ಡಿ. ಕೆ. ಶಿವಕುಮಾರ್ ಬಂಧನದ ಹಿಂದೆ ಸಿದ್ದರಾಮಯ್ಯ ಕೈವಾಡ: ನಳಿನ್ ಆರೋಪ
ಬಾಗಲಕೋಟೆ, ಸೆಪ್ಟೆಂಬರ್ 8: "ಡಿ. ಕೆ. ಶಿವಕುಮಾರ್ ಬಂಧನದ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈವಾಡವಿದೆ. ನಮಗೆ ಸಿದ್ದರಾಮಯ್ಯ ಮೇಲೆ ಸಂಶಯ ಇದೆ. ಡಿ. ಕೆ. ಶಿವಕುಮಾರ್ ಮೇಲೆ ಕೇಸ್ ಹಾಕುವುದಕ್ಕೆ ಸಿದ್ದರಾಮಯ್ಯ ಕಾರಣ. ಶಿವಕುಮಾರ್ ಬೆಳೆಯುತ್ತಾರೆ ಎಂಬ ಕಾರಣಕ್ಕೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪ ಮಾಡಿದರು.
Recommended Video
ಬಾಗಲಕೋಟೆಯಲ್ಲಿ ಭಾನುವಾರ ಮಾತನಾಡಿದ ಅವರು, ಶಿವಕುಮಾರ್ ಅವರನ್ನು ಕರ್ನಾಟಕ ಸರಕಾರ ಒಳಗೆ ಹಾಕಿಲ್ಲ. ಯಾವುದೇ ಲೋಕಾಯುಕ್ತ ಅಧಿಕಾರಿಗಳು ಒಳಗೆ ಹಾಕಿಲ್ಲ. ಎರಡು ವರ್ಷದ ಹಿಂದೆ ಆದಾಯ ತೆರಿಗೆ ಇಲಾಖೆ ದಾಳಿ ಆದಾಗ ಕಾಂಗ್ರೆಸ್ ಸರಕಾರವೇ ಇತ್ತು. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದರು. ಅವರೇ ನಿಲ್ಲಿಸಬಹುದಿತ್ತಲ್ಲ, ಯಾಕೆ ನಿಲ್ಲಿಸಲಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಎರಡು ವರ್ಷಗಳ ಹಿಂದೆಯೇ ಶಿವಕುಮಾರ್ ಮನೆ ಮೇಲೆ ದಾಳಿ ಆಗಿತ್ತು. ಇದರಲ್ಲಿ ಯಾವುದೇ ರಾಜಕೀಯ ಧ್ವೇಷವಿಲ್ಲ. ಹಾಗೆ ರಾಜಕೀಯ ದ್ವೇಷ ಮಾಡುವುದೇ ಆಗಿದ್ದರೆ ಚುನಾವಣೆ ಮುಂಚೆಯೇ ಮಾಡಬಹುದಿತ್ತು. ಚುನಾವಣೆ ಮುಂಚೆಯೇ ಒಳಗೆ ಹಾಕಬಹುದಿತ್ತಲ್ಲ? ಕಾಂಗ್ರೆಸ್ ನವರಿಗೆ ಈಗ ಮುಖ ಉಳಿಸಿಕೊಳ್ಳಬೇಕಾಗಿದೆ. ಶಿವಕುಮಾರ್ ಭ್ರಷ್ಟಾಚಾರ ಆರೋಪದಲ್ಲಿ ಒಳಗೆ ಹೋಗಿದ್ದಾರೆ. ಮುಖ ಉಳಿಸಿಕೊಳ್ಳಲು ಹೀಗೆಲ್ಲ ಮಾತಾಡುತ್ತಿದ್ದಾರೆ ಎಂದಿದ್ದಾರೆ.

