ಆಲಮಟ್ಟಿ ಹಿನ್ನೀರಿನಲ್ಲಿ ಪಕ್ಷಿಧಾಮಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್
ಬಾಗಲಕೋಟೆ, ಅಕ್ಟೋಬರ್ 27: ಬಾಗಲಕೋಟೆ ಬಿಸಿಲ ನಾಡಾಗಿದ್ದರೂ ಅಲ್ಲಿ ಪ್ರತಿವರ್ಷ ಪಕ್ಷಿಗಳ ಲೋಕವೇ ಮೈದಳೆಯುತ್ತದೆ. ಪ್ರತಿವರ್ಷ ಅಲ್ಲಿಗೆ ದೇಶ ವಿದೇಶಗಳಿಂದ ಸಾವಿರಾರು ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತದೆ.
ಅನೇಕ ಕಾರಣಗಳಿಂದ ಬಾಗಲಕೋಟೆಗೆ ಆಗಮಿಸುವ ವಿದೇಶಿ ಆಕರ್ಷಿತ ಪಕ್ಷಿಗಳು ಕಂಡ ಕಂಡಲ್ಲೇ ಸಾಯುತ್ತವೆ. ಇದರಿಂದ ವಿಶಿಷ್ಟ ಜಾತಿಯ ಪಕ್ಷಿ ಸಂಕುಲದ ನಾಶವಾಗುತ್ತಿದೆ. ಹೀಗಾಗಿ ಈ ಪಕ್ಷಿಗಳಿಗೆ ನೆಲೆ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಬಾಗಲಕೋಟೆ: ಇಡೀ ರಾಜ್ಯದಲ್ಲೇ ಪ್ರಸಿದ್ಧಿ ಪಡೆದ ಕೆಂಚಣ್ಣವರ ಗಾಣದ ಅಡುಗೆ ಎಣ್ಣೆ
ಆಲಮಟ್ಟಿ ಹಿನ್ನೀರಿನಿಂದ ಬಾಗಲಕೋಟೆಯಲ್ಲಿ ಕಂಗೊಳಿಸುವ ಹಿನ್ನೀರು ಬಾಧಿತ ಪ್ರದೇಶದಲ್ಲಿ ಎಲ್ಲೆಂದರಲ್ಲಿ ವಿವಿಧ ಬಣ್ಣ, ಆಕಾರ, ಇಂಪಾದ ಧ್ವನಿಯ ಮೂಲಕ ಆಕರ್ಷಿಸುವ ಪಕ್ಷಿಗಳೇ ಕಂಡು ಬರುತ್ತದೆ.
ಕಣ್ಮನ ಸೆಳೆಯೋ ಪಕ್ಷಿಲೋಕದ ವೈಭವ
ದೇಶ ವಿದೇಶದ ಹಕ್ಕಿಗಳು ಹಾಗೂ ಪ್ರಕೃತಿ ಸೋಜಿಗದ ಮಧ್ಯೆ ಗಮನ ಸೆಳೆಯೋ ಬೆಟ್ಟ ಗುಡ್ಡ, ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರತಿವರ್ಷ ಆಲಮಟ್ಟಿ ಹಿನ್ನೀರು ಪ್ರದೇಶದಲ್ಲಿ ಆಗಸ್ಟ್ ತಿಂಗಳಿಂದ ಭರಪೂರ ನೀರಿದ್ದರೆ, ಫೆಬ್ರವರಿ ವೇಳೆಗೆ ನೀರು ಇಳಿಮುಖವಾಗುತ್ತಾ ಹೋಗುತ್ತದೆ. ಈ ಸಂದರ್ಭದಲ್ಲಿ ಹಿತಕರ ಹವಾಗುಣ ಮತ್ತು ಸಂರಕ್ಷಿತ ಪ್ರದೇಶವಾಗಿರುವುದರಿಂದ ನೆರೆಯ ರಾಜ್ಯಗಳು ಸೇರಿದಂತೆ ದೇಶ ವಿದೇಶಗಳಿಂದಲೂ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ. ಈ ಭಾಗದಲ್ಲಿ ವಿವಿಧ ಪ್ರಕಾರದ ಪಕ್ಷಿಗಳ ದೃಶ್ಯಗಳು ಎಲ್ಲರ ಗಮನ ಸೆಳೆಯುತ್ತವೆ.
