ನಿಮ್ಮಪ್ಪನ ಅನಧಿಕೃತ ಪುತ್ಥಳಿಯನ್ನೂ ಕೆಡವುತ್ತೀರಾ? ಜಗನ್ ಗೆ ನಾಯ್ಡು ಸವಾಲು
ಅಮರಾವತಿ, ಜೂನ್ 26: 8 ಕೋಟಿ ರುಪಾಯಿ ಮೌಲ್ಯದ ಸಭಾಂಗಣವನ್ನು 'ಕಾನೂನುಬಾಹಿರ ನಿರ್ಮಾಣ' ಎಂದು ಕಾರಣ ನೀಡಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಕೆಡವಿರುವುದರ ಬಗ್ಗೆ ಬುಧವಾರ ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಮಾತನಾಡಿದ್ದಾರೆ. ಸರಕಾರಿ ಆಸ್ತಿಯನ್ನು ಧ್ವಂಸ ಮಾಡುವುದು ಮೂರ್ಖತನ ಎಂದು ಅವರು ಕರೆದಿದ್ದಾರೆ.
ಈ ಕಟ್ಟಡ 'ಕಾನೂನುಬಾಹಿರ', ಇದನ್ನು ಧ್ವಂಸ ಮಾಡಬೇಕು ಎಂದು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಕಳೆದ ವಾರ ಆದೇಶ ನೀಡಿದ್ದರು. ಅದಕ್ಕೂ ಮೊದಲು, ಈ ಕಟ್ಟಡವನ್ನು ಕಚೇರಿಯಾಗಿ ಬಳಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಚಂದ್ರಬಾಬು ನಾಯ್ಡು ಮನವಿ ಮಾಡಿದ್ದರು.
'ಪ್ರಜಾ ವೇದಿಕಾ' ಕಟ್ಟಡವನ್ನು ನಾಯ್ಡು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅವರ ನಿವಾಸದ ಬಳಿ ನಿರ್ಮಿಸಲಾಗಿತ್ತು. ಮಂಗಳವಾರ ಸಂಜೆಯಿಂದ ಕೆಡವುವ ಕೆಲಸ ಆರಂಭಿಸಲಾಗಿತ್ತು. ಯುರೋಪ್ ಪ್ರವಾಸಕ್ಕೆ ತೆರಳಿದ್ದ ನಾಯ್ದು ಮಂಗಳವಾರ ಹಿಂತಿರುಗಿದ್ದರು.

ಹಲವು ಪುತ್ಥಳಿಗೆ ಅನುಮತಿಯೇ ಇಲ್ಲ ಹಾಗೂ ಅನಧಿಕೃತವಾದ ಜಾಗದಲ್ಲಿ ಅವುಗಳನ್ನು ನಿಲ್ಲಿಸಲಾಗಿದೆ ಎಂದಿರುವ ನಾಯ್ಡು, ಸಿಎಂ ಜಗನ್ ತಂದೆ ಹಾಗೂ ದಿವಂಗತ ಮುಖ್ಯಮಂತ್ರಿ ವೈಎಸ್ ರಾಜಶೇಖರ್ ರೆಡ್ಡಿ ಪುತ್ಥಳಿಗಳನ್ನು ಉರುಳಿಸುವ ಯೋಜನೆ ಇಟ್ಟುಕೊಂಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಟಿಡಿಪಿ ಆರೋಪಿಸಿದೆ.












Click it and Unblock the Notifications