ಕಾಂಗ್ರೆಸ್ ಸುಳ್ಳು ಪ್ರಚಾರ: ಗೋವಿಂದ ಕಾರಜೋಳ ವಾಗ್ದಾಳಿ
ಬಾಗಲಕೋಟೆ, ಜೂ 7: ಜೈಲಿಗೆ ಹೋಗಿ ಬಂದ ಕಾಂಗ್ರೆಸ್ಸಿಗರಿಂದ ಮಾಡುವ ನೈತಿಕ ಪಾಠ ಬಿಜೆಪಿಗೆ ಬೇಕಾಗಿಲ್ಲ. ಕಾಂಗ್ರೆಸ್ ಪಕ್ಷದವರು ಹತಾಶರಾಗಿ ಸುಳ್ಳು ವಿಚಾರಗಳನ್ನು ಬಿತ್ತುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.
ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ವಾಯುವ್ಯ ಪದವೀಧರ, ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 60 ವರ್ಷ ಕಾಲ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದವರು ಬಡವರನ್ನು ಕೇವಲ ಮತಬ್ಯಾಂಕ್ ಆಗಿ ಪರಿಗಣಿಸಿದ್ದರು. ಬಸವಣ್ಣನವರ ಕುರಿತಾದ ವಿಚಾರವನ್ನು ಪಠ್ಯದಿಂದ ಕೈಬಿಡಲಾಗುತ್ತಿದೆ ಎಂದು ಕಾಂಗ್ರೆಸ್ ಜನರಲ್ಲಿ ಸುಳ್ಳು ವಿಚಾರ ಬಿತ್ತುತ್ತಿದೆ. ಇದನ್ನೆಲ್ಲ ನಂಬಲು ಜನರು ಮೂರ್ಖರಲ್ಲ. ಕಾಂಗ್ರೆಸ್ ಲಜ್ಜೆಗಟ್ಟ ವರ್ತನೆ ತೋರುತ್ತಿದೆ ಎಂದರು.
ಹಿಜಾಬ್ ವಿವಾದ: ಕೋರ್ಟ್ ನೀಡುವ ತೀರ್ಪನ್ನು ಸ್ವಾಗತಿಸೋಣ; ಗೋವಿಂದ ಕಾರಜೋಳ
ಹಿಂದೆ ಇಂದಿರಾಗಾಂಧಿಯವರು ಬಡತನ ನಿರ್ಮೂಲನೆ ಮಾಡುವುದಾಗಿ ಹೇಳಿದ್ದರು. ಆದರೆ, ಈಗ ಕಾಂಗ್ರೆಸ್ ಪಕ್ಷವೇ ನಿರ್ಮೂಲನೆ ಆಗುತ್ತಿದೆ. ಬಡವರು, ಅಲ್ಪ ಸಂಖ್ಯಾತರು, ದಲಿತರಿಗೆ ಶಿಕ್ಷಣ ನೀಡಿದರೆ ತಮ್ಮ ಸಾಂಪ್ರದಾಯಿಕ ಮತಬ್ಯಾಂಕ್ ಕಳೆದುಕೊಳ್ಳುವ ಭೀತಿಯಲ್ಲಿ ಕಾಂಗ್ರೆಸ್ ಆವರ ಅಭಿವೃದ್ಧಿಗೆ ಮುಂದಾಗಲಿಲ್ಲ ಎಂದು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಶಿಕ್ಷಣ ಕ್ರಾಂತಿ ನಡೆಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಉದ್ಯೋಗ ಸಿಗಬೇಕು ಎಂಬ ಮಹದಾಸೆಯಿಂದ ಹೊಸ ಶಿಕ್ಷಣ ನೀತಿ ಜಾರಿಗೆ ತಂದಿದ್ದಾರೆ ಎಂದು ತಿಳಿಸಿದರು.