ಸಿಎಂ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ಅಸ್ತು
ಆಸ್ಟ್ರೇಲಿಯಾದಿಂದ ಬರುವ ಓರಿಯಂಟಲ್ ಪ್ಯಾಟಿಂಕೋಲ್ ಮತ್ತು ರಷ್ಯಾ, ಮಂಗೋಲಿಯಾದಿಂದ ಬರುವ ಬಾರೆಡೆಡ್ ಗೀಜ್, ಟಿಬೆಟ್ನ ಬ್ರಾಹ್ಮಿನಿ ಡೆಕ್ಕೋ, ಬಾಂಗ್ಲಾದೇಶ ಮತ್ತು ಹಿಮಾಲಯ ತಪ್ಪಲು ಪ್ರದೇಶದ ಉಡ್ಪೆಕ್ಕರ್, ಗುಜರಾತದ ಗ್ರೇಟೋ ಸ್ಥಳೀಯವಾಗಿ ಬರುವ ವ್ಯಾಗಡೋನ್, ಗ್ರೇಹರೆಂಟ್, ಹುಲಿನೆಕ್ಸ್ಟಾರ್, ಐಬೀಸ್ ಪಕ್ಷಿಗಳು ಸೇರಿದಂತೆ ದೇಶ ವಿದೇಶದ 34 ಜಾತಿಯ ಸಾವಿರಾರು ಪಕ್ಷಿಗಳು ಇಲ್ಲಿ ಕಾಣಸಿಗುತ್ತವೆ. ಹೀಗಾಗಿ ಇಂತಹ ಪ್ರದೇಶದಲ್ಲಿ ಪಕ್ಷಿಧಾಮ ಆಗಬೇಕೆಂಬ ಕೂಗು ಬಹಳ ದಿನಗಳಿಂದ ಇತ್ತು, ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ, ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಪಕ್ಷಿಧಾಮ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ರಿವರ್ಟನ್ ಪಕ್ಷಿ ಅತ್ಯಧಿಕ ಗೂಡು ಇರುವ ಜಾಗ ಆಲಮಟ್ಟಿ ಹಿನ್ನೀರು
ಈ ಸಂಬಂಧ ಅಧಿಸೂಚನೆ ಹೊರಡಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದ್ದು, ಈಗಾಗಲೇ ಬಾಗಲಕೋಟೆ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಉತ್ತರ ಪ್ರದೇಶದಿಂದ ಅತಿಹೆಚ್ಚಿನ ಸಂಖ್ಯೆಯಲ್ಲಿ ಬರುವ ರಿವರ್ಟನ್ ಪಕ್ಷಿಯ 20 ಸಾವಿರಕ್ಕೂ ಅಧಿಕ ಗೂಡುಗಳು ಆಲಮಟ್ಟಿ ಹಿನ್ನೀರಿನಲ್ಲಿ ಕಂಡು ಬಂದಿದೆ. ಇದು ಜಗತ್ತಿನ ಅತಿಹೆಚ್ಚು ರಿವರ್ಟನ್ ಪಕ್ಷಿಗಳ ಗೂಡು ಇರುವ ಪ್ರದೇಶವೆಂದು ಗುರುತಿಸಲಾಗಿದೆ. ಮೀನುಗಾರಿಕೆ ಹಾಗೂ ಸ್ಥಳೀಯರಿಂದ ಪಕ್ಷಿಗಳಿಗೆ ಪ್ರಾಣಕ್ಕೆ ಕಂಟಕ ಇತ್ತು. ಇದನ್ನು ತಪ್ಪಿಸಲು ಹಾಗೂ ಪಕ್ಷಿಗಳಿಗೆ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕಿತ್ತು.
ಚಿಕ್ಕಸಂಗಮ ಬಳಿ ಪಕ್ಷಿಧಾಮ ನಿರ್ಮಾಣ
ಎಲ್ಲಾ ವಿಶೇಷತೆಗಳ ಮಧ್ಯೆ ಪಕ್ಷಿಗಳ ಬರುವಿಕೆಯನ್ನ ಗಮನದಲ್ಲಿರಿಸಿಕೊಂಡು ಪಕ್ಷಿಗಳಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲೆಯ ಚಿಕ್ಕಸಂಗಮ ಬಳಿ ಪಕ್ಷಿಧಾಮ ನಿರ್ಮಾಣ ಮಾಡಲು ಸರ್ಕಾರ ಉದ್ದೇಶಿಸಿದ್ದು, ಹಿನ್ನೀರಿನಲ್ಲಿ ಬೋಟಿಂಗ್ ಮಾಡುವ ಮೂಲಕವು ಪಕ್ಷಿಧಾಮ ವೀಕ್ಷಿಸುವ ನಿಟ್ಟಿನಲ್ಲಿಯೂ ವ್ಯವಸ್ಥೆ ಮಾಡಬೇಕೆಂಬ ಉದ್ದೇಶವನ್ನು ಹೊಂದಿರುವ ಅಧಿಕಾರಿಗಳು ಸರ್ಕಾರದ ಆದೇಶದಂತೆ ಅಧಿಸೂಚನೆ ಹೊರಡಿಸಲು ಸಿದ್ದತೆಗೆ ಮುಂದಾಗಿದ್ದಾರೆ.
ಒಟ್ಟಿನಲ್ಲಿ ಸುಂದರ ಪ್ರಕೃತಿ ಮಧ್ಯೆ ಸೋಜಿಗವನ್ನು ಸೃಷ್ಟಿಸುತ್ತಿದ್ದ ವಿದೇಶಿ ಹಾಗೂ ಸ್ವದೇಶಿ ಪಕ್ಷಿಗಳ ಸಂರಕ್ಷಣೆಗಾಗಿ ಸರ್ಕಾರ ಬಾಗಲಕೋಟೆ ಜಿಲ್ಲೆಯ ಚಿಕ್ಕಸಂಗಮ ಬಳಿ ಪಕ್ಷಿಧಾಮ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿರುವುದು ಪಕ್ಷಿ ಪ್ರೇಮಿಗಳಿಗೆ ಸಂತಸದ ವಿಚಾರವಾಗಿದೆ. ರಾಜ್ಯ ಸರ್ಕಾರ ಆದಷ್ಟು ಬೇಗ ಅಧಿಸೂಚನೆ ಹೊರಡಿಸಿ ಪಕ್ಷಿಧಾಮ ನಿರ್ಮಾಣ ಮಾಡಬೇಕು ಎನ್ನುವುದು ಎಲ್ಲರ ಆಶಯವಾಗಿದೆ.