ಆಂಧ್ರ ಪ್ರದೇಶ; ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಕೊಟ್ಟ ಜಗನ್!
ಅಮರಾವತಿ, ಅಕ್