ಆಧಾರಗಳಿಲ್ಲದೆ ಕಾಂಗ್ರೆಸ್ ಆರೋಪ
ಆಧಾರಗಳಿಲ್ಲದೆ ಆರೋಪ ಮಾಡುತ್ತಿರೋ ಕಾಂಗ್ರೆಸ್ನವರು ಹತಾಶರಾಗಿ ಹುಚ್ಚು ಹಿಡಿದವರಂತೆ ಅಡ್ಡಾಡುತ್ತಿದ್ದಾರೆಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು. ಬಿಜೆಪಿಗರ ಮೇಲೆ ಕಾಂಗ್ರೆಸ್ ನಿರಂತರ ಆರೋಪ ಮಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಪಿಎಸ್ಐ ಅಕ್ರಮ ನೇಮಕಾತಿ ವಿಚಾರದಲ್ಲಿ ಈಗಾಗಲೇ ನಿಷ್ಪಕ್ಷಪಾತ ತನಿಖೆ ನಡೆಯುತ್ತಿದೆ, ಯಾಕಂದರೆ ಇಲಾಖೆಯಲ್ಲಿ ಕಾನ್ಸಟೇಬಲ್ ನಿಂದ ಹಿಡಿದು ಡಿವೈಎಸ್ಪಿವರೆಗೆ ಒಳಗೆ ಹಾಕುವ ಕೆಲಸ ಮಾಡಿದ್ದೀವಿ. ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ನಮ್ಮ ಬಿಜೆಪಿ ಸಕಾ೯ರ ನಿಷ್ಪಕ್ಷಪಾತ ತನಿಖೆ ಮಾಡುತ್ತಿದೆ. ಇಂತಹದ್ದನ್ನು ಸ್ವಾಗತಿಸುವುದನ್ನ ಬಿಟ್ಟು ಕಾಂಗ್ರೆಸ್ ಭಂಡತನದಿಂದ ಆರೋಪ ಮಾಡುತ್ತಿದೆ.
ಕಾಂಗ್ರೆಸ್ನವರು ಹತಾಶರಾಗಿದ್ದಾರೆ:
ಕಾಂಗ್ರೆಸ್ ಪಕ್ಷದ ಆಡಳಿತ ಅವಧಿಯಲ್ಲಿ ಈ ಹಿಂದೆ ಪ್ರಶ್ನೆ ಪತ್ರಿಕೆ ಹಗರಣ ಎದ್ದಾಗ ಕಾಂಗ್ರೆಸ್ ರಾಜೀನಾಮೆ ಕೊಡಲಿಲ್ಲ. ಇದರಲ್ಲಿ ಆಗ 8 ಲಕ್ಷ ಜನ ಮಕ್ಕಳು ಅತಂತ್ರರಾದರು, ಯಾರೂ ಕೇಳಲಿಲ್ಲ. ಅಂದು ಮಂತ್ರಿಗಳು ಸಹ ರಾಜೀನಾಮೆ ನೀಡಲಿಲ್ಲ. ಇನ್ನು ಕನಾ೯ಟಕ ವಿಶ್ವವಿದ್ಯಾಲಯ ಮತ್ತು ವಿಟಿಯು ಹಗರಣಗಳಾದಾಗ ತನಿಖೆ ಮಾಡಲಿಲ್ಲ. ಮೇಲಾಗಿ ಅವರಿಗೆ ಶಿಕ್ಷೆ ಸಹ ಆಗಲಿಲ್ಲ. ಈ ಮಧ್ಯೆ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಕೇಸ್ ನಡೆಯಿತು. ಅದೆಲ್ಲಾ ತನಿಖೆ ಆಯ್ತಾ ಎಂದ ಅವರು, ಅಂದಿನ ಮಂತ್ರಿ ಜಾರ್ಜ್ ಅವರ ಮೇಲೆ ಏನಾಯ್ತು ಎಂದು ಸಚಿವ ಕಾರಜೋಳ ಪ್ರಶ್ನಿಸಿ, ಹೀಗಾಗಿ ಕಾಂಗ್ರೆಸ್ ಆರೋಪಕ್ಕೆ ನೈತಿಕತೆ ಇಲ್ಲ ಎಂದರು. ಇಂತಹ ಆರೋಪಗಳಿಂದ ಕಾಂಗ್ರೆಸ್ ಲಾಭವಾಗುತ್ತೇ ಅನ್ನುವ ಭ್ರಮೆಯಿಂದ ಹೊರಗೆ ಬರಬೇಕು. ಇಂತಹ ಕೀಳು ಮಟ್ಟದ ರಾಜಕಾರಣದಿಂದ ಯಾವುದೇ ಲಾಭ ಇಲ್ಲ. ಮೇಲಾಗಿ ಇತ್ತೀಚಿನ ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮುಖಭಂಗವಾಗಿದೆ. ಹೀಗಾಗಿ ಕಾಂಗ್ರೆಸ್ನವರು ಹತಾಶರಾಗಿ ಹುಚ್ಚು ಹಿಡಿದವರಂತೆ ಅಡ್ಡಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
(ಒನ್ಇಂಡಿಯಾ ಸುದ್ದಿ)