ತಿರುಮಲ ತಿರುಪತಿ ಭಕ್ತರಿಗೆ ಆಘಾತಕಾರಿ ಸಂಗತಿ ತಿಳಿಸಿದ ಅಧಿಕಾರಿ
ಅಮರಾವತಿ, ಆಗಸ್ಟ್ 10: ಆಂಧ್ರಪ್ರದೇಶದ ತಿರುಪತಿಯಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ. ಸೋಂಕು ಹರಡುವುದನ್ನು ತಡೆಯಲು ತಿರುಪತಿಯಲ್ಲಿ ಆಗಸ್ಟ್ 14ರವರೆಗೂ ಲಾಕ್ ಡೌನ್ ವಿಸ್ತರಣೆ ಮಾಡಲಾಗಿತ್ತು. ಆದರೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ, ದರ್ಶನ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ. ಈ ನಡುವೆ ತಿರುಪತಿಯ ವೆಂಕಟೇಶ್ವರ ದೇವಾಲಯದ ಭಕ್ತರಿಗೆ ಆಘಾತಕಾರಿ ಸುದ್ದಿಯೊಂದು ಬಂದಿದೆ.
ಲಾಕ್ ಡೌನ್ ನಿಯಮಾವಳಿಗಳಲ್ಲಿ ಸಡಿಲಿಕೆಯಾದ ಬಳಿಕ ದೇವಸ್ಥಾನಕ್ಕೆ ಬರುವ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅದರ ಬೆನ್ನಲ್ಲೇ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) 743 ಉದ್ಯೋಗಿಗಳಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ. ಇದರಿಂದ ಲಾಕ್ ಡೌನ್ ಬಳಿಕ ದೇವಸ್ಥಾನಕ್ಕೆ ಹೆಚ್ಚು ಹೆಚ್ಚು ತೆರಳುತ್ತಿದ್ದ ಭಕ್ತರಲ್ಲಿ ಆತಂಕ ಹೆಚ್ಚಾಗಿದೆ.
ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡುವ ತಿರುಮತಿಯಲ್ಲಿ, ದೇವಸ್ಥಾನದ ಆಡಳಿತ ಇತರೆ ಕೆಲಸ ಕಾರ್ಯಗಳ ಚಟುವಟಿಕೆಗಾಗಿ ಸಾವಿರಾರು ಮಂದಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಿಗಳು ವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಮುಂದೆ ಓದಿ...

743 ಉದ್ಯೋಗಿಗಳಲ್ಲಿ ಕೊರೊನಾ
ಡಯಲ್ ಯುವರ್ ಇ.ಒ. ಕಾರ್ಯಕ್ರಮದ ಮೂಲ ದೇಶದ ವಿವಿಧ ಭಾಗಗಳ ಭಕ್ತರು ಹಾಗೂ ಯಾತ್ರಾರ್ಥಿಗಳ ಜತೆ ಸಂವಾದ ನಡೆಸಿರುವ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಗ್, ಜೂನ್ 11ರಿಂದ ಶ್ರೀವಾರಿ ದೇವಸ್ಥಾನವು ದರ್ಶನಕ್ಕೆ ಮುಕ್ತವಾಗಿದ್ದು, ಇದುವರೆಗೂ ಟಿಟಿಡಿಯ 743 ಉದ್ಯೋಗಿಗಳಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿದೆ ಎಂದು ತಿಳಿಸಿದ್ದಾರೆ.

402 ಮಂದಿ ಚೇತರಿಕೆ
ಅವರಲ್ಲಿ ಈಗಾಗಲೇ 402 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಕೆಲಸಕ್ಕೆ ಮರಳಿದ್ದಾರೆ. ಇನ್ನು 338 ಮಂದಿ ಶ್ರೀನಿವಾಸಮ್, ವಿಷ್ಣುವಾಸಮ್ ಮತ್ತು ಮಾಧವನ್ನಲ್ಲಿ ಕೋವಿಡ್ ಕೇಂದ್ರವನ್ನಾಗಿ ಪರಿವರ್ತಿಸಿರುವ ಟಿಟಿಡಿ ವಿಶ್ರಾಂತಿ ಗೃಹಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಟೀಕೆ
ಕೋವಿಡ್ನಿಂದ ಟಿಟಿಡಿಯ ಮೂವರು ಉದ್ಯೋಗಿಗಳು ಮಾತ್ರ ಮೃತಪಟ್ಟಿದ್ದಾರೆ. ನಮ್ಮ ಎಲ್ಲ ಉದ್ಯೋಗಿಗಳಿಗೂ ಕೋವಿಡ್ ಕೇಂದ್ರಗಳಲ್ಲಿ ಸಾಧ್ಯವಾದಷ್ಟು ಉತ್ತಮ ಸೌಲಭ್ಯ ಹಾಗೂ ಚಿಕಿತ್ಸೆ ಒದಗಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಟಿಟಿಡಿಯಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಒಳಗಾಗಿದೆ. ತಬ್ಲಿಘಿ ಬಾಂಬ್ ಎಂದು ಆರಂಭದಲ್ಲಿ ಹೇಳುತ್ತಿದ್ದವರು ಈಗ ಟಿಟಿಡಿ ಬಾಂಬ್ ಎಂದು ಏಕೆ ಹೇಳುತ್ತಿಲ್ಲ ಎಂದು ಟೀಕೆ ವ್ಯಕ್ತವಾಗಿದೆ.

ಈಗ ಆರೋಪ ಮಾಡುತ್ತಿದ್ದಾರೆ
ಆರಂಭದಲ್ಲಿ ಟಿಟಿಡಿ ತೆಗೆದುಕೊಂಡ ಕ್ರಮಗಳನ್ನು ಎಲ್ಲರೂ ಪ್ರಶಂಸಿಸಿದ್ದರು. ಆದರೆ ತಿರುಪತಿಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ನಮ್ಮೆಡೆಗೆ ಆರೋಪ ಹೊರಿಸಲು ಆರಂಭಿಸಿದ್ದಾರೆ. ಕೆಲವು ಸ್ವಹಿತಾಸಕ್ತಿಯ ವ್ಯಕ್ತಿಗಳು, ನಾವು ಹಣ ಮಾಡುವ ಸಲುವಾಗಿಯೇ ದರ್ಶನಕ್ಕೆ ಅವಕಾಶ ನೀಡಿದ್ದೇವೆ ಎಂದು ದೂರುತ್ತಿದ್ದಾರೆ. ನಮಗೆ ಯಾತ್ರಾರ್ಥಿಗಳಿಂದ ಬರುವ ಹಣಕ್ಕಿಂತಲೂ ದುಪ್ಪಟ್ಟು ಹಣವನ್ನು ಕರೊನಾ ವೈರಸ್ ಹರಡುವುದನ್ನು ತಡೆಯುವ ಮುನ್ನೆಚ್ಚರಿಕೆ ಕ್ರಮಗಳಿಗೆ ಬಳಸುತ್ತಿದ್ದೇವೆ ಎಂದು ಅನಿಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಭಕ್ತರ ಸಂಖ್ಯೆ ಹೆಚ್ಚಳ
ತಿರುಪತಿ ದೇವಸ್ಥಾನದಲ್ಲಿ ಮಾತ್ರವೇ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿಲ್ಲ, ಇಡೀ ರಾಜ್ಯದಲ್ಲಿ ಪ್ರಕರಣಗಳು ಜಾಸ್ತಿಯಾಗಿವೆ. ದೇಶದಾದ್ಯಂತ ಕೂಡ ಇದೇ ಸ್ಥಿತಿ ಇದೆ. ಪ್ರಕರಣಗಳು ಹೆಚ್ಚುತ್ತಿರುವುದರಿಂದ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ಆದರೆ ಕಳೆದ ಮೂರು ದಿನಗಳಿಂದ ಹೆಚ್ಚು ಭಕ್ತರು ಬರುತ್ತಿದ್ದಾರೆ. ಆಗಸ್ಟ್ 8ರಂದು 9,000 ಸೀಮಿತ ಟಿಕೆಟ್ ಕೋಟಾದಲ್ಲಿ ಸುಮಾರು 8,500 ಮಂದಿ ಭೇಟಿ ನೀಡಿದ್ದರು ಎಂದು ತಿಳಿಸಿದ್ದಾರೆ.












Click it and Unblock the Notifications