ಸ್ವಾದಿಷ್ಟ ತಿರುಪತಿ ಲಡ್ಡುಗೆ 307ನೇ ಹುಟ್ಟುಹಬ್ಬದ ಸಂಭ್ರಮ
ಕೋಟ್ಯಾಂತರ ಹಿಂದೂ ಆಸ್ತಿಕರ ಆರಾಧ್ಯ ದೈವ, ಭೂವೈಕುಂಠ ಎಂದೇ ಕರೆಯಲ್ಪಡುವ ತಿರುಮಲ ವೆಂಕಟೇಶ್ವರಸ್ವಾಮಿ ದೇವಾಲಯಕ್ಕೆ ಹೇಗೆ ಶತಶತಮಾನಗಳ ಇತಿಹಾಸವಿದೆಯೋ ಅದೇ ರೀತಿ ಅಲ್ಲಿನ ಜಗತ್ಪ್ರಸಿದ್ದ ಲಡ್ಡುಗೆ ಕೂಡಾ..
ಯಾರಾದರೂ ತಿರುಪತಿಗೆ ಹೋಗುತ್ತಿದ್ದೇವೆ ಎಂದು ಹೇಳಿದರೆ, ಲಡ್ಡು ತರುವುದನ್ನು ಮರೆಯಬೇಡಿ ಎನ್ನುವುದು ಸಾಮಾನ್ಯ. ತಿರುಪತಿ ಲಡ್ಡು ಅಥವಾ ಶ್ರೀವಾರಿ ಲಡ್ಡು ಎಂದು ಕರೆಯಲ್ಪಡುವ ಇದರ ಇತಿಹಾಸವೂ ಅಷ್ಟೇ ಇಂಟರೆಸ್ಟಿಂಗ್ ಆಗಿದೆ.
307 ವರ್ಷದ ಹಿಂದೆ ತಿಮ್ಮಪ್ಪನಿಗೆ ನೈವೇದ್ಯದ ರೂಪದಲ್ಲಿ ಲಡ್ಡು ಪ್ರಸಾದ ಆರಂಭವಾಯಿತು. ಆಗಸ್ಟ್ 2, 1715ರಲ್ಲಿ ಮೊದಲ ಬಾರಿಗೆ ಲಡ್ಡುವನ್ನು ತಿಮ್ಮಪ್ಪನಿಗೆ ನೈವೇದ್ಯವಾಗಿ ಇಡಲು ಅಂದು ನಿರ್ಧರಿಸಲಾಗಿತ್ತು. ಇದನ್ನೇ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುತ್ತಿದೆ.
ಪೋಟು ಎಂದು ಕರೆಯಲ್ಪಡುವ ದೇವಾಲಯದ ವಿಶಾಲವಾದ ಜಾಗದಲ್ಲಿ ನೂರಾರು ಸಿಬ್ಬಂದಿ ಲಡ್ಡುವನ್ನು ತಯಾರಿಸುತ್ತಾರೆ. ತಿರುಪತಿ ಲಡ್ಡುಗೆ ಜಿಯೋಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್ ದೊರಕಿದ್ದು, ದೇವಾಲಯದ ಆವರಣದ ಹೊರತಾಗಿ ಎಲ್ಲೂ ಇದನ್ನು ತಯಾರಿಸುವಂತಿಲ್ಲ.

ಶ್ರಾವಣ ಮಾಸ, ವೈಕುಂಠ ಏಕಾದಶಿ, ದಸರಾ ಸಮಯ
ಲಕ್ಷಲಕ್ಷ ಸಂಖ್ಯೆಯಲ್ಲಿ ಮಾರಾಟವಾಗುವ ಲಡ್ಡು, ಒಂದು ವೇಳೆ ಹೆಚ್ಚುವರಿಯಾಗಿ ಬೇಕಾದರೆ, ಅದಕ್ಕೂ ಶಿಫಾರಸನ್ನು ಪಡೆಯುವ ಅವಶ್ಯಕತೆಯೂ ಬಹಳಷ್ಟು ಬಾರಿ ಬಿದ್ದಿದ್ದಿದೆ. ಭಕ್ತರ ಸಂಖ್ಯೆ ಹೆಚ್ಚಾಗಿ, ಲಡ್ಡು ತಯಾರಿ ಕಮ್ಮಿಯಾದರೆ, ಭಕ್ತರಿಗೆ ಇಂತಿಷ್ಟೇ ಲಡ್ಡು ಕೊಡುವ ಪ್ರಸಂಗ ಶ್ರಾವಣ ಮಾಸ, ವೈಕುಂಠ ಏಕಾದಶಿ, ದಸರಾ ಸಮಯದಲ್ಲಿ ಎದುರಾಗಿದ್ದಿದೆ.

