ತಿರುಪತಿ: ತಿರುಮಲ ದೇಗುಲಕ್ಕೆ ಹರಿದು ಬಂದ ಭಕ್ತಸಾಗರ
ಅಮರಾವತಿ ಮೇ 29: ಆಂಧ್ರ ಪ್ರದೇಶದ ತಿರುಪತಿ ದೇಗುಲಕ್ಕೆ ಶನಿವಾರ ಭಕ್ತಸಾಗರ ಹರಿದು ಬಂದಿದೆ.
ವಾರಾಂತ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಕ್ತರು ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಆಗಮಿಸಿದ್ದ ಕಾರಣ ದೇಗುಲದ ಸಾಲುಗಳಲ್ಲಿ ಭಕ್ತರ ನೂಕುನುಗ್ಗಲು ಕಂಡುಬಂದಿದೆ.
ಭಕ್ತರ ದಟ್ಟಣೆ ಹಿನ್ನೆಲೆಯಲ್ಲಿ ತಿರುಮಲಕ್ಕೆ ಭೇಟಿ ನೀಡುವ ಭಕ್ತರು ತಮ್ಮ ಯೋಜನೆಗಳನ್ನು ಸದ್ಯಕ್ಕೆ ಮುಂದೂಡುವಂತೆ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಟ್ರಸ್ಟ್ನ ಮುಖ್ಯ ಪಾಲಕರು ಮನವಿ ಮಾಡಿದ್ದಾರೆ.
ದರ್ಶನಕ್ಕೆ ಬೇಕು ಕನಿಷ್ಠ 48 ಗಂಟೆಗಳು.
ವೈಕುಂಠ ಏಕಾದಶಿ ಮತ್ತು ಗರುಡ ಸೇವಾ ದಿನಗಳಲ್ಲಿ ಯಾತ್ರಾರ್ಥಿಗಳ ದಟ್ಟಣೆಗಿಂತ ಈಗ ಭಕ್ತರ ದಟ್ಟಣೆ ಹೆಚ್ಚಿದೆ. ಇದರ ಪರಿಣಾಮವಾಗಿ ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಕನಿಷ್ಠ 48 ಗಂಟೆಗಳು ಸಾಲಿನಲ್ಲಿ ಕಾಯಬೇಕಾಗುತ್ತದೆ. ಸರತಿ ಸಾಲುಗಳು ಮತ್ತು ಕಂಪಾಟ್ಮೆಂಟ್ಗಳು ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ತುಂಬುತ್ತಿವೆ.

ಸದ್ಯಕ್ಕೆ ಗಂಟೆಗೆ 4,500 ಭಕ್ತರು ಮಾತ್ರ ವೆಂಕಟೇಶ್ವರನ ದರ್ಶನ ಪಡೆಯಲು ಸಾಧ್ಯ. ಇದನ್ನು ಪರಿಗಣಿಸಿದರೆ ಒಬ್ಬರು ದೇವರ ದರ್ಶನ ಪಡೆಯಲು ಎರಡು ದಿನ ಬೇಕಾಗುತ್ತದೆ ಎಂದು ಟಿಟಿಡಿ ಅಧಿಕಾರಿಗಳು ಮಾಹಿತಿ ನೀಡಿದರು.
ಭೇಟಿ ಮುಂದೂಡುವಂತೆ ಮನವಿ: ತಿರುಮಲಕ್ಕೆ ತೀರ್ಥಯಾತ್ರೆಯನ್ನು ಯೋಜಿಸುವ ಭಕ್ತರು ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿ ಹಾಗೂ ಯಾವುದೇ ರೀತಿಯ ಅನಾನುಕೂಲತೆಗಳನ್ನು ತಪ್ಪಿಸಲು ತಮ್ಮ ತಿರುಮಲ ಭೇಟಿಯ ಯೋಜನೆಯನ್ನು ಮುಂದೂಡಬೇಕು ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಭಕ್ತರಲ್ಲಿ ಮನವಿ ಮಾಡಿದ್ದಾರೆ.

ಶನಿವಾರ ಸಂಜೆ ಸರತಿ ಸಾಲುಗಳನ್ನು ಪರಿಶೀಲಿಸಿದ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ, ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
''ಎಲ್ಲಾ ಭಕ್ತರಿಗೆ ಕುಡಿಯುವ ನೀರು, ಅನ್ನ ಪ್ರಸಾದ ಮುಂತಾದ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಪೊಲೀಸ್ ಇಲಾಖೆಯ ಸಮನ್ವಯದೊಂದಿಗೆ ಟಿಟಿಡಿ ಭದ್ರತಾ ಪಡೆಯು ಭಕ್ತರ ಸುರಕ್ಷತೆಯನ್ನು ಖಾತರಿಪಡಿಸುತ್ತದೆ'' ಎಂದು ಅವರು ಹೇಳಿದರು.
ಮಕ್ಕಳಿಗೆ ಬೇಸಿಗೆ ರಜೆ ಹಿನ್ನೆಲೆ ದಟ್ಟಣೆ: ಮಕ್ಕಳಿಗೆ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ತಿರುಪತಿಗೆ ಆಗಮಿಸುತ್ತಿದ್ದಾರೆ. ಇದರಿಂದಾಗಿ ತಿರುಪತಿ ದೇವಾಲಯ, ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮುಂತಾದ ಕಡೆ ಭಕ್ತರೇ ಕಾಣಿಸುತ್ತಿದ್ದಾರೆ.

ವೈಕುಂಠ ದರ್ಶನ ಪಡೆಯಲು 2 ಕಿ.ಮೀ. ತನಕ ಭಕ್ತರು ಸಾಲುಗಟ್ಟಿ ನಿಂತಿರು ದೃಶ್ಯ ಸಾಮಾನ್ಯವಾಗಿದೆ. ಲಗೇಜ್ ಕೌಂಟರ್, ಲಡ್ಡು ಕೌಂಟರ್ಗಳಲ್ಲಿ ಭಕ್ತರು ಸಾಲುಗಟ್ಟಿ ನಿಂತಿದ್ದಾರೆ. ಪ್ರತಿಯೊಬ್ಬರಿಗೂ ವಸತಿ ವ್ಯವಸ್ಥೆ ಕಲ್ಪಿಸುವುದೇ ಟಿಟಿಡಿಗೆ ಸವಾಲಾಗಿದೆ.
ಕೊರೊನಾ ಪ್ರಕರಣಗಳ ಸಂಖ್ಯೆ ತಗ್ಗಿದ ನಂತರ ತಿರುಪತಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿಯೂ ವಾರಾಂತ್ಯದಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಕ್ತರು ಪ್ರವಾಸ ಮುಂದೂಡುವಂತೆ ಟಿಟಿಡಿ ಮನವಿ ಮಾಡಿದೆ.












Click it and Unblock the Notifications