ಬಾಗಲಕೋಟೆಯಲ್ಲಿಎಸಿಬಿ ದಾಳಿ: ಲೆಕ್ಕಕ್ಕೆ ಸಿಗದ ಆಸ್ತಿ ಪತ್ತೆ
ಬಾಗಲಕೋಟೆ, ಜೂ17: ರಾಜ್ಯದ ಅನೇಕ ಭಾಗಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶುಕ್ರವಾರ ಬೆಳ್ಳಂಬೆಳಿಗ್ಗೆ ದಾಳಿಗಳನ್ನು ನಡೆಸಿದೆ. ಈ ಮೂಲಕ ಭ್ರಷ್ಟರಿಗೆ ಶಾಕ್ ನೀಡಿದೆ. ಬಾಗಲಕೋಟೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರ್ ಗೋಗಿ ಸೇರಿದಂತೆ ಆಪ್ತರ ಮನೆ ಸೇರಿ ಐದು ಕಡೆ ಎಸಿಬಿ ಮೇಲೆ ದಾಳಿ ಮಾಡಿದ್ದಾರೆ.
ಆದಾಯಕ್ಕಿಂತ ಅಧಿಕ ಆಸ್ತಿ ಮಾಹಿತಿ ಹಿನ್ನೆಲೆ ನವನಗರದ 55ನೇ ಸೆಕ್ಟರ್ ನ ಮನೆ ಮೇಲೆ ಶುಕ್ರವಾರ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು. ಗೋಗಿ ಅವರ ಸಂಬಂಧಿಕರ ಮನೆಗಳಲ್ಲೂ ತಪಾಸಣೆ ನಡೆಸಲಾಗುತ್ತಿದೆ. ದಾಖಲೆಗಳ ಪರಿಶೀಲನೆಗಾಗಿ ನಿರ್ಮಿತಿ ಕೇಂದ್ರದ ಕಚೇರಿಗೂ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ಡಿಎಸ್ ಪಿ ಸುರೇಶ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಎಸಿಬಿ ಡಿವೈಎಸ್ ಪಿ ಸುರೇಶ್ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಹದಿನೈದು ಜನ ಅಧಿಕಾರಿಗಳ ತಂಡದಿಂದ ಪರಿಶೀಲನೆ ಮಾಡುತ್ತಿದ್ದಾರೆ. ಅಧಿಕಾರಿಗಳು ಶಂಕರ್ ಗೋಗಿ ನಿವಾಸದಲ್ಲಿ ದಾಖಲೆ ಜಾಲಾಡುತ್ತಿದ್ದಾರೆ. ಸದ್ಯ ಮನೆಯಲ್ಲಿ1 ಲಕ್ಷ 15 ಸಾವಿರ ರೂ. ನಗದು ಹಣ, ಮಗನ ಹೆಸರಿನಲ್ಲಿ 8 ಲಕ್ಷ 90 ಸಾವಿರ ರೂ. ಇಟ್ಟಿದ್ದು, ಬಂಗಾರದ ಒಡವೆ, ಚಿನ್ನದ ಸರಾ, ಬೆಳ್ಳಿಯ ಗಣಪತಿ, ಬೆಳ್ಳಿಯ ಚೆಂಬು, ಲೋಟ, ನಗದು ಪತ್ತೆಯಾಗಿದೆ.

ಶಂಕರಲಿಂಗ್ ಗೋಗಿ ಆಪ್ತರ ಮನೆಯಲ್ಲಿ ಶೋಧ ಕಾರ್ಯ
ಶಂಕರಲಿಂಗ್ ಗೋಗಿ ಹೆಸರಿನಲ್ಲಿ ಟೊಯೋಟಾ ಇನ್ನೋವಾ, ಹಾಗೂ ಮಹಿಂದ್ರಾ ಎಕ್ಸ್ಯೂವಿ 500 ಹೆಸರುನ ಎರಡು ಐಶಾರಾಮಿ ಕಾರ್. ಅಗೆದಷ್ಟು, ಬಗೆದಷ್ಟು ಸಿಗತ್ತಿದೆ ಬೇನಾಮಿ ಆಸ್ತಿ, ಚಿನ್ನಾಭರಣ. ಬೇರೆಯವರ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂಬುದು ಕಂಡು ಬಂದಿದೆ. ಬಾಗಲಕೋಟೆಯ ದೇಸಾಯಿ, ಹಿರೇಮಠ್ ಹಾಗೂ ಹುಬ್ಬಳ್ಳಿಯ ಗಣೇಶ್ ದುಂಡ್ಸೀಕರ್ ಸೇರಿ ಐವರು ಆಪ್ತರ ಮನೆಯಲ್ಲಿ ಶೋಧ ಕಾರ್ಯ ನಡೆದಿದ್ದು, ಅಧಿಕಾರಿಗಳು ಶೀಘ್ರದಲ್ಲೇ ಬ್ಯಾಂಕ್ ಲಾಕರ್ ಓಪನ್ ಮಾಡಲು ನಿರ್ಧರಿಸಿದ್ದಾರೆ.
ಹಾಗೆಯೇ ಬಾಗಲಕೋಟೆ ಆರ್ಟಿಒ ಮನೆ ಮೇಲೆ ಕೂಡ ಎಸಿಬಿ ದಾಳಿ ನಡೆದಿದೆ. ಜಿಲ್ಲೆಯ ನವನಗರದ 58ನೇ ಸೆಕ್ಟರ್ ನಲ್ಲಿರುವ ಆರ್ಟಿಒ ಯಲ್ಲಪ್ಪ ಪಡಸಾಲಿ ಮನೆ ಮೇಲೆ ದಾಳಿ ನಡೆದಿದ್ದು, ಧಾರವಾಡದಲ್ಲಿರುವ ಪಡಸಾಲಿ ಅವರ ಮನೆ ಮೇಲೆ ಕೂಡ ದಾಳಿ ನಡೆಸಲಾಗಿದೆ. ಪಡಸಾಲಿ ಅವರು ಬಾಗಲಕೋಟೆಯಲ್ಲಿ ಬಾಡಿಗೆ ಮನೆಯಲ್ಲಿದ್ದಾರೆ.

ರಾಯಚೂರಿನಲ್ಲಿ ದಾಳಿ
ಪೊಲೀಸ್ ಅಧಿಕಾರಿ ಕೂಡ ಎಸಿಬಿಯ ಜಾಲಕ್ಕೆ ಬಿದ್ದಿದ್ದಾರೆ. ರಾಯಚೂರಿನ ಲಿಂಗಸಗೂರು ತಾಲೂಕಿನ ಮುದಗಲ್ ನಲ್ಲಿರುವ ಸಿಪಿಐ ಉದಯರವಿ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಕೊಪ್ಪಳ ಸಿಪಿಐ ಆಗಿದ್ದ ಉದಯ ರವಿ ಇತ್ತೀಚೆಗೆ ಬೆಂಗಳೂರು ರಾಜ್ಯ ಗುಪ್ತ ಇಲಾಖೆಗೆ ವರ್ಗವಾಗಿದ್ದರು. ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ದೂರು ಬಂದಿದ್ದರಿಂದ ಎಸಿಬಿ ದಾಳಿಯಾಗಿದೆ. ಏಳು ಜನರ ಅಧಿಕಾರಿಗಳ ತಂಡ ಮನೆಯಲ್ಲಿ ಪರಿಶೀಲನೆ ನಡೆಸಿದೆ

ಕಲಬರುಗಿಯಲ್ಲಿ ಅಧಿಕಾರಿಗೆ ಶಾಕ್
ಕಲಬುರಗಿಯಲ್ಲಿ ಕೂಡ ಎಸಿಬಿ ಅಧಿಕಾರಿಗಳು ರೇಡ್ ನಡೆಸಿದ್ದಾರೆ. ಬೀದರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ನಿರೂಪಣಾಧಿಕಾರಿ ತಿಪ್ಪಣ್ಣ ಸಿರಸಗಿ ಅವರಿಗೆ ಸೇರಿದ ಕಲಬುರಗಿ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ. ಕಲಬುರಗಿ ನಗರದ ಕೆ ಎಚ್ ಬಿ ಕಾಲೋನಿಯ ನಿವಾಸದಲ್ಲಿ ಎಸಿಬಿ ಪರಿಶೀಲನೆ ಮಾಡುತ್ತಿದೆ. ತಿಪ್ಪಣ್ಣ ಸಿರಸಗಿ ಈ ಹಿಂದೆ ಮಹಿಳೆಯರಿಗೆ ಉದ್ಯೋಗ ಕೋಡಿಸುವುದಾಗಿ ಲಕ್ಷಾಂತರ ಹಣ ಲೂಟಿ ಮಾಡಿದ್ದ ಆರೋಪ ಎದುರಿಸುತ್ತಿದ್ದಾರೆ.

ಬೆಳಗಾವಿ, ವಿಜಯನಗರದಲ್ಲಿ ದಾಳಿ
ಬೆಳಗಾವಿಯ ಸುಪರಿಂಟೆಂಡೆಂಟ್ ಆಫ್ ಎಂಜಿನಿಯರ್ ಭೀಮ ರಾವ್ ವೈ ಪವಾರ್, ಬೆಳಗಾವಿಯ ಐಜಿಆರ್ ಕಚೇರಿ ಜಿಲ್ಲಾ ರಿಜಿಸ್ಟ್ರಾರ್ ಮಧುಸೂದನ್, ಗದಗದ ಆರ್ಡಿಪಿಆರ್ ನ ಪಂಚಾಯತ್ ಗ್ರೇಡ್2ರ ಕಾರ್ಯದರ್ಶಿ ಪ್ರದೀಪ್ ಎಸ್ ಆಲೂರ್, ಬೀದರ್ನ ಕರ್ನಾಟಕ ಪಶುಸಂಗೋಪನೆ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಾಯಕ ಕಂಪ್ಟ್ರೋಲರ್ ಮೃತ್ಯುಂಜಯ ಚೆನ್ನಬಸವಯ್ಯ ತಿರಾನಿ, ರಾಣೆಬೆನ್ನೂರು ಯುಟಿಪಿ ಕಚೇರಿಯ ಚಂದ್ರಪ್ಪ ಸಿ ಹೋಲೆಕಾರ್ ಅವರ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಪರಮೇಶ್ವರಪ್ಪ ಮನೆ, ಕಚೇರಿ ಮೇಲೂ ಎಸಿಬಿ ದಾಳಿ ನಡೆದಿದೆ. ಕೂಡ್ಲಿಗಿಯ ಸಣ್ಣ ನೀರಾವರಿ ಇಲಾಖೆಯ ಕಚೇರಿಯಲ್ಲಿ ಕರ್ತವ್ಯ ಮಾಡುತ್ತಿರುವ ಅಧಿಕಾರಿ ಪರಮೇಶ್ವರಪ್ಪಗೆ ಸೇರಿದ ಹಗರಿಬೊಮ್ಮನಹಳ್ಳಿ ಪಟ್ಟಣದ ವಾಸದ ಮನೆ, ಚಿತ್ರದುರ್ಗದ ವಿದ್ಯಾನಗರ ಬಡಾವಣೆಯ ಸ್ವಂತ ಮನೆ ಹಾಗೂ ಕಚೇರಿ ಮೇಲೆ ಪ್ರತ್ಯೇಕ ದಾಳಿ ಮಾಡಲಾಗಿದೆ. ಮನೆ ಹಾಗೂ ಕಚೇರಿಯಲ್ಲಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications