ಭಿನ್ನಮತ ಚರ್ಚೆಗೆ ಹೈಕಮಾಂಡ್ ಕರೆದಿಲ್ಲ ಸಿದ್ದರಾಮಯ್ಯ ಸ್ಪಷ್ಟನೆ
ಬಾಗಲಕೋಟೆ, ಜೂನ್ 10:ರಾಜ್ಯ ಜೆಡಿಎಸ್-ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಕಾಂಗ್ರೆಸ್ ಪಕ್ಷದಿಂದ ಉಂಟಾಗಿರುವ ಸಂಪುಟ ಬಿಕ್ಕಟ್ಟಿನ ಕುರಿತು ತಮ್ಮ ಜೊತೆ ಚರ್ಚಿಸಲು ಹೈಕಮಾಂಡ್ನಿಂದ ಯಾವುದೇ ಬುಲಾವ್ ಬಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸ್ವಕ್ಷೇತ್ರ ಬಾದಾಮಿ ತಾಲೂಕಿನ ನೀಲಗುಂದ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಸದ್ಯಕ್ಕೆ ಡಿಸಿಎಂ ಹುದ್ದೆ ಸೃಷ್ಟಿಸುವ ಕುರಿತಂತೆ ಯಾವುದೇ ಚಿಂತನೆ ನಡೆದಿಲ್ಲ, ಆ ರೀತಿ ಯಾವುದೇ ಬೆಳವಣಿಗೆ ಇದ್ದರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ.
ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ನಾನು ಯಾವುದೇ ಹೆಸರನ್ನು ಸೂಚಿಸಿಲ್ಲ, ಪಕ್ಷದ ಬಗ್ಗೆ ಹಯಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿದ್ದು, ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಬಹಿರಂಗವಾಗಿ ಚರ್ಚಿಸುವುದಿಲ್ಲ, ಎಐಸಿಸಿಯಿಂದ ಬಂದ ನಿರ್ದೇಶನವನ್ನು ಪಾಲಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಅತೃಪ್ತ ಶಾಸಕರನ್ನು ಉಪಮುಖ್ಯಮಂತ್ರಿ ಡಾ. ಪರಮೇಶ್ವರ್ ಸಮಾಧಾನಪಡಿಸುತ್ತಿದ್ದಾರೆ ನಾನು ಕೆಲವರೊಂದಿಗೆ ಮಾತನಾಡಿದ್ದೇನೆ, ಸ್ವತಃ ಎಐಸಿಸಿ ಅಧ್ಯಕ್ಷರು ಎಂಬಿ ಪಾಟೀಲ್ ಜೊತೆಗೆ ಮಾತನಾಡಿದ್ದಾರೆ. ಹೀಗೆ ಯಾರಿಗೆ ಅಸಮಾಧಾನ ಇದೆ ಅವರನ್ನು ಸಮಾಧಾನಪಡಿಸಲಾಗುತ್ತಿದೆ. ಎಲ್ಲರನ್ನೂ ಕೇವಲ ಸಮಾಧಾನಪಡಿಸಲಾಗಿದೆ ಹೊರತು ಭರವಸೆ ನೀಡಿಲ್ಲ ಎಂದರು.
ಸಂದರ್ಭಕ್ಕೆ ತಕ್ಕಂತೆ ಪಕ್ಷ ಕೈಗೊಂಡಿರುವ ನಿರ್ಧಾರವನ್ನು ಎಲ್ಲರೂ ಒಪ್ಪಬೇಕಾಗುತ್ತದೆ. ರಾಜಕೀಯ ಪರಿಸ್ಥಿತಿಯ ಆಳ ಅಗಲ ನೋಡಿಕೊಂಡೇ ಹೈಕಮಾಂಡ್ ನಿರ್ಧಾರ ಮಾಡಿರುತ್ತದೆ. ಅದೆಲ್ಲವನ್ನೂ ನಾವು ಪಕ್ಷದ ನಿಷ್ಠಾವಂತನಾಯಕರಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಅತೃಪ್ತ ಶಾಸಕರಿಗೆ ಪರೋಕ್ಷವಾಗಿ ಬುದ್ಧಿಮಾತು ಹೇಳಿದರು.












Click it and Unblock the Notifications