" ಎಂದು ಸಚಿವ ಶ್ರೀರಾಮುಲು ಹೇಳಿದರು.

ಬ್ರಿಟಿಷರ ಪಾಲಿಗೆ ಸಿಂಹ ಸ್ವಪ್ನರಾಗಿದ್ದರು
ಬಿ. ಶ್ರೀರಾಮುಲು ಮಾತನಾಡಿ, "ಸಾವಿರಾರು ಸೈನಿಕರ ತಂಡದೊಂದಿಗೆ ಬ್ರಿಟಿಷರ ನಿದ್ದೆ ಗೆಡಿಸಿದ್ದ ಸಂಗೊಳ್ಳಿ ರಾಯಣ್ಣ. ಗೆರಿಲ್ಲ ಯುದ್ಧಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು ಮಾಡಿದ್ದರು. ಹೇಗಾದರೂ ಮಾಡಿ ರಾಯಣ್ಣನನ್ನು ಹಿಡಿಯಬೇಕೆಂದು ನಿರ್ಧರಿಸಿದ ಬ್ರಿಟಿಷರು ಅವರ ಮಾವ ಲಕ್ಷ್ಮಣನನ್ನು ದಾಳವಾಗಿ ಬಳಸಿಕೊಂಡು, ಡೋರಿ ಹಳ್ಳದಲ್ಲಿ ರಾಯಣ್ಣ ಸ್ನಾನ ಮಾಡಲು ಬರುತ್ತಾರೆಂದು ತಿಳಿದು ಮೋಸದಿಂದ ಆತನನ್ನು ಸೆರೆ ಹಿಡಿಯುತ್ತಾರೆ. ಆತನನ್ನು ಸೆರೆ ಹಿಡಿದ ಜಾಗ ಡೋರಿ ಹಳ್ಳ. ಇದು ಇಂದಿಗೂ ರಾಯಣ್ಣನ ಪೂಜೆಯ ಸ್ಥಳವಾಗಿದೆ" ಎಂದು ವಿವರಿಸಿದರು.
"ಸಿಂಧೂರ ಲಕ್ಷ್ಮಣರು ಸಹ ಬ್ರಿಟಿಷರ ಪಾಲಿಗೆ ಸಿಂಹ ಸ್ವಪ್ನರಾಗಿದ್ದರು. ಲಕ್ಷ್ಮಣ ಬೀಳಗಿಯ ಗುಡ್ಡಗಳನ್ನೇ ತನ್ನ ಅಡಗು ತಾಣಗಳನ್ನಾಗಿ ಮಾಡಿಕೊಂಡು ಬ್ರಿಟಿಷರ ಖಜಾನೆ, ಗೋಧಾಮು ಹಾಗೂ ಅವರಿಗೆ ಸಹಕರಿಸುತ್ತಿದ್ದ ಶ್ರೀಮಂತರ ಮನೆಗಳನ್ನು ಲೂಟಿ ಮಾಡಿ ಬಡವರಿಗೆ ಹಂಚುತ್ತಿದ್ದ. ಏಳು ಅಡಿ ಎತ್ತರದ ಅಜಾನುಬಾಹು ಆಗಿದ್ದ ಲಕ್ಷ್ಮಣ, 10 ಅಡಿ ಎತ್ತರದ ಗೋಡೆಗಳನ್ನು ಲೀಲಾ ಜಾಲವಾಗಿ ಹಾರಿಬಿಡುತ್ತಿದ್ದ. ತನ್ನ ಪಡೆಯೊಂದಿಗೆ ಬ್ರಿಟಿಷರ ನಿದ್ದೆಗೆಡಿಸಿದ್ದ ಲಕ್ಷ್ಮಣನನ್ನು ಆತನ ನಿಕಟ ವರ್ತಿ ಮೂಲಕ ಮಾಹಿತಿ ಪಡೆದು ಮೋಸದಿಂದ ಕೇವಲ 24 ನೇ ವಯಸ್ಸಿನಲ್ಲಿ ಕೊಲ್ಲಲಾಯಿತು" ಎಂದರು.

ಸ್ವಾತಂತ್ರ್ಯ ಹೋರಾಟದ ಶಕ್ತಿ
"ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಮಕ್ಕಳು, ಮಹಿಳೆಯರು ಎನ್ನದೇ ಹಿರಿಯರು ಕಿರಿಯರೆನ್ನದೇ, ಎಲ್ಲರೂ ಪಾಲ್ಗೊಂಡ ಪರಿಣಾಮ ಬ್ರಿಟಿಷರು ಭಾರತ ಬಿಟ್ಟು ತೊಲಗಿದರು. ಅಂದು ಸ್ವಾತಂತ್ರ್ಯ ಹೋರಾಟದ ಶಕ್ತಿ ಹೇಗಿತ್ತೆಂದರೆ, ಸಾವಿರಾರು ವಿದ್ಯಾರ್ಥಿಗಳು, ಯುವಕರು, ಜನಸಾಮಾನ್ಯರು, ಶಾಲಾ ಕಾಲೇಜು, ವೃತ್ತಿ ತ್ಯಜಿಸಿ ಹೋರಾಟಕ್ಕೆ ಧುಮುಕಿದ್ದರು. ಎದೆಗೆ ಗುಂಡು ಬಿದ್ದರೂ ದೇಶ ಪ್ರೇಮದ ಘೋಷಣೆಗಳನ್ನ ನಮ್ಮ ಯುವಕರು ಕೂಗುತ್ತಿದ್ದರು. ಬೆಂಕಿಯಂತಿದ್ದರು ನಮ್ಮ ಯುವಕರು" ಎಂದು ಬಿ. ಶ್ರೀರಾಮುಲು ಬಣ್ಣಿಸಿದರು.

ನವಭಾರತ ನಿರ್ಮಾಣ
"ನವ ಭಾರತ ನಿರ್ಮಾಣ ಯುವಕರಿಂದ ಮಾತ್ರ ಸಾಧ್ಯ. ಕಷ್ಟಗಳಲ್ಲೇ ಬೆಂದು, ದೇಶಕ್ಕೆ ತಮ್ಮನ್ನು ಸಮರ್ಪಿಸಿಕೊಂಡು ದೇಶದ ಕೀರ್ತಿಯಾಗಿರೋ ನಮ್ಮ ಪ್ರಧಾನಿ ಮೋದಿ, ನಮ್ಮ ರಾಷ್ಟ್ರಪತಿ ದ್ರೌಪದಿ ಮುರ್ಮು, ಹಿಂದಿನ ರಾಷ್ಟ್ರಪತಿಗಳಾದ ಡಾ. ಕಲಾಂ ಸೇರಿದಂತೆ, ಒಲಂಪಿಕ್, ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ, ರಾಜಕಾರಣ, ಕಲೆ, ಸಾಹಿತ್ಯ, ಸಿನೆಮಾ, ಆರ್ಥಿಕತೆ, ಕೈಗಾರಿಕಾ ವಲಯಗಳಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದ ಸಾಧಕರಂತೆ ಇಲ್ಲಿ ನೆರೆದಿರುವ ಪ್ರತಿಯೊಬ್ಬ ಯುವಕ ಯುವತಿಯರು ಆಗಬೇಕು. ನವ ಭಾರತ ನಿರ್ಮಾಣ ನಿಮ್ಮಿಂದ ಆಗಬೇಕು" ಎಂದು ಸಚಿವ ಬಿ. ಶ್ರೀರಾಮುಲು ಕರೆ ನೀಡಿದರು.












Click it and Unblock the Notifications