ಸತೀಶ್ ಜಾರಕಿಹೊಳಿ ಹೇಗಂತ ನನಗೆ ಗೊತ್ತು: ಎಚ್.ವೈ.ಮೇಟಿ
ಬಾಗಲಕೋಟೆ, ಸೆಪ್ಟೆಂಬರ್.06: ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷ ಕಟ್ಟಿದವರು. ಅವರೊಂದಿಗೆ ಮೂವತ್ತು ವರ್ಷದಿಂದ ಸ್ನೇಹವಿದ್ದು ಅವರು ಹೇಗೆ ಅಂತ ನನಗೆ ಗೊತ್ತಿದೆ ಎಂದು ಮಾಜಿ ಶಾಸಕ ಎಚ್.ವೈ.ಮೇಟಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಜಾರಕಿಹೊಳಿ ನಡುವಿನ ಕಲಹದ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿ ಅದು ವೈಯಕ್ತಿಕವಾಗಿದ್ದು ಅದರ ಬಗ್ಗೆ ಪಕ್ಷದ ಮುಖಂಡರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಜಿಲ್ಲೆಯ 15 ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು ಮತದಾನ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಅಭ್ಯರ್ಥಿ ಗೆಲುವು ಖಚಿತ ಎಂದು ಎಚ್.ವೈ.ಮೇಟಿ ವಿಶ್ವಾಸ ವ್ಯಕ್ತಪಡಿಸಿದರು.
ನಗರ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ ಎಂದು ನಾನು ಒಪ್ಪಿಕೊಳ್ಳುವುದಿಲ್ಲ. ಬಾಗಲಕೋಟೆ ನಗರಸಭೆಯಲ್ಲಿ ಐದು ಸ್ಥಾನಗಳನ್ನು ಗೆದ್ದಿದ್ದು, ಇನ್ನು ಹೆಚ್ಚಿನ ಸ್ಥಾನ ಗೆಲ್ಲಬೇಕಿತ್ತು. ಆದರೆ ಮತದಾರರ ತೀರ್ಪಿಗೆ ತಲೆ ಬಾಗಲೇಬೇಕು.
ಜಿಲ್ಲೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಆದರೂ ಕಡಿಮೆ ಸ್ಥಾನ ಬಂದಿದೆ. ಬಿಜೆಪಿ ಎಲ್ಲಾ ಸಮಾಜದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದರ ಫಲವಾಗಿ ಹೆಚ್ಚು ಸ್ಥಾನ ಗಳಿಸಿದೆ ಎಂದು ತಿಳಿಸಿದರು.
ಇಂದು ಗುರುವಾರ (ಸೆಪ್ಟೆಂಬರ್ 06) ವಿಜಯಪುರ-ಬಾಗಲಕೋಟೆ ಅವಳಿಯ ಒಂದು ಸ್ಥಾನಕ್ಕಾಗಿ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆ ಹಿನ್ನಲೆ, ಬಾಗಲಕೋಟೆ ಜಿಲ್ಲೆಯಲ್ಲಿರುವ ಪ್ರಮುಖ ಜನಪ್ರತಿನಿಧಿಗಳು ಮತ ಹಾಕುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದರು. ಯಾರೆಲ್ಲಾ ಮತ ಚಲಾಯಿಸಿದರು? ದೂರ ಉಳಿದಿದ್ದು ಯಾರು? ಎಂಬ ಮಾಹಿತಿ ಇಲ್ಲಿದೆ...

ಮತ ಚಲಾಯಿಸಿದ ಶಾಸಕರು
ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಎಸ್ ಆರ್ ಪಾಟೀಲ್ ಬೀಳಗಿ ತಾಲೂಕು ಪಂಚಾಯತ್ ನಲ್ಲಿ ಮತ ಚಲಾಯಿಸಿದ್ದು, ಶಾಸಕ ಮುರಗೇಶ ನಿರಾಣಿ, ಬಿಜೆಪಿ ಪಕ್ಷದ ಶಾಸಕ ವೀರಣ್ಣ ಚರಂತಿಮಠ ಸಹ ಮತ ಚಲಾಯಿಸಿದರು. ಇನ್ನು ಬಿಜೆಪಿ ಮುಖಂಡ ಹಾಗೂ ಶಾಸಕರಾದ ಗೋವಿಂದ ಕಾರಜೋಳ ಮುಧೋಳದಲ್ಲಿ ಮತ ಚಲಾಯಿಸಿದರು.

ಕಣದಲ್ಲಿರುವ ಅಭ್ಯರ್ಥಿಗಳು
ಅವಳಿ ಜಿಲ್ಲೆಗಳಲ್ಲಿ ಒಟ್ಟು 8,237 ಮತದಾರರಿದ್ದು, ಒಟ್ಟು 38 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಮತದಾನ ನಡೆಯಲಿದ್ದು, ಬಿಜೆಪಿಯ ಅಭ್ಯರ್ಥಿ ಗೂಳಪ್ಪ ಶಟಗಾರ, ಕಾಂಗ್ರೆಸ್ ನಿಂದ ಮಾಜಿ ಸಚಿವ ಎಂ.ಬಿ.ಪಾಟೀಲ ಸಹೋದರ ಸುನೀಲಗೌಡ ಪಾಟೀಲ ಕಣದಲ್ಲಿ ಇದ್ದಾರೆ.

ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ
ಅಂದಹಾಗೆ ವಿದೇಶದಲ್ಲಿ ಇರುವ ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿಯಲ್ಲಿ ಮತದಾನದಿಂದ ದೂರ ಉಳಿದಿದ್ದಾರೆ. ಮತ ಚಲಾಯಿಸಿದ ನಂತರ ಸುದ್ದಿ ಗಾರರೊಂದಿಗೆ ಮಾತನಾಡಿದ ಶಾಸಕ ವೀರಣ್ಣ ಚರಂತಿಮಠ ಈ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ ಎಂದರು.

ಪ್ರಬಲ ಅಭ್ಯರ್ಥಿ ನಾನಲ್ಲ
ನಾನು ಲೋಕಸಭೆಯ ಚುನಾವಣೆಯ ಆಕಾಂಕ್ಷಿಯಲ್ಲ. ಪಕ್ಷ ಸೂಚನೆ ನೀಡಿದರೂ ನಿಲ್ಲುವುದಿಲ್ಲ. ಈಗಾಗಲೇ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದು ಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುತ್ತೇನೆ ಎಂಬ ವಿಶ್ವಾಸವಿಲ್ಲ. ಬಿಜೆಪಿ ವಿರುದ್ಧ ಪ್ರಬಲ ಅಭ್ಯರ್ಥಿ ನಾನಲ್ಲ.
ಹಾಗೆಯೇ ಮಾಜಿ ಸಿಎಂ ಸಿದ್ಧ ರಾಮಯ್ಯ ಬಾಗಲಕೋಟೆಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಮಾಹಿತಿ ಇಲ್ಲ ಎಂದು ಎಚ್.ವೈ.ಮೇಟಿ ಸ್ಪಷ್ಟಪಡಿಸಿದರು.












Click it and Unblock the Notifications