ಟಿಟಿಡಿ ವೆಬ್ ತಾಣ ಸ್ವಚ್ಛವಾಗಿದೆ, ಟಿಡಿಪಿಗೆ ಸುಬ್ಬಾರೆಡ್ಡಿ ಎಚ್ಚರಿಕೆ
ಅಮರಾವತಿ, ಡಿಸೆಂಬರ್ 02: ವಿಶ್ವದ ಅತ್ಯಂತ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ಸನ್ನಿಧಿ ನಿರ್ವಹಿಸುವ ಮಂಡಳಿ ಮತ್ತೊಮ್ಮೆ ಬೇಡದ ಕಾರಣಕ್ಕೆ ಸುದ್ದಿಯಲ್ಲಿದೆ. ಆಂಧ್ರಪ್ರದೇಶ ಸರ್ಕಾರಿ ಸ್ವಾಮ್ಯ ಸಂಸ್ಥೆಯಿಂದ ಮತ್ತೊಮ್ಮೆ ಅನ್ಯಮತ ಪ್ರಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿಂದೆ ಸರ್ಕಾರಿ ಸಾರಿಗೆ ಸಂಸ್ಥೆ ಮೇಲೆ ಆರೋಪ ಕೇಳಿ ಬಂದಿತ್ತು. ಈಗ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ವೆಬ್ ತಾಣದಲ್ಲಿ ಯೇಸು ಕ್ರಿಸ್ತನ ಹೆಸರು ಕಾಣಿಸಿಕೊಂಡಿದೆ ಎಂದು ಸುದ್ದಿ ಹಬ್ಬಿದೆ. ಈ ಬಗ್ಗೆ ಟಿಟಿಡಿ ಅಧ್ಯಕ್ಷ ವೈಎಸ್ ಸುಬ್ಬಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಟಿಟಿಡಿಯ ಅಧಿಕೃತ ವೆಬ್ಸೈಟ್(ತಿರುಮಲ. ಆರ್ಗ್ )ನಲ್ಲಿ ಕ್ರೈಸ್ತ ಧರ್ಮದ ಪ್ರಾರ್ಥನೆಗಳ ಸಾಲುಗಳು, ಯೇಸುಕ್ರಿಸ್ತನ ಚಿತ್ರ ಕಾಣಿಸಿಕೊಂಡಿದೆ ಎಂದು ಹಿಂದುಗಳು ಆಕ್ಷೇಪ ವ್ಯಕ್ತಪಡಿಸಿ, ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಶ್ರೀಪದ್ಮಾವತಿ ಗೆಸ್ಟ್ ಹೌಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಬ್ಬಾರೆಡ್ಡಿ, ಟಿಟಿಡಿ ಹಾಗೂ ಸರ್ಕಾರದ ವಿರುದ್ಧ ಧರ್ಮ ದ್ವೇಷಿ ಎಂದು ತೆಲುಗುದೇಶಂ ಪಾರ್ಟಿ ವಿಷಬೀಜ ಬಿತ್ತುತ್ತಿದೆ. ಇದರಿಂದ ಆಂಧ್ರಪ್ರದೇಶದ ಕೋಮು ಸೌಹಾರ್ದತೆ ಹದಗೆಡುತ್ತಿದೆ. ಇದರ ಸತ್ಯಾಸತ್ಯತೆ ಮನಗಾಣದೆ ಕೆಲ ಮಾಧ್ಯಮಗಳು ಟಿಟಿಡಿ ವಿರುದ್ಧ ಕೆಟ್ಟ ಭಾವನೆ ಬರುವಂತೆ ಸುದ್ದಿ ಮಾಡಿರುವುದು ಕಂಡು ಬಂದಿದೆ. ಟಿಡಿಪಿ ಈ ರೀತಿ ಧರ್ಮದಲ್ಲಿ ರಾಜಕೀಯ ಬೆರೆಸಿ, ಶಾಂತಿ, ಸೌಹಾರ್ದತೆ ಕೆಡಿಸಿದರೆ ಜನರೇ ಪಾಠ ಕಲಿಸುತ್ತಾರೆ ಎಂದಿದ್ದಾರೆ.
ಏನಿದು ವಿವಾದ: ದೇವಾಲಯದ 2020ರ ಕಾರ್ಯಕ್ರಮ ವಿವರವುಳ್ಳ ಕ್ಯಾಲೆಂಡರ್ ಹಾಗೂ ಡೈರಿಯನ್ನು ಡೌನ್ ಲೋಡ್ ಮಾಡಿಕೊಳ್ಳುವ ಸೌಲಭ್ಯವನ್ನು ವೆಬ್ ತಾಣದಲ್ಲಿ ನೀಡಲಾಗಿತ್ತು. ಆದರೆ, ಕ್ಯಾಲೆಂಡರ್ ಡೌನ್ ಲೋಡ್ ಮಾಡಲು ಕ್ಲಿಕ್ ಮಾಡಿದರೆ ಶ್ರೀಯೇಸಯ್ಯ ಎಂದು ಲಿಂಕ್ ಓಪನ್ ಆಗುತ್ತಿತ್ತು. ಅದರಲ್ಲಿ ಕ್ರೈಸ್ತ ಧರ್ಮದ ಬಗ್ಗೆ ಪ್ರಚಾರ ಸಾಮಾಗ್ರಿಗಳಿದ್ದವು. ಈ ಬಗ್ಗೆ ಕೆಲ ಭಕ್ತಾದಿಗಳು ನೇರವಾಗಿ ಟಿಟಿಡಿಗೆ ದೂರು ನೀಡಿದರೆ, ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ಗೂಗಲ್ ಗೆ ವರದಿ ಕೋರಲಾಗಿದೆ:
ವೆಬ್ ಸೈಟ್ನಲ್ಲಿ ಕ್ರೈಸ್ತಧರ್ಮದ ಸಾಲುಗಳು ಕಂಡು ಬಂದ ತಕ್ಷಣ, ವೆಬ್ ಸೈಟ್ ಹ್ಯಾಕ್ ಆಗಿರುವ ಬಗ್ಗೆ ಚೆಕ್ ಮಾಡಲಾಯಿತು. ತಪ್ಪು ಮಾಹಿತಿ ಪ್ರಸಾರ ಮಾಡಿದವರ ಬಗ್ಗೆ ಪತ್ತೆ ಹಚ್ಚಲಾಗುವುದು, ಈ ಬಗ್ಗೆ ಸೈಬರ್ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸಲಾಗಿದೆ. ಈ ರೀತಿ ಸಮಸ್ಯೆಗಳನ್ನು ಪರಿಹರಿಸಲು ಪ್ರತ್ಯೇಕ ವಿಭಾಗ್ ಸ್ಥಾಪನೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಗೂಗಲ್ ಸರ್ಚ್ ನಲ್ಲಿ ಈ ಬಗ್ಗೆ ಮಾಹಿತಿ ಬಂದಿದ್ದು ಹೇಗೆ ಎಂಬುದರ ಬಗ್ಗೆ ವರದಿ ಕೇಳಲಾಗಿದೆ ಎಂದು ಟಿಟಿಡಿ ಮುಖ್ಯ ಭದ್ರತಾ ಅಧಿಕಾರಿ ಗೋಪಿನಾಥ್ ಜೆಟ್ಟಿ ಹೇಳಿದ್ದಾರೆ.












Click it and Unblock the Notifications