SBI ಬ್ಯಾಂಕ್ನಿಂದ ಪತ್ನಿ-ತಾಯಿ ಖಾತೆಗೆ 1.60 ಕೋಟಿ ರೂ ವರ್ಗಾಯಿಸಿ ಸಿಕ್ಕಿಬಿದ್ದ ಕ್ಯಾಷಿಯರ್
ಬಾಗಲಕೋಟೆ, ಜೂನ್ 9: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಗಾದೆಗೆ ಮಾತನಂತೆ, ದಿನಾಲು ಲಕ್ಷಾಂತರ ರೂಪಾಯಿಯನ್ನು ನೋಡುತ್ತಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುವ ಕ್ಯಾಷಿಯರ್, ತಾನೂ ಉದ್ಯೋಗ ಮಾಡುವ ಬ್ಯಾಂಕ್ನಲ್ಲಿಯೇ ಅಧಿಕಾರವನ್ನು ದುರಪಯೋಗಪಡಿಸಿಕೊಂಡು ಬರೋಬ್ಬರಿ 1 ಕೋಟಿ, 60 ಲಕ್ಷ ರೂಪಾಯಿಗಳನ್ನು ಲಪಟಾಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬಾಗಲಕೋಟೆ ಜಿಲ್ಲೆಯ ನವನಗರದ ಎಸ್ ಬಿಐ ಬ್ಯಾಂಕ್ ನಲ್ಲಿ ಕ್ಯಾಷಿಯರ್ ಹುದ್ದೆಯಲ್ಲಿದ್ದು,ಲಕ್ಷಾಂತರ ಹಣವನ್ನು ಪ್ರತಿಧಿನ ನೋಡುತ್ತಿದ್ದ ಆತ ತನ್ನ ಜವಾಬ್ದಾರಿಯನ್ನು ಮರೆತು ಮೋಸ ಮಾಡಿ, ಕೊನೆಗೆ ಪೊಲೀಸರ ಅತಿಥಿಯಾಗಿದ್ದಾನೆ. ಜಿಲ್ಲೆಯ ನವನಗರದ ಎಸ್ ಬಿ ಐ ಬ್ಯಾಂಕ್ನ ಕ್ಯಾಷಿಯರ್ ಸಂತೋಷ ಕಬಾಡೆ ಬರೊಬ್ಬರಿ 1.6 ಕೋಟಿ ರೂ ಹಣ ವಂಚನೆ ಮಾಡಿದ್ದಾನೆ. ಸಂತೋಷ ಕಳೆದ ಮೂರು ತಿಂಗಳಿನಿಂದ ಟೆಲ್ಲರ್ ಐಡಿ ನಂಬರ್ ಮೂಲಕ ತನ್ನ ಪತ್ನಿ ಪೂಜಾ ಕಬಾಡೆ ಹಾಗೂ ತಾಯಿ ಜನಾಬಾಯಿ ಕಬಾಡೆ ಖಾತೆಗೆ ಬ್ಯಾಂಕಿನ ಆರ್ ಬಿ ಐ ಕರೆನ್ಸಿ ಚೆಸ್ಟ್ ನಲ್ಲಿರುವ ಹಣವನ್ನು ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ.
ವಂಚನೆ ಕೇಸ್: ಮಾಜಿ ಕ್ರಿಕೆಟರ್ ನಮನ್ ಓಝಾ ತಂದೆ ಬಂಧನ
ಈ ವಿಚಾರ ಗೊತ್ತಾಗುತ್ತಿದ್ದಂತೆ ಬ್ಯಾಂಕಿನ ಮ್ಯಾನೇಜರ್ ಅಲ್ಲಪ್ಪ ಲಕ್ಷೆಟ್ಟಿ ಬಾಗಲಕೋಟೆ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಸಂತೋಷ ಕಬಾಡೆಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸಂತೋಷ ಕಬಾಡೆ ಸಿಕ್ಕಿಬಿದ್ದದ್ದೇಗೆ?
