ಇದೇ ಕೊನೆ ಚುನಾವಣೆ, ಪಕ್ಷೇತರನಾಗಿ ಸ್ಪರ್ಧಿಸುವೆ: ಪ್ರಮೋದ್ ಮುತಾಲಿಕ್
ಬಾಗಲಕೋಟೆ, ನವೆಂಬರ್ 04: 2023ರ ವಿಧಾನಸಭೆ ಚುನಾವಣೆ ನನ್ನ ಕೊನೆಯ ಪ್ರಯತ್ನ, ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪಧೆ ಮಾಡುತ್ತೇನೆ, ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆಂದು ಮುಂದಿನ ತಿಂಗಳ ಮೊದಲ ವಾರದಲ್ಲಿ ಘೋಷಣೆ ಮಾಡುತ್ತೇನೆಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 2023ರ ವಿಧಾನ ಸಭೆ ಚುನಾವಣೆಗೆ ಖಂಡಿತ ಸ್ಫರ್ಧೆ ಮಾಡುತ್ತೇನೆ. ಆದರೆ ಯಾವುದೇ ಕಾರಣಕ್ಕೂ ಶ್ರೀರಾಮಸೇನೆ ಚುನಾವಣೆಯಲ್ಲಿ ಸ್ಫರ್ಧೆ ಮಾಡುವುದಿಲ್ಲ, ಅದೊಂದು ಸಾಂಸ್ಕೃತಿಕ ಮತ್ತು ಹಿಂದೂ ಸಂಘಟನೆ. ಆದ್ದರಿಂದ ನಾನು ಯಾವುದೇ ಪಕ್ಷದ ಟಿಕೆಟ್ ಪಡೆಯದೇ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಮುತಾಲಿಕ್ ಸ್ಪಷ್ಟ ಪಡಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮನೆಗೆ ಹೋಗಲಿವೆ; ಕಟೀಲ್
ಯಾವ ಕ್ಷೇತ್ರದಿಂದ ಸ್ಪರ್ಧೆ ಅಂತ ಇನ್ನೂ ನಿರ್ಧಾರ ಆಗಿಲ್ಲ. ಡಿಸೆಂಬರ್ ಮೊದಲ ವಾರದಲ್ಲಿ ಡಿಕ್ಲೇರ್ ಮಾಡುತ್ತೇನೆ. ಈಗಾಗಲೇ ನಾವು ಎಲ್ಲಿ ನಿಲ್ಲಬೇಕೆಂದು ಕಾರ್ಯಕರ್ತರು ಐದಾರು ಕ್ಷೇತ್ರದಲ್ಲಿ ಸರ್ವೆ ಮಾಡುತ್ತಿದ್ದಾರೆ. ತೇರದಾಳ, ಜಮಖಂಡಿ, ಪುತ್ತೂರು, ಕಾರ್ಕಳ ಉಡುಪಿ ಸೇರಿದಂತೆ ಎಂಟತ್ತು ಕ್ಷೇತ್ರಗಳಲ್ಲಿ ಸರ್ವೆ ನಡೆಯುತ್ತಿದೆ ಎಂದು ಮುತಾಲಿಕ್ ಮಾಹಿತಿ ನೀಡಿದರು.
ಸಮಗ್ರವಾಗಿ ತನಿಖೆಯಾಗಲಿ
ಇದೇ ಸಮಯದಲ್ಲಿ ರೇಣುಕಾಚಾರ್ಯ ಸಹೋದರ ಪುತ್ರನ ಸಾವು ಹಿನ್ನೆಲೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮುತಾಲಿಕ್, 24 ವರ್ಷದ ಯುವಕನ ಸಾವು ದುರಂತದಲ್ಲಿ ಆಗಬಾರದಿತ್ತು. ಇದೊಂದು ನಿಗೂಢ ರೀತಿಯ ಸಾವಾಗಿದೆ. ರೇಣುಕಾಚಾರ್ಯ ಅವರೇ ಈಗಾಗಲೇ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸರಕಾರ ಪೊಲೀಸ್ ಇಲಾಖೆ ಸಮಗ್ರವಾಗಿ ತನಿಖೆ ಮಾಡಬೇಕು ಎಂದು ತಿಳಿಸಿದ ಅವರು,ಇದರ ಹಿಂದೆ ಯಾರು ಇದ್ದಾರೆ ಅಂತ ಕಂಡು ಹಿಡಿದು ಶಿಕ್ಷೆ ಕೊಡಿಸಬೇಕು. ರೇಣುಕಾಚಾರ್ಯ ಅವರು ನೇರವಾಗಿ ಹಿಂದೂತ್ವದ ಪ್ರತಿಪಾದಕರು. ಹಿಂದೂ ಧರ್ಮದ ಕುರಿತು ಸತ್ಯದ ವಿಚಾರ ಹೇಳುತ್ತಾ ಇದ್ದರು. ಹಾಗಾಗಿ ಆ ಆಯಾಮದಲ್ಲೂ ತನಿಖೆ ಆಗಬೇಕು ಎಂದು ಮುತಾಲಿಕ ಆಗ್ರಹಿಸಿದರು.
ಎರಡು ದಿನಗಳಲ್ಲಿ ಐದು ಬೆದರಿಕೆ ಕರೆ
ಇದೇ ಸಮಯದಲ್ಲಿ ಜೀವಬೆದರಿಕೆ ಕರೆಗಳ ಆರೋಪ ಬಗ್ಗೆ ಮಾತನಾಡಿದ ಮುತಾಲಿಕ, ಎರಡು ದಿನಗಳಲ್ಲಿ ಐದು ಬೆದರಿಕೆ ಕರೆಗಳು ಬಂದಿದೆ. ಎರಡು ಕರೆ ಸ್ವೀಕರಿಸಿದಾಗ ಧಮಕಿ ಹಾಕಿ, ಕೊಲೆ ಬೆದರಿಕೆ ಹಾಕಿದ್ದಾರೆ. ಎರಡು ದಿನ ಹುಕ್ಕೇರಿಯಲ್ಲಿ ಇದ್ದಾಗ ಐದು ಕರೆಗಳು ಬಂದಿದ್ದವು, ಈ ಬಗ್ಗೆ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಮಾಹಿತಿ ನೀಡಿದರು.
ಬೆದರಿಕೆಯಿಂದ ನಾನು ಹೆದರುವವನಲ್ಲ
ಕೊಲೆ ಬೆದರಿಕೆ ಹಾಕುವವರಿಕೆಗೆ ಎಚ್ಚರಿಕೆ ಕೊಡುತ್ತೇನೆ. ಈ ರೀತಿಯ ಬೊಗಳುವಿಕೆ ನಿಲ್ಲಿಸಬೇಕು. ನಿಮ್ಮ ಬೆದರಿಕೆಯಿಂದ ನಾನು ಹೆದರುವವನಲ್ಲ. ನಾನು ಸಾಯೋವರೆಗೂ ಹಿಂದುತ್ವ ಹಾಗೂ ದೇಶದ ಕೆಲಸ ಮಾಡುತ್ತೇನೆ. ನಿಮ್ಮ ಕೊಲೆ ಬೆದರಿಕೆಗಳಿಗೆ ನಾನು ಆತಂಕಗೊಳ್ಳುವುದಿಲ್ಲ.ನಾನು ನಿರಂತರವಾಗಿ ಹಿಂದುತ್ವದ ಕೆಲಸ ಮಾಡಿ ತೋರಿಸುತ್ತೇನೆ ಎಂದರು.
ಕರೆ ಮಾಡಿರುವವರ ವಿರುದ್ಧ ದೂರು
ನಾವು ಸಂವಿಧಾನ, ಕಾನೂನು, ಪ್ರಜಾಪ್ರಭುತ್ವ ಆಧಾರದ ಮೇಲೆ ಸಂಘಟನೆ ಮಾಡುತ್ತಿದ್ದೇವೆ. ಕೊಲೆ ಬೆದರಿಕೆಗೆ ಹೆದರುವವ ನಾನಲ್ಲ, ನಾನು ಕಂಪ್ಲೆಂಟ್ ಲಾರ್ಜ್ ಮಾಡಿದ್ದೇನೆ. ಮುಂದಿನ ಕೆಲಸ ಪೊಲೀಸ್ ಇಲಾಖೆಗೆ ಬಿಟ್ಟದ್ದು. ಅವರು ಇದನ್ನು ಶೋಧಿಸಬೇಕು. ಫೋನ್ ಮಾಡಿದ್ದು ಯಾರು? ಏನು ? ಬೆದರಿಕೆ ಕರೆ ಮಾಡಿದ್ದು ಯಾರೂ ಏನು ಗೊತ್ತಿಲ್ಲ. ಫೋನ್ ನಂಬರ್ ಪೊಲೀಸರಿಗೆ ಕೊಟ್ಟಿದ್ದೇನೆ ಎಂದು ಮುತಾಲಿಕ್ ತಿಳಿಸಿದರು.