ಆದಾಯ ತೆರಿಗೆ ಇಲಾಖೆ, ಇ. ಡಿ. ಯವರು ದಾಖಲಾತಿ ನೋಡಿಕೊಂಡು ಪ್ರಕರಣ ದಾಖಲು ಮಾಡುತ್ತಾರೆ. ಪ್ರಕರಣ ದಾಖಲು ಮಾಡಿ, ಡಿ. ಕೆ. ಶಿವಕುಮಾರ್ ರನ್ನು ಅರೆಸ್ಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಈಶ್ವರಪ್ಪ ಭಾವನೆಯಲ್ಲಿ ವ್ಯತ್ಯಾಸ ಇರಬಹುದು
ಪ್ರವಾಹ ಸಂತ್ರಸ್ತರಿಗೆ ಹತ್ತು ಸಾವಿರ ಪರಿಹಾರ ಕೊಟ್ಟಿದ್ದೆ ಜಾಸ್ತಿ ಎಂದು ಸಚಿವ ಕೆ. ಎಸ್. ಈಶ್ವರಪ್ಪ ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡ ನಳಿನ್ ಕುಮಾರ್ ಕಟೀಲ್, ಈಶ್ವರಪ್ಪ ಅವರ ಭಾವನೆಯಲ್ಲಿ ವ್ಯತ್ಯಾಸವಿರಬಹುದು. ಅವರು ಹಾಗೆ ಹೇಳಿರಲಿಕ್ಕಿಲ್ಲ. ಹತ್ತು ಸಾವಿರ ಕೊಟ್ಟಿದ್ದೇವೆ ಎಂಬ ಭಾವನೆಯಲ್ಲಿ ಹೇಳಿರಬೇಕು. ಅದನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.

ನೆರೆ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದ್ದಾರೆ. ಯಾವ ಮುಖ್ಯಮಂತ್ರಿಯೂ ಈ ರೀತಿ ಓಡಾಡಲಿಲ್ಲ. ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಹತ್ತು ಸಾವಿರ ನೀಡಲಾಗುತ್ತಿದೆ. ಹಿಂದೆ ಹೀಗೆ ಯಾವ ಮುಖ್ಯಮಂತ್ರಿಯೂ ಮಾಡಲಿಲ್ಲ. ಹಿಂದಿನ ಸರಕಾರದಲ್ಲಿ ಮನೆ ಕಟ್ಟಿಸಿಕೊಳ್ಳಲು ಕೇವಲ ತೊಂಬತ್ತೆರಡು ಸಾವಿರ ಕೊಟ್ಟಿದೆ. ನಾವು ಮನೆ ಬಿದ್ದವರಿಗೆ ಐದು ಲಕ್ಷ ಘೋಷಣೆ ಮಾಡಿದ್ದೇವೆ ಎಂದು ನಳಿನ್ ಹೇಳಿದ್ದಾರೆ.
ಕೇಂದ್ರ ಸರಕಾರ ಹಣ ಬಿಡುಗಡೆ ಮಾಡುತ್ತದೆ
ನೆರೆ ವೀಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಬಾರದಿದ್ದಕ್ಕೆ ಪ್ರತಿಕ್ರಿಯೆ ನೀಡಿದ ನಳಿನ್, ಈಗಾಗಲೇ ಅಮಿತ್ ಶಾ ಬಂದಿದ್ದಾರೆ. ಸಮೀಕ್ಷೆ ಪ್ರಕಾರ ಹಣ ಬಿಡುಗಡೆ ಮಾಡಲಾಗುತ್ತದೆ. ವರದಿ ನಂತರ ಎಷ್ಟು ಅನುದಾನ ಬೇಕಾಗುತ್ತದೋ ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತದೆ ಎಂದು ಉತ್ತರಿಸಿದ್ದಾರೆ.

ಅನರ್ಹ ಶಾಸಕರ ತ್ಯಾಗ- ಬಲಿದಾನದಿಂದ ಬಿಜೆಪಿ ಸರ್ಕಾರ ಬಂದಿದೆ ಎಂಬ ಶಾಸಕ ರೇಣುಕಾಚಾರ್ಯ ಹೇಳಿಕೆಗೆ ಉತ್ತರಿಸಲು ನಳಿನ್ ಕುಮಾರ್ ಕಟೀಲ್ ನಿರಾಕರಿಸಿದ್ದಾರೆ.












Click it and Unblock the Notifications