ಸಂತೋಷ ಕಬಾಡೆ ಸಿಕ್ಕಿ ಬೀಳಲು ಅಲರ್ಟ್ ಮೆಸೇಜ್ ಕಾರಣ. ಬ್ಯಾಂಕ್ ನ ಗ್ರಾಹಕ ಅಥವಾ ಬ್ಯಾಂಕ್ ಸಿಬ್ಬಂದಿ ಖಾತೆಗೆ ದೊಡ್ಡ ಮೊತ್ತದ ಹಣ ಜಮಾ ಆದರೆ ಮೇಲಾಧಿಕಾರಿಗಳಿಂದ ಅಲರ್ಟ್ ಮೆಸೇಜ್ ಬರುತ್ತದೆ. ಆ ಪ್ರಕಾರ ಜೂನ್ 4 ರಂದು ಮೇಲಾಧಿಕಾರಿಗಳ ಸೂಚನೆ ಪ್ರಕಾರ ಬ್ಯಾಂಕ್ ನ ಸಿಬ್ಬಂದಿ ಗ್ರಾಹಕರ ಖಾತೆ ಪರಿಶೀಲಿಸಿದಾಗ ಸಂತೋಷ ಕಬಾಡೆ ತಾಯಿ ಜನಾಬಾಯಿ ಹಾಗೂ ಪತ್ನಿ ಪೂಜಾ ಖಾತೆಗೆ ಹೆಚ್ಚು ಮೊತ್ತದ ಹಣ ವರ್ಗಾವಣೆಯಾಗಿದ್ದು ಪತ್ತೆಯಾಗಿದೆ.
ದುಬೈನಲ್ಲಿ ಬಂಧಿತರಾದ ಗುಪ್ತ ಸಹೋದರರು ಯಾರು?
ಕಬಾಡೆ ಪತ್ನಿ ಪೂಜಾ ಅವರ ಖಾತೆ ನಂ 62325851077 ಹಾಗೂ ತಾಯಿ ಜನಾಬಾಯಿ ಅವರ 62273526519 ಖಾತೆಗೆ ಲಕ್ಷಾಂತರ ರೂಪಾಯಿ ವರ್ಗಾವಣೆಯಾಗಿರುವುದು ಕಂಡುಬಂದಿದೆ. ನಂತರ ಆ ಖಾತೆಗಳಿಂದ ಆನ್ ಲೈನ್ ಮೂಲಕ ಸಂತೋಷ ಕಬಾಡೆ ತನ್ನ ವಿಜಯಪುರ ಹೆಚ್ ಡಿ ಎಪ್ ಸಿ ಬ್ಯಾಂಕ್ ಖಾತೆ ನಂ 50100308398460 ಗೆ ವರ್ಗಾವಣೆ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ. ಸದ್ಯ ಬ್ಯಾಂಕ್ ನಲ್ಲಿ ನಾಲ್ಕು ತಂಡಗಳು ಬಂದು ಆಡಿಟ್ ಕಾರ್ಯ ನಡೆಸಿದ್ದಾರೆ.
ಇನ್ನು ಕ್ಯಾಷಿಯರ್ ವಂಚನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಬ್ಯಾಂಕ್ ನಂಬಿ ಜನರು ಕೋಟ್ಯಾಂತರ ರೂ ವ್ಯವಹಾರ ಮಾಡುತ್ತಾರೆ. ಆದರೆ ಬ್ಯಾಂಕ್ ಸಿಬ್ಬಂದಿಯೆ ಹೀಗೆ ಮೋಸ ಮಾಡಿದರೆ ಇನ್ಯಾರನ್ನು ನಂಬಿ ತಾವೂ ಕಷ್ಟಪಟ್ಟು ದುಡಿದ ಹಣವನ್ನು ಬ್ಯಾಕಿನಲ್ಲಿಡುವುದು ಎಂದು ಆಕ್ರೋಶವ್ಯಕ್ತಪಡಿಸಿದ್ದು, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿದ್ದಾರೆ.
(ಒನ್ಇಂಡಿಯಾ ಸುದ್ದಿ)