ಅಮರಾವತಿ ಉಮೇಶ್ ಕೊಲ್ಹೆ ಹತ್ಯೆ ಪ್ರಕರಣ: ಇದುವರೆಗೂ ಏಳು ಜನರ ಬಂಧನ
ಅಮರಾವತಿ, ಜುಲೈ 4: ಅಮರಾವತಿ ಕೊಲೆ ಪ್ರಕರಣದ ಆರೋಪಿ ಇರ್ಫಾನ್ ಶೇಖ್ನನ್ನು ಅಮರಾವತಿ ಪೊಲೀಸರು ನಾಗ್ಪುರದಲ್ಲಿ ಭಾನುವಾರ ಬಂಧಿಸಿದ್ದಾರೆ. ಇದಕ್ಕೂ ಮೊದಲು ಆರು ಆರೋಪಿಗಳನ್ನು ಬಂಧಿಸಿದ್ದರು. ಇದರೊಂದಿಗೆ ಈವರೆಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಲಾಗಿದೆ.
ಮುದಸ್ಸಿರ್ ಅಹ್ಮದ್ ವಯಸ್ಸು (22), ಶಾರುಖ್ ಪಠಾಣ್ (25), ಅಬ್ದುಲ್ ತೌಫೀಕ್ (24), ಶೋಯೆಬ್ ಖಾನ್ (22), ಅತಿಬ್ ರಶೀದ್ (22) ಮತ್ತು ಯೂಸುಫ್ ಖಾನ್ ಬಹದ್ದೂರ್ ಖಾನ್ (44) ಎನ್ನುವವರನ್ನು ಬಂಧಿಸಲಾಗಿತ್ತು.
ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ನೂಪುರ್ ಶರ್ಮಾ ಬೆಂಬಲಿಸುವ ಪೋಸ್ಟ್ ಹಂಚಿಕೊಂಡಿದ್ದಕ್ಕಾಗಿ ಸಾರ್ವಜನಿಕವಾಗಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾಗಿದೆ. ರಾಜಸ್ಥಾನದ ಉದಯಪುರ ಮಾದರಿಯಲ್ಲೇ ಈ ಹತ್ಯೆ ನಡೆದಿದೆ ಎನ್ನಲಾಗಿದೆ.
ರಸಾಯನಶಾಸ್ತ್ರಜ್ಞರಾದ ಉಮೇಶ್ ಕೊಲ್ಹೆಯವರನ್ನು ಸಾರ್ವಜನಿಕವಾಗಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಕೊಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಹಾರಾಷ್ಟ್ರ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
ರಾಷ್ಟ್ರೀಯ ಗುಪ್ತಚರ ಸಂಸ್ಥೆ (ಎನ್ಐಎ) ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ಕೊಲೆಗೆ ಸಂಬಂಧಿಸಿದಂತೆ ಇದುವರೆಗೆ ಏಳು ಮಂದಿಯನ್ನು ಬಂಧಿಸಲಾಗಿದೆ. ಪ್ರವಾದಿ ಮುಹಮ್ಮದ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದ ಬಿಜೆಪಿಯ ಮಾಜಿ ನಾಯಕಿ ನೂಪುರ್ ಶರ್ಮಾ ಅವರಿಗೆ ಬೆಂಬಲ ನೀಡಿರುವುದು ಹತ್ಯೆ ಮಾಡಲು ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದ್ವಿಚಕ್ರ ವಾಹನದಲ್ಲಿ ಬಂದು ಹತ್ಯೆ
54 ವರ್ಷದ ರಸಾಯನಶಾಸ್ತ್ರಜ್ಞ ಉಮೇಶ್ ಕೊಲ್ಹೆ ಅವರು ಅಮರಾವತಿಯಲ್ಲಿ ರಾತ್ರಿ 10 ಗಂಟೆಗೆ ತನ್ನ ಅಂಗಡಿಯನ್ನು ಮುಚ್ಚಿ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದರು. ಮನೆಗೆ ಹೋಗುತ್ತಿದ್ದಾಗ ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರನ್ನು ತಡೆದರು. ಮೋಟಾರ್ ಸೈಕಲ್ನಲ್ಲಿದ್ದ ವ್ಯಕ್ತಿಯೊಬ್ಬ ಕೆಳಗಿಳಿದು ಕೋಲ್ಹೆಯ ಕುತ್ತಿಗೆಗೆ ಹರಿತವಾದ ವಸ್ತುವಿನಿಂದ ಇರಿದಿದ್ದಾನೆ. ಉಮೇಶ್ ಕೊಲ್ಹೆ ತೀವ್ರವಾಗಿ ಗಾಯಗೊಂಡರು ನಂತರ ನಿಧನರಾದರು.
ಕೋಲ್ಹೆ ಎರಡು ಬ್ಯಾಗ್ಗಳು, ಅವರ ಮೊಬೈಲ್ ಫೋನ್ ಮತ್ತು ಹಲವಾರು ವೈಯಕ್ತಿಕ ವಸ್ತುಗಳನ್ನು ತನ್ನೊಂದಿಗೆ ಹೊತ್ತೊಯ್ಯುತ್ತಿದ್ದರು, ಅದನ್ನು ದಾಳಿಕೋರರು ಮುಟ್ಟಲಿಲ್ಲ. ಪೊಲೀಸರಿಗೆ ಇದು ಕಳ್ಳತನಕ್ಕಾಗಿ ನಡೆದ ಕೊಲೆಯಲ್ಲ ಎಂದು ಪ್ರಾಥಮಿಕವಾಗಿ ದೃಢವಾಗಿದೆ.
ಹತ್ಯೆಗೆ ಬಳಸಿದ್ದ ಚಾಕು ವಶ
ಅಪರಾಧ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಲಾಗಿದ್ದು, ಹತ್ಯೆ ಮಾಡಲು ಬಳಸಿರುವ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಘಟನೆ ಜೂನ್ 21 ರಂದು ನಡೆದಿದ್ದು, ದೃಶ್ಯದಲ್ಲಿರುವ ಇಬ್ಬರು ವ್ಯಕ್ತಿಗಳಾದ ಮುದಾಸಿರ್ ಮತ್ತು ಶಾರುಖ್ ಎನ್ನುವವರನ್ನು ಜೂನ್ 23 ರಂದು ಬಂಧಿಸಲಾಯಿತು.
ಬಿಜೆಪಿಯ ಮಾಜಿ ವಕ್ತಾರ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್ ಹಂಚಿಕೊಂಡಿದ್ದಕ್ಕಾಗಿ ಕೊಲ್ಹೆಯನ್ನು ಕೊಲ್ಲಲಾಗಿದೆ ಎಂದು ಪ್ರಾಥಮಿಕ ತನಿಖೆಗಳು ಸೂಚಿಸುತ್ತವೆ ಎಂದು ಸ್ಥಳೀಯ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೋಲ್ಹೆ ಅವರ ಕುಟುಂಬದವರು ಹೇಳುವಂತೆ, ಕೋಲ್ಹೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಮೂಲಕ ಮತ್ತು 'ಲವ್ ಜಿಹಾದ್' ಅನ್ನು ಖಂಡಿಸುವ ಮೂಲಕ ಹಲವಾರು ಸಾಮಾಜಿಕ ಮಾಧ್ಯಮ ಸಂದೇಶಗಳನ್ನು ಹಂಚಿಕೊಂಡಿರುವುದನ್ನು ನೋಡಿದ್ದೇವೆ ಎಂದು ಹೇಳಿದ್ದಾರೆ.