ಬಾಗಲಕೋಟೆ: ಎತ್ತಿನ ಬಂಡಿಗೆ ಲಾರಿ ಡಿಕ್ಕಿ, 9 ಮಂದಿ ಸಾವು
ಬಾಗಲಕೋಟೆ, ಮಾರ್ಚ್ 09: ಎತ್ತಿನ ಬಂಡಿಗೆ ಹಿಂಬದಿಯಿಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮದ ಬಳಿ ಈ ಭೀಕರ ದುರಂತ ಸಂಭವಿಸಿದೆ. ಮೃತರೆಲ್ಲರೂ ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದರು.
ಹುನಗುಂದ ಕಡೆಯಿಂದ ಬಾಗಲಕೋಟೆಗೆ ತೆರಳುತ್ತಿದ್ದ ತೊಗರಿ ತುಂಬಿದ ಲಾರಿ ವೇಗವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿ 7 ಜನ ಸಾವನ್ನಪ್ಪಿದರೆ, ಇನ್ನಿಬ್ಬರು ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮೃತರನ್ನು ಕಾಶಮ್ಮ ಹಿರೇಮಠ, ವಿಜಯಲಕ್ಷ್ಮಿ ಹಿರೇಮಠ, ಚಂದ್ರಯ್ಯ ಹಿರೇಮಠ, ರತ್ನವ್ವ ಹಿರೇಮಠ, ಗಂಗವ್ವ ಹೂಗಾರ, ಸಿದ್ದವ್ವ ಹೂಗಾರ, ಬಸಮ್ಮ ಗೊರವರ, ಶ್ಯಾನಬಸಮ್ಮ ಮಠ, ಗಂಗವ್ವ ಗೌಡರ ಅಂತ ಗುರ್ತಿಸಲಾಗಿದೆ. ಇನ್ನು ಅಪಘಾತವಾದ ವೇಳೆ ಎತ್ತಿನಬಂಡಿ ಪಲ್ಟಿಯಾಗಿದೆ. ಈ ವೇಳೆ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಜನರ ಮೇಲೆಯೇ ಲಾರಿ ಹರಿದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಎತ್ತುಗಳು ಸಹ ಸ್ಥಳದಲ್ಲಿಯೇ ಜೀವಕಳೆದುಕೊಂಡಿದ್ದು ಲಾರಿಯಲ್ಲಿದ್ದ ತೊಗರಿ ರಸ್ತೆಯ ತುಂಬ ಚೆಲ್ಲಾಪಿಲ್ಲಿಯಾಗಿ ಬಿದ್ದವೆ. ಇನ್ನು ಸ್ಥಳದಲ್ಲಿ ಮೃತರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಬಾಗಲಕೋಟೆ ಎಸ್ಪಿ ಸಿಬಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications