ಹುನ್ನೂರು ಗ್ರಾಮ ಪಂಚಾಯತಿ ಸದಸ್ಯನಿಗೆ ಹನಿಟ್ರ್ಯಾಪ್: ವಂಚಕರಿಗೆ ಗ್ರಾಮಸ್ಥರಿಂದ ಥಳಿತ
ಬಾಗಲಕೋಟೆ, ಆಗಸ್ಟ್, 25: ಜಿಲ್ಲೆಯ ಹುನ್ನೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಅನೀಲ್ ದಳವಾಯಿ ಎಂಬುವರಿಗೆ ಹನಿಟ್ರ್ಯಾಪ್ ಮಾಡಲು ಇಬ್ಬರು ಯತ್ನಿಸಿದ್ದರು. ಹನಿಟ್ರ್ಯಾಪ್ ಮಾಡಲು ಯತ್ನಿಸಿದ್ದ ಇಬ್ಬರನ್ನು ಹಿಡಿದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಹುನ್ನೂರು ಗ್ರಾಮಸ್ಥರೇ ಥಳಿಸಿದ್ದಾರೆ. ಜಮಖಂಡಿಯ ರವಿ ದೊಡ್ಡಮನಿ, ನರಸಪ್ಪ ಗಡೇಕಲ್ ಎಂಬ ವ್ಯಕ್ತಿಗಳಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕಿರಾತಕರನ್ನು ಗ್ರಾಮಸ್ಥರು ಥಳಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಮಖಂಡಿ ತಾಲ್ಲೂಕಿನ ಜಂಬಗಿ ಬಿಕೆ ಗ್ರಾಮ ಪಂಚಾಯತಿ ಸದಸ್ಯ ಅನೀಲ್ ದಳವಾಯಿಗೆ ಇಬ್ಬರು ಕಿರಾತಕರು ಹನಿಟ್ರ್ಯಾಪ್ ಮಾಡಿದ್ದರು. ಕಳೆದ ಶನಿವಾರ ಅನೀಲ್ ದಳವಾಯಿ ಅವರನ್ನು ಕಿಡ್ನಾಪ್ ಮಾಡಿ ಎಂಟು ಲಕ್ಷಕ್ಕೆ ಬೇಡಿಕೆ ಇಡಲಾಗಿತ್ತು. ನಂತರ ಎರಡು ಲಕ್ಷಕ್ಕೆ ಒಪ್ಪಿಕೊಂಡಿದ್ದ ಇಬ್ಬರು ವಂಚಕರು ಹುನ್ನೂರು ಗ್ರಾಮದ ಟೀ ಅಂಗಡಿಯಲ್ಲಿ ಅನೀಲ್ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಇದನ್ನು ಗಮನಿಸಿದ ಹುನ್ನೂರು ಗ್ರಾಮದ ಜನರು ಅನೀಲ್ ಬಳಿ ವಿಚಾರಿಸಿದ್ದು, ಬಳಿಕ ವಂಚಕರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
40% ಕಮೀಷನ್ ದಂಧೆ ಬಗ್ಗೆ ನ್ಯಾಯಾಂಗ ತನಿಖೆಗೆ ವಹಿಸಿದರೆ 100 ಶಾಸಕರ ಅಕ್ರಮ ಬಯಲು: ಕೆಂಪಣ್ಣ
