ಬಿಜೆಪಿ ಶಾಸಕ ಗೋವಿಂದ ಕಾರಜೋಳ ಪುತ್ರನ ವಿರುದ್ಧ ಎಫ್ಐಆರ್
ಬಾಗಲಕೋಟೆ, ಜುಲೈ 16: ಶಾಸಕರ ಮಕ್ಕಳ ಗೂಂಡಾಗಿರಿ ಪ್ರಕರಣಗಳಿಗೆ ಕೊನೆಯೇ ಇದ್ದಂತಿಲ್ಲ. ಶಾಸಕ ಹ್ಯಾರಿಸ್ ಮಗನ ಪ್ರಕರಣದ ನಂತರ ಈಗ ಬಿಜೆಪಿ ಶಾಸಕ ಗೋವಿಂದ ಕಾರಜೋಳ ಮಗ ತನ್ನ ಗೂಂಡಾಗಿರಿಯಿಂದ ಸುದ್ದಿಯಲ್ಲಿದ್ದಾನೆ.
ಮುಧೋಳ ಕ್ಷೇತ್ರದ ಬಿಜೆಪಿ ಶಾಸಕ ಗೋವಿಂದ ಕಾರಜೋಳ ಅವರ ಪುತ್ರ ಅರುಣ್ ಕಾರಜೋಳ ಪೊಲೀಸ್ ಪೇದೆಯೊಬ್ಬನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಆತನ ವಿರುದ್ಧ ಬಾಗಲಕೋಟೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಅರುಣ್ ಕಾರಜೋಳ ಅವರು ನಿನ್ನೆ ರಾತ್ರಿ ನೋಪಾರ್ಕಿಂಗ್ನಲ್ಲಿ ಕಾರು ನಿಲ್ಲಿಸಿದ್ದರು. ಅದನ್ನು ತೆಗೆಯುವಂತೆ ಸಂಚಾರಿ ಪೊಲೀಸ್ ಕಾನ್ಸ್ಟೇಬಲ್ ಮಲ್ಲೇಶ್ ಲಮಾಣಿ ಸೂಚಿಸಿದ್ದಾರೆ. ಇದಕ್ಕೆ ಕೋಪಗೊಂಡ ಅರುಣ್ ಮಲ್ಲೇಶ್ ಅನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಅರುಣ್ ಕಾರಜೋಳ ಅವರು ಪೊಲೀಸ್ ಪೇದೆ ಒಬ್ಬರ ಜೊತೆ ಅಸಭ್ಯವಾಗಿ ವರ್ತಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪೇದೆ ಮಲ್ಲೇಶ್ ಅವರು ದೂರು ದಾಖಲಿಸಿದ್ದು ಎಫ್ಐಆರ್ ಕೂಡ ದಾಖಲಾಗಿದೆ.
ಆದರೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶಾಸಕರ ಪುತ್ರ ಅರುಣ್ ಕಾರಜೋಳ ತಾವು ಅವಾಚ್ಯ ಶಬ್ದಗಳಿಂದ ಮಾತನಾಡಿಲ್ಲವೆಂದು, ಪೇದೆಯೇ ಅನಾಗರೀಕವಾಗಿ ವರ್ತಿಸಿದ್ದಾಗಿ ಹಾಗೂ ಎಫ್ಐಆರ್ ಕೂಡಾ ದುರುದ್ದೇಶಪೂರ್ವಕವಾಗಿ ಹಾಕಿರುವುದಾಗಿ ಹೇಳಿದ್ದಾರೆ.
ಬಿಜೆಪಿ ಶಾಸಕರಾಗಿರುವ ಗೋವಿಂದ ಕಾರಜೋಳ ಅವರು ಮುಧೋಳ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ 16 ಸಾವಿರಕ್ಕೂ ಹೆಚ್ಚು ಮತಗಳಿಂದ ಜಯಗಳಿಸಿದ್ದಾರೆ.












Click it and Unblock the Notifications