ಕರ್ನಾಟಕ ವಸತಿ ಭವನದ ಶಂಕುಸ್ಥಾಪನೆಗೆ ಯಡಿಯೂರಪ್ಪ ತಿರುಮಲಕ್ಕೆ
ಅಮರಾವತಿ, ಸೆ 22: ಹಾಲೀ ವಿಧಾನಮಂಡಲದ ಅಧಿವೇಶನದ ಮಧ್ಯೆ ಮುಖ್ಯಮಂತ್ರಿ ಯಡಿಯೂರಪ್ಪ ದೇಗುಲ ನಗರಿ ತಿರುಪತಿಗೆ ತೆರಳಲಿದ್ದಾರೆ. ಜೊತೆಗೆ, ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿಯವರನ್ನೂ ಭೇಟಿಯಾಗಲಿದ್ದಾರೆ.
ತಿಮ್ಮಪ್ಪನ ದರ್ಶನಕ್ಕೆ ಹೋಗುವ ಕರ್ನಾಟಕದ ಭಕ್ತರಿಗೆ ಅನುಕೂಲವಾಗಲು 'ಕರ್ನಾಟಕ ಯಾತ್ರಾರ್ಥಿಗಳ ಭವನ'ದ ಶಂಕುಸ್ಥಾಪನೆಯನ್ನು ಬಿಎಸ್ವೈ ನೆರವೇರಿಸಲಿದ್ದಾರೆ, ಇದೇ ಬರುವ ಸೆಪ್ಟಂಬರ್ 24ರಂದು ಈ ಕಾರ್ಯಕ್ರಮ ನಡೆಯಲಿದೆ.
ಅಧಿಕೃತ ಕಾರ್ಯಕ್ರಮದೊಂದಿಗೆ ಸಿಎಂ ಯಡಿಯೂರಪ್ಪ ಈ ಪ್ರವಾಸ ಬೆಳಸಲಿದ್ದು, ತಿಮ್ಮಪ್ಪನ ದರ್ಶನವನ್ನೂ ಪಡೆಯಲಿದ್ದಾರೆ. ಇದಾದ ನಂತರ, ಆಂಧ್ರ ಸಿಎಂ ಜೊತೆ ಭೋಜನ ಕೂಟದಲ್ಲೂ ಭಾಗಿಯಾಗಲಿದ್ದಾರೆ.

7.5ಎಕರೆ ಜಾಗದಲ್ಲಿ ಈ ವಸತಿ ಗೃಹ ನಿರ್ಮಾಣವಾಗುತ್ತಿದ್ದು, ಹಾಲಿ ಇರುವ ಕರ್ನಾಟಕ ಭವನದ ಜೊತೆಗೆ ವಸತಿ ನಿರ್ಮಾಣ ಮಾಡಲು ಕರ್ನಾಟಕ ಸರಕಾರ ಮುಂದಾಗಿದೆ. ಇದಕ್ಕಾಗಿ, ಇನ್ನೂರು ಕೋಟಿ ಅಂದಾಜಿಗೆ ಕರ್ನಾಟಕ ಸರಕಾರ ಅನುಮೋದನೆ ನೀಡಿತ್ತು.
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ, ವಸತಿ ಭವನ ನಿರ್ಮಿಸಲು 26 ಕೋಟಿ ಅನುಮೋದನೆಯನ್ನು ನೀಡಿದ್ದರು. ಇದನ್ನು ಪರಿಷ್ಕರಿಸಿ ಯಡಿಯೂರಪ್ಪ ಸರಕಾರ, ಇನ್ನೂರು ಕೋಟಿ ಅನುಮೋದನೆ ನೀಡಿದೆ.
ತಿರುಮಲದಲ್ಲಿ ಕರ್ನಾಟಕ ರಾಜ್ಯ ಛತ್ರ ಸೇರಿದ 7.05 ಎಕರೆ (322,545 ಚದರ ಅಡಿ) ಜಾಗದಲ್ಲಿ ಸಮಗ್ರ ಅಭಿವೃದ್ದಿ ಕಾರ್ಯಗಳನ್ನು ನೆರವೇರಿಸಲು ಸಚಿವ ಸಂಪುಟ ಸಮ್ಮತಿಸಿತ್ತು. ಒಟ್ಟು 1,005 ಯಾತ್ರಿಕರಿಗೆ ಅನುಕೂಲವಾಗುವಂತೆ ಈ ಅತಿಥಿ ಗೃಹ ನಿರ್ಮಾಣವಾಗುತ್ತಿದೆ.
ಇದರಲ್ಲಿ ಕಲ್ಯಾಣ ಮಂಟಪ, ಡಾರ್ಮೆಂಟ್ರಿ, ಸಿಬ್ಬಂದಿ ಕೊಠಡಿ ಮತ್ತು ಮೂಲಭೂತ ಸೌಕರ್ಯಗಳನ್ನು ಒಳಗೊಂಡಿದೆ. 140 ಯಾತ್ರಾರ್ಥಿಗಳ ವಾಸ್ತವ್ಯಕ್ಕಾಗಿ 12 ಡಾರ್ಮೆಂಟ್ರಿಗಳು, 605 ಯಾತ್ರಾರ್ಥಿಗಳ ವಾಸ್ತವ್ಯಕ್ಕಾಗಿ 305 ಕೊಠಡಿಗಳು, ಗಣ್ಯರಿಗೆ ವಿಶೇಷವಾಗಿ 24 ಸೂಟ್ ಕೊಠಡಿಗಳು ಮತ್ತು 4 ಡಬಲ್ ಸೂಟ್ ಕೊಠಡಿಗಳು, 1 ಕಲ್ಯಾಣ ಮಂಟಪ, ಕಾರು, ಬಸ್ಸುಗಳಿಗೆ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ.
"ಕಲ್ಯಾಣಿ ಜೀರ್ಣೋದ್ಧಾರ, ಹೊಸ ರಸ್ತೆಗಳ ನಿರ್ಮಾಣ, ಲ್ಯಾಂಡ್ ಸ್ಕೆಪಿಂಗ್, ಉದ್ಯಾನವನ ಅಭಿವೃದ್ದಿ ಸೇರಿದಂತೆ ಇತರೆ ಕಾಮಗಾರಿಗಳನ್ನು ಮಾಡಲಾಗುತ್ತದೆ" ಎಂದು ಕಂದಾಯ ಇಲಾಖೆಯ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ತಿಳಿಸಿದ್ದರು.












Click it and Unblock the Notifications