ತವರೂರು ಬಾಗಲಕೋಟೆಯೊಂದಿಗೆ ಚಂದ್ರಶೇಖರ್ ಗುರೂಜಿ ನಂಟು
ಬಾಗಲಕೋಟೆ, ಜುಲೈ 06: ಸರಳವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಹತ್ಯೆಯಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ಭೀಕರ ಹತ್ಯೆ ಬಳಿಕ ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ. ಬಾಗಲಕೋಟೆಯಲ್ಲಿರುವ ಗುರೂಜಿಯ ದೂರದ ಸಂಬಂಧಿಗಳು ಹಾಗೂ ಅಕ್ಕಪಕ್ಕದ ಮನೆಯವರು ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಚಂದ್ರಶೇಖರ ಗುರೂಜಿ ಮೂಲತಃ ಉತ್ತರ ಕರ್ನಾಟಕ ಬಾಗಲಕೋಟೆ ಜಿಲ್ಲೆಯವರು. ಮಂಗಳವಾರ ಅವರ ಹತ್ಯೆ ಸುದ್ದಿ ಕೇಳಿ ದೂರದ ಸಂಬಂಧಿಗಳು, ಅಕ್ಕಪಕ್ಕದ ಮನೆಯವರು ಹಾಗೂ ಹಿತೈಷಿಗಳು ಕಣ್ಣೀರಿಟ್ಟಿದ್ದಾರೆ.
ಹಳೇ ಬಾಗಲಕೋಟೆ ಪಟ್ಟಣದ ಹುಂಡೇಕಾರ ಗಲ್ಲಿಯಲ್ಲಿ ಗುರೂಜಿ ತಂದೆ-ತಾಯಿ ವಾಸವಾಗಿದ್ದರು. ಮೂವರು ಸಹೋದರರು, ಮೂವರು ಸಹೋದರಿಯರೊಂದಿಗೆ ಬೆಳೆದು ಬಂದವರು ಗುರೂಜಿ. ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಹಿತ ಬಿಇ ಸಿವಿಲ್ ಪದವಿಯನ್ನು ಬಾಗಲಕೋಟೆಯಲ್ಲಿ ಮುಗಿಸಿದ್ದರು.
ಗುರೂಜಿ 1988ರಲ್ಲಿ ಮುಂಬೈಗೆ ತೆರಳಿದ್ದರು. ಅಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡಿ ನಂತರ ಸಿಂಗಾಪೂರಕ್ಕೆ ಪ್ರಯಾಣ ಬೆಳೆಸಿ, ವಾಸ್ತು ಶಾಸ್ತ್ರ ಅಧ್ಯಯನ ಮಾಡಿ ಬಂದಿದ್ದರು. ಮುಂಬೈಯಲ್ಲಿ ಸರಳವಾಸ್ತು ಕಚೇರಿ ಆರಂಭಿಸಿ ಬಳಿಕ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ತಮ್ಮ ಕಚೇರಿಗಳನ್ನು ಆರಂಭಿಸಿದ್ದರು. ಬಾಗಲಕೋಟೆಯ ಒಂದು ಮನೆಗೆ ಬೀಗ ಹಾಕಿ, ಒಂದು ಮನೆಯನ್ನು ಬಾಡಿಗೆಗೆ ನೀಡಿ, ತಮ್ಮ ತಂದೆ-ತಾಯಿಗಳ ಜೊತೆ ಇಡೀ ಕುಟುಂಬವನ್ನು ಹುಬ್ಬಳ್ಳಿಗೆ ಸ್ಥಳಾಂತರ ಮಾಡಿಸಿದ್ದರು.

ಎಲ್ಲರೊಂದಿಗೂ ಬೆರೆಯುತ್ತಿದ್ದ ವ್ತಕ್ತಿ
ಮಂಗಳವಾರ ಏಕಾಏಕಿ ಗುರೂಜಿ ಧಾರುಣವಾಗಿ ಕೊಲೆಯಾದ ಸುದ್ದಿ ಕೇಳಿ ಗುರೂಜಿ ದೂರದ ಸಂಬಂಧಿಗಳು ತೀವ್ರ ದುಃಖಿತರಾಗಿದ್ದಾರೆ. "ಚಂದ್ರಶೇಖರ ಗುರೂಜಿ ಬಾಗಲಕೋಟೆಗೆ ಬಂದಾಗ ಕಾಲೋನಿಯಲ್ಲಿ ಎಲ್ಲರೊಂದಿಗೆ ಚೆನ್ನಾಗಿ ಬೆರೆತು ಅವರ ಕಷ್ಟಸುಖ ಕೇಳುತ್ತಿದ್ದರು. ಈ ನಡುವೆ ಕೊರೊನಾ ಸಮಯದಲ್ಲಿ ಜಿಲ್ಲಾಡಳಿತದ ಮೂಲಕ ಧನಸಹಾಯವನ್ನೂ ಸಹ ಮಾಡಿದ್ದರು. ಆಹಾರದ ಕಿಟ್ಗಳನ್ನೂ ಸಹ ಹಂಚಿ ಮಾನವೀಯತೆ ಮೆರೆದಿದ್ದರು. ದೇಗುಲದ ಮೂರ್ತಿಗೆ ಬೆಳ್ಳಿ ಕವಚವನ್ನೂ ಸಹ ನೀಡಿದ್ದರೆಂದು" ನೆರೆಹೊರೆಯವರು ಗುರೂಜಿ ಜೊತೆಗಿನ ಸಂಬಂಧವನ್ನು ನೆನೆದಿದ್ದಾರೆ.

ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹ
ಸರಳವಾಸ್ತು ತಜ್ಞರೆಂದೇ ಖ್ಯಾತಿ ಪಡೆದಿದ್ದ ಚಂದ್ರಶೇಖರ ಗುರೂಜಿಯನ್ನು ಮಂಗಳವಾರ ಹಾಡಹಗಲೇ ಧಾರುಣವಾಗಿ ಕೊಲೆ ಮಾಡಲಾಗಿತ್ತು. ಅಂತಾ ಒಳ್ಳೆ ಮನುಷ್ಯನನ್ನು ಈ ರೀತಿ ಕ್ರೂರವಾಗಿ ಕೊಂದಿರುವುದು ಆಘಾತ ತಂದಿದೆ. ಕೊಲೆ ಮಾಡಿದವರಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಸಂಬಂಧಿಕರು ಹಾಗೂ ಹಿತೈಷಿಗಳು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಆಪ್ತರಾಗಿದ್ದವರಿಂದಲೇ ಹತ್ಯೆ
ಹುಬ್ಬಳ್ಳಿಯಲ್ಲಿ ಮಂಗಳವಾರ ಚಂದ್ರಶೇಖರ್ ಗುರೂಜಿ ಹತ್ಯೆ ಮಾಡಿದ್ದ ಆರೋಪಿಗಳಾದ ಮಹಾಂತೇಶ ಮತ್ತು ಮಂಜುನಾಥ ಸರಳ ವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿಗಳು. ಮಹಂತೇಶ್ ಎಂಬಾತ ಅಲ್ಲಿಯೇ ಉದ್ಯೋಗ ಮಾಡುತ್ತಿದ್ದ ವನಜಾಕ್ಷಿ ಎಂಬುವವರನ್ನು ಮದುವೆಯಾಗಿದ್ದನು.
ಗುರೂಜಿಯ ಎಲ್ಲಾ ವ್ಯವಹಾರಗಳು ಈ ಮೂವರಿಗೂ ತಿಳಿದಿತ್ತು. ಅಲ್ಲದೇ, ವನಜಾಕ್ಷಿ ಗುರೂಜಿಗೆ ಆಪ್ತಳಾಗಿದ್ದು, ಅವರ ಅಪಾರ್ಟ್ಮೆಂಟ್ ಸೇರಿದಂತೆ ಹಲವು ಆಸ್ತಿಗಳನ್ನು ನೋಂದಣಿ ಮಾಡಿಸಿದ್ದರು. ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಿರುವ ಕುರಿತು ಪ್ರಶ್ನಿಸಿದಾಗ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಈ ಘಟನೆ ನಡೆದಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇಬ್ಬರು ಆರೋಪಿಗಳ ಬಂಧನ
ಹಾಡಹಗಲೇ ಗುರೂಜಿಯನ್ನು ಹತ್ಯೆ ಮಾಡಿದ್ದ ಆರೋಪಿಗಳನ್ನು ಹುಬ್ಬಳ್ಳಿಯ ವಿದ್ಯಾನಗರದ ಪೊಲೀಸರು ಬೆಳಗಾವಿಯ ರಾಮದುರ್ಗದಲ್ಲಿ ಆರೋಪಿಗಳಾದ ಮಹಾಂತೇಶ್ ಶಿರೂರ ಮತ್ತು ಮಂಜುನಾಥ ದುಮ್ಮಾಡನನ್ನು ಹತ್ಯೆ ಮಾಡಿದ ನಾಲ್ಕೈದು ಘಂಟೆಗಳಲ್ಲಿ ಬಂಧಿಸಿದ್ದಾರೆ. ಆರೋಪಿಗಳು ಕಾರಿನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದರು. ಈ ವಿಷಯ ತಿಳಿದು ಜೆಸಿಬಿಯಿಂದ ಕಾರನ್ನು ಅಡ್ಡಗಟ್ಟಿ ಗನ್ ಪಾಯಿಂಟ್ನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.












Click it and Unblock the Notifications