ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ದೇವರು ಕೊಟ್ಟ ಅದೃಷ್ಟ ಸಂಖ್ಯೆ '23'!
ಅಮರಾವತಿ, ಮೇ 25: "ಆಂಧ್ರಪ್ರದೇಶದ ರಾಜಕೀಯದ ಮಟ್ಟಿಗೆ '23' ಎಂಬುದು ಎಂದಿಗೂ ಮರೆಯದ ಸಂಖ್ಯೆಯಾಗಿದೆ. ಅದು ದೇವರೇ ಕರುಣಿಸಿದ ಅದೃಷ್ಟ ಸಂಖ್ಯೆ. ಚಂದ್ರಬಾಬು ನಾಯ್ಡು ಅವರು ಮಾಡಿದ ತಪ್ಪು ಕೆಲಸಗಳಿಗೆ ದೇವರೇ ಅವರಿಗೆ ಶಿಕ್ಷೆ ಕೊಟ್ಟಿದ್ದಾನೆ" ಎಂದು ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈಎಸ್ ಜಗನ್ಮೋಹನ್ ರೆಡ್ಡಿ ಹೇಳಿದರು.
ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ತಮ್ಮ ಪಕ್ಷದ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಜಗನ್ ರೆಡ್ಡಿ, "ಅನೈತಿಕತೆ ಮತ್ತು ಅನ್ಯಾಯಕ್ಕೆ ದೇವರೇ ತಕ್ಕ ಉತ್ತರ ನೀಡಿದ್ದಾನೆ" ಎಂದರು.
2014 ರಲ್ಲಿ ವೈಎಸ್ ಆರ್ ಕಾಂಗ್ರೆಸ್ ನ 23 ಶಾಸಕರನ್ನು ಚಂದ್ರಬಾಬು ನಾಯ್ಡು ಕೊಂಡುಕೊಂಡರು. ಈಗ ಟಿಡಿಪಿ ಕೇವಲ 23 ಕ್ಷೇತ್ರಗಳಲ್ಲಿ ಗೆದ್ದಿದೆ, ಅದೂ ಮೇ.23 ರಂದು! ದೇವರು '23' ರಲ್ಲಿ ಅತ್ಯಂತ ಸುಂದರ ಸಾಲುಗಳನ್ನು ಬರೆದಿದ್ದಾನೆ ಎಂದು ಜಗನ್ ರೆಡ್ಡಿ ಹೇಳಿದರು.

ಆಂಧ್ರಪ್ರದೇಶದ ಒಟ್ಟು 175 ವಿಧಾನಸಭಾ ಕ್ಷೇತ್ರಗಳಲ್ಲಿ 152 ವೈಎಸ್ ಆರ್ ಕಾಂಗ್ರೆಸ್, 22 ಟಿಡಿಪಿ ಮತ್ತು 1 ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದರು. ಲೋಕಸಭೆ ಚುನಾವಣೆಯಲ್ಲಿ 25 ಕ್ಷೇತ್ರಗಳಲ್ಲಿ 22 ವೈಎಸ್ ಆರ್ ಕಾಂಗ್ರೆಸ್ ಮತ್ತು ಕೇವಲ 2 ಕ್ಷೇತ್ರಗಳಲ್ಲಿ ಟಿಡಿಪಿ ಜಯಗಳಿಸಿತ್ತು. ಇಲ್ಲಿ ಏಪ್ರಿಲ್ 11 ರಂದು ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಮೇ 23 ರಂದು ಫಲಿತಾಂಶ ಹೊರಬಿದ್ದಿತ್ತು.












Click it and Unblock the Notifications