ಉಕ್ಕಿ ಹರಿಯುತಿಹಳು ಕೃಷ್ಣೆ : ಪ್ರವಾಹ ಭೀತಿಯಲ್ಲಿ ಬಾಗಲಕೋಟೆ ಜನತೆ
ಬಾಗಲಕೋಟೆ, ಜುಲೈ.09: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರನ್ನು ಹರಿಬಿಡಲಾಗುತ್ತಿದೆ. ಇದರಿಂದ ಬಾಗಲಕೋಟೆ ಜಿಲ್ಲೆ ಪ್ರವಾಹ ಭೀತಿ ಎದುರಿಸುವಂತಾಗಿದೆ.
ಒಂದು ಕಡೆ ಪ್ರವಾಹದ ಭೀತಿ ಎದುರಾದರೂ ಕೃಷ್ಣಾ ನದಿ ತುಂಬಿ ಹರಿಯುತ್ತಿರುವುದರಿಂದ ಜನರಿಗೆ ಕುಡಿಯುವ ನೀರು ಜೊತೆಗೆ ಕೃಷಿಗೆ ಹಿಪ್ಪರಗಿ ಬ್ಯಾರೇಜ್ ನೀರು ಅನುಕೂಲವಾಗಲಿದ್ದು, ಎಲ್ಲಾ ರೈತವಲಯದ ಜನರಿಗೆ ಇನ್ನಿಲ್ಲದ ಹರ್ಷ ಮೂಡಿಸಿದೆ.
ಜುಲೈನಲ್ಲಿಯೇ ಕರ್ನಾಟಕದ ಜಲಾಶಯಗಳು ಭರ್ತಿ
ಹೌದು, ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್ ತುಂಬಿ ಹರಿಯುತ್ತಿದ್ದು, ಕೃಷ್ಣಾ ನದಿಯಿಂದ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಈಗಾಗಲೇ ಹಿಪ್ಪರಗಿ ಬ್ಯಾರೇಜ್ ಭರ್ತಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಇದರಿಂದ ಹಿಪ್ಪರಗಿ ಬ್ಯಾರೇಜ್ ಒಳಹರಿವು 55ಸಾವಿರ ಕ್ಯೂಸೆಕ್ಸ್, ಹೊರಹರಿವು 55 ಸಾವಿರ ಕ್ಯೊಸೆಕ್ ನೀರು ಹರಿದು ಬಿಡಲಾಗಿದೆ. ಕಡಕೋಳ, ಶೂರಪಾಲಿ ಗ್ರಾಮದಲ್ಲಿ ಈಗಾಗಲೇ ಜನತೆ ಬೋಟ್ ಮೂಲಕ ಸಂಚಾರ ಮಾಡುವುದು ಅನಿವಾರ್ಯವಾಗಿದೆ.
ಚಿಕ್ಕೋಡಿಯಲ್ಲಿ ಸುರಿಯುತ್ತಿರುವ ಮಳೆಯ ಪ್ರವಾಹದಿಂದಾಗಿ 2 ಸೇತುವೆಗಳು ಮುಳುಗಿವೆ. ತಾಲೂಕಿನ ಕಲ್ಲೋಳ - ಯಡೂರು ಹಾಗೂ ದತ್ತವಾಡ - ಮಲಿಕವಾಡ ಗ್ರಾಮಗಳ ನಡುವಿನ ಬ್ರಿಜ್ ಕಂ ಬಾಂದಾರ ಮುಳುಗಡೆಯಾಗಿದೆ. ಇದರಿಂದಾಗಿ ಈ ಗ್ರಾಮಗಳ ಜನರ ಸಂಚಾರಕ್ಕೆ ತೊಂದರೆಯಾಗಿದೆ.