ಮಂತ್ರಿಯಾದವರೂ ನನ್ನ ಪರಮಾಪ್ತರೇ : ಸಿದ್ದರಾಮಯ್ಯ
ಬಾಗಲಕೋಟೆ, ಜೂನ್.07 : ಬಾದಾಮಿ ಮತಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಬಂದ ಸಿದ್ದರಾಮಯ್ಯ ಮೊದಲು ಬಾದಾಮಿಯ ಬನಶಂಕರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದಲ್ಲಿ ತಮ್ಮನ್ನು ಹಾಗೂ ಬೆಂಬಲಿಗರನ್ನು ಕಡೆಗಣನೆ ಮಾಡಿಲ್ಲ. ಸಂಪುಟದಲ್ಲಿ ತಮ್ಮ ಆಪ್ತರು ಇಲ್ಲ ಅನ್ನೋದಕ್ಕಿಂತ ಮಂತ್ರಿ ಆದವರು ತಮ್ಮ ಪರಮಾಪ್ತರಲ್ಲೇ ಪರಮಾಪ್ತರು ಎಂದು ತಿಳಿಸಿದರು.
ಪಕ್ಷ, ಸರ್ಕಾರ ಅಂಥ ಹೇಳಿ ಅಧಿಕಾರ ಮಾಡಬೇಕೇ ಹೊರತು ಆಪ್ತರು, ಪರಮಾಪ್ತರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಅಂಥ ಅಲ್ಲ. ಖಾಲಿ ಇರುವ ಆರು ಸ್ಥಾನಗಳನ್ನು ಪ್ರಾದೇಶಿಕತೆ, ಜಾತಿ ಹಾಗೂ ಸಾಮಾಜಿಕ ನ್ಯಾಯದ ಮೇಲೆ ಹಂಚಿಕೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್ ಪಕ್ಷಕ್ಕೆ ಕಾಂಗ್ರೆಸ್ ಶರಣಾಗಿಲ್ಲ. ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದು ಅನ್ನೋ ಕಾರಣಕ್ಕೆ ಜೆಡಿಎಸ್ ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಟ್ಟಿದ್ದೇವೆ ಎಂದು ಹೇಳಿದರು.
ಇತಿಹಾಸ ಇರೋ ಕಾಂಗ್ರೆಸ್ ಪಕ್ಷವನ್ನು ಯಾರಿಂದಲೂ ಮುಗಿಸೋಕಾಗಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ತಮ್ಮ ವಿರುದ್ದ ಮುನಿಸಿಕೊಂಡಿದ್ದಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಹಾಗೇ ಒಬ್ಬೊಬ್ಬರ ಬಗ್ಗೆ ಮಾತನಾಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು.

ಐದು ವರ್ಷಗಳ ಅವಧಿಯಲ್ಲಿ ಬಾದಾಮಿ ಸಮಗ್ರ ಅಭಿವೃದ್ಧಿ ಪಡೆಯುವ ಅಭಯ ನೀಡಿದರು. ಇದೇ ಸಂದರ್ಭದಲ್ಲಿ ತಾಲೂಕಿನ ಜಲಗೇರಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸರ್ಕಾರದಿಂದ ಐದು ಲಕ್ಷ ರೂ.ಚೆಕ್ ನ್ನು ಸಿದ್ದರಾಮಯ್ಯ ನೀಡಿದರು.

ಮೊದಲ ಸಲ ಸಿದ್ದರಾಮಯ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ಸಮಯದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ಗೈರಾಗಿದ್ದರು.












Click it and Unblock the Notifications