ಇದೆ ವೇಳೆ ಅನೀಲ್ ದಳವಾಯಿ ಕಿಡ್ನಾಪ್ ಸುದ್ದಿ ಕೂಡ ಎಲ್ಲೆಡೆ ಹರಡಿತ್ತು. ವಿಷಯವನ್ನು ತಿಳಿದ ಗ್ರಾಮಸ್ಥರು ವಂಚಕರನ್ನು ಥಳಿಸಿದ್ದಾರೆ. ಶನಿವಾರ ಅನೀಲ್ ದಳವಾಯಿ ಜಮಖಂಡಿ ನಗರದಲ್ಲಿರುವ ಐಡಿಎಫ್ಸಿ ಬ್ಯಾಂಕ್ಗೆ ತೆರಳಿದ್ದರು. ಈ ವೇಳೆ ಶ್ರೀದೇವಿ ಎಂಬ ಮಹಿಳೆ ಅನೀಲ್ ಅವರಿಗೆ ಕರೆ ಮಾಡಿ ಜಮಖಂಡಿ ಬಸ್ ನಿಲ್ದಾಣದಲ್ಲಿಯೇ ಇರುವುದಾಗಿ ಹೇಳಿದ್ದಾಳೆ. ಇದನ್ನು ನಂಬಿದ ಅನೀಲ್ ಮಹಿಳೆ ಹೇಳಿದ ಜಾಗಕ್ಕೆ ತೆರಳಿದ್ದಾರೆ. ಈ ವೇಳೆ ಅನೀಲ್ ದಳವಾಯಿಯು ಮಹಿಳೆಯ ಜೊತೆಗೆ ಮೊದಲು ಜಮಖಂಡಿ ಸಮೀಪದ ರಾಮೇಶ್ವರ ಗುಡ್ಡಕ್ಕೆ ಹೋಗಿದ್ದಾರೆ. ಅಲ್ಲಿಂದ ಕುಲ್ಹಳ್ಳಿ ಗುಡ್ಡಕ್ಕೆ ಹೋಗಿದ್ದರು. ಮಹಿಳೆ ಜೊತೆಗೆ ಅನೀಲ್ ದಳವಾಯಿ ನಿಂತಾಗ ದಾಳಿ ಮಾಡಿದ್ದಾರೆ. ಹಾಗೂ ಕ್ಷಮೆ ಕೇಳು ಎಂದು ಅನೀಲ್ಗೆ ಚಿತ್ರಹಿಂಸೆ ನೀಡಿರುವ ಬಗ್ಗೆ ವಿಚಾರಣೆಯಲ್ಲಿ ಬಯಲಾಗಿದೆ.
ಅನೀಲ್ಗೆ ಚಾಕು ತೋರಿಸಿ ಹಣ ಕೊಡುವಂತೆ ಬೆದರಿಕೆ ನೀಡಿದ್ದರಂತೆ. ನಿನ್ನ ಎಲ್ಲ ಮಾಹಿತಿಯನ್ನು ಯುಟ್ಯೂಬ್ ಚಾನಲ್ನಲ್ಲಿ ಅಪ್ಲೋಡ್ ಮಾಡುತ್ತೇವೆ. ಮಾನ ಮರ್ಯಾದೆ ಹರಾಜು ಹಾಕುತ್ತೇವೆ ಎಂದು ಬೆದರಿಕೆ ಹಾಕಿ ಹಣ ವಸೂಲಿಗೆ ಇಳಿದಿದ್ದರು ಎನ್ನುವ ಮಾಹಿತಿಯೊಂದು ಬಹಿರಂಗವಾಗಿದೆ. ಇದರಲ್ಲಿ ರವಿ ದೊಡ್ಡಮನಿ ಎನ್ನುವ ಕಿರಾತಕ ಪತ್ರಕರ್ತ ಎಂದು ಹೇಳಿಕೊಂಡು ವಂಚನೆಗೆ ಇಳಿದಿದ್ದ ಎನ್ನಲಾಗುತ್ತಿದೆ. ವಿಚಾರ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಇಬ್ಬರು ವಂಚಕರನ್ನು ಥಳಿಸಿ, ಅವರನ್ನು ಹುನ್ನೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಗ್ರಾಮಸ್ಥರು ನಾಲ್ವರಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದು, ಮಹಿಳೆ ಹಾಗೂ ಇನ್ನೋರ್ವ ವ್ಯಕ್ತಿ ಪರಾರಿಯಾಗಿದ್ದಾರೆ.