ಲಡ್ಡುವಿಗೆ ಬದಲಾಗಿ ಬೂಂದಿಯನ್ನು ಕೊಡಲಾಗುತ್ತಿತಂತೆ
ಲಡ್ಡು ನೈವೇದ್ಯ ನೀಡುವ ಆರಂಭದ ದಿನಗಳಲ್ಲಿ ಲಡ್ಡುವಿಗೆ ಬದಲಾಗಿ ಬೂಂದಿಯನ್ನು ಕೊಡಲಾಗುತ್ತಿತಂತೆ. 1940ರ ಸುಮಾರಿಗೆ ಬೂಂದಿಗೆ ಲಡ್ಡುವಿನ ರೂಪವನ್ನು ನೀಡಲಾಗಿತ್ತು. ಕಲ್ಯಾಣಂ ಅಯ್ಯಂಗಾರ್ ಎನ್ನುವ ವ್ಯಕ್ತಿ ಲಡ್ಡುವಿನ ರೂಪ ಬರುವುದಕ್ಕೆ ಮೂಲ ಕಾರಣ, ಇದಕ್ಕೆ ಮಿರಾಸಿದಾರ್ ವ್ಯವಸ್ಥೆಯನ್ನು ಪರಿಚಯಿಸಲಾಯಿತು ಎನ್ನುತ್ತದೆ ತಿರುಪತಿ ಲಡ್ಡುವಿನ ಇತಿಹಾಸ.

ಆಂಧ್ರ ಪ್ರದೇಶ ಸರಕಾರದಿಂದ ಮಿರಾಸಿದಾರ್ ಪದ್ದತಿ ರದ್ದು
ಗೇಮ್ಕರ್ ಮಿರಾಸಿದಾರ್ ಎನ್ನುವ ತಂಡ 2000 ಇಸವಿಯವರೆಗೆ ಲಡ್ಡುವನ್ನು ತಯಾರಿಸುತ್ತಿತ್ತು, ಇವರು ತಯಾರಿಸುವ ಐವತ್ತು ಲಡ್ಡುಗಳ ಪೈಕಿ ಹನ್ನೊಂದು ಲಡ್ಡುವನ್ನು ಈ ತಂಡದ ಕುಟುಂಬಕ್ಕೆ ನೀಡಲಾಗುತ್ತಿತ್ತು. ಆಂಧ್ರ ಪ್ರದೇಶ ಸರಕಾರ ಮಿರಾಸಿದಾರ್ ಪದ್ದತಿಯನ್ನು ರದ್ದುಗೊಳಿಸಿದ ನಂತರ, ಅದಕ್ಕಾಗಿಯೇ ಪ್ರತ್ಯೇಕ ತಂಡವನ್ನು ರಚಿಸಲಾಯಿತು. ದಶಕಗಳ ಹಿಂದೆ ತೆಂಗಿನಕಾಯಿ ಗಾತ್ರದಲ್ಲಿದ್ದ ತಿರುಪತಿ ಲಡ್ಡುವಿನ ಸೈಜ್ ಬರಬರುತ್ತಾ ಕಮ್ಮಿಯಾಗುತ್ತಾ ಬರುತ್ತಿದೆ.

ಲಡ್ಡುವಿಲ್ಲದೇ ತಿರುಪತಿ ಯಾತ್ರೆ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಲಡ್ಡು ಜನಪ್ರಿಯತೆ
ಲಡ್ಡುವಿಲ್ಲದೇ ತಿರುಪತಿ ಯಾತ್ರೆ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಲಡ್ಡು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಲಡ್ಡು ತಯಾರಿಸಲು ಬಳಸುವ ಪದಾರ್ಥಗಳನ್ನು ದಿತ್ತಂ ಎಂದು ಕರೆಯಲಾಗುತ್ತದೆ. ಲಡ್ಡುಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ, 307 ವರ್ಷಗಳ ಇತಿಹಾಸದಲ್ಲಿ ಇದನ್ನು ಆರು ಬಾರಿ ಬದಲಾವಣೆ ಮಾಡಲಾಗಿದೆ. ಸದ್ಯ, ಕಡಲೆಹಿಟ್ಟು, ಗೋಡಂಬಿ, ಏಲಕ್ಕಿ,ತುಪ್ಪ, ಸಕ್ಕರೆ, ಶುಗರ್ ಕ್ಯಾಂಡಿ, ಒಣದ್ರಾಕ್ಷಿಯನ್ನು ಬಳಸಲಾಗುತ್ತಿದೆ.












Click it and Unblock the Notifications