ಬಾಗಲಕೋಟೆ : ಕೃಷ್ಣಾ ನದಿ ಪ್ರವಾಹ, ಸಂತ್ರಸ್ತರ ರಕ್ಷಣೆ
ಬಾಗಲಕೋಟೆ, ಆಗಸ್ಟ್ 05 : ಕೃಷ್ಣಾ ನದಿ ಪ್ರವಾಹದಿಂದಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಹಲವು ಗ್ರಾಮಗಳು ಜಲಾವೃತವಾಗಿವೆ. ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದ್ದಾರೆ.
ಜಮಖಂಡಿ ತಾಲೂಕಿನಲ್ಲಿ ನಡುಗಡ್ಡೆಯಾಗಿರುವ ಮುತ್ತೂರ ಗ್ರಾಮದ ಸುತ್ತಲೂ ನೀರು ಆವರಿಸುತ್ತಿದ್ದು, ಅಲ್ಲಿರುವ ಜನರನ್ನು ಬೋಟ್ ಮೂಲಕ ಸೋಮವಾರ ಸಂಪೂರ್ಣವಾಗಿ ಸ್ಥಳಾಂತರಿಸುವ ಕಾರ್ಯವನ್ನು ಮಾಡಲಾಗಿದೆ. ಮುತ್ತೂರಿನಲ್ಲಿ 35 ಜಾನುವಾರುಗಳಿದ್ದು, ಅವುಗಳನ್ನು ಸಹ ಸ್ಥಳಾತರಿಸಲಾಗುತ್ತಿದೆ.
ಮುತ್ತೂರ, ಹಿರೇಪಡಸಲಗಿ ಹಾಗೂ ಆಲಗೂರು ಗ್ರಾಮಗಳು ನಡುಗಡ್ಡೆಗಳಾಗಿದ್ದು, ಪ್ರವಾಹದಲ್ಲಿ ಒಂದು ಆಕಳು ಸಾವನ್ನಪ್ಪಿದೆ. ವಾರಸುದಾರರಿಗೆ 30 ಸಾವಿರ ರೂ.ಗಳ ಪರಿಹಾರ ಜಿಲ್ಲಾಡಳಿತ ವಿತರಣೆ ಮಾಡಿದೆ. ಮುತ್ತೂರ, ಹಿರೇಪಡಸಲಗಿ ಹಾಗೂ ಆಲಗೂರಿನಲ್ಲಿ ತಲಾ ಒಂದು ಗಂಜಿ ಕೇಂದ್ರ ತೆರೆಯಲಾಗಿದೆ.

ಜಂಬಗಿ ಮತ್ತು ಸಾವಳಗಿಯಲ್ಲಿ ರಸ್ತೆ ಮಟ್ಟದ ತನಕ ನೀರು ಬಂದಿದೆ. ನಾರಾಯಣಪುರ ಜಲಾಶಯದ ಹಿನ್ನೀರಿನ ಹುನಗುಂದ ತಾಲೂಕಿನ 17 ಗ್ರಾಮಗಳಲ್ಲಿ ಸದ್ಯ ನೀರು ತುಂಬಿದೆ. ತುರಡಗಿ ಗ್ರಾಮ ಪುನರ್ವಸತಿ ಕೇಂದ್ರವಾಗಿದ್ದು, ಅಲ್ಲಿರುವ 162 ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗಿದೆ.

ಮಾರ್ಗ ಬದಲಾವಣೆ : ಪ್ರವಾಹದಿಂದ ಜಮಖಂಡಿ ತಾಲೂಕಿನ ಜಂಬಗಿ ಬಿ.ಕೆ ಮತ್ತು ಟಕ್ಕೋಡ ಕ್ರಾಸ್ ನಡುವಿನ ರಸ್ತೆ ಜಲಾವೃತಗೊಂಡಿದೆ. ಜಮಖಂಡಿಯಿಂದ ವಿಜಯಪುರಕ್ಕೆ ಹೋಗುವ ಎಲ್ಲಾ ಬಸ್ ವೈಯಾ ಗಲಗಲಿ ಮುಖಾಂತರ ಸಂಚರಿಸಲು ಸೂಚನೆ ನೀಡಲಾಗಿದೆ.












Click it and Unblock the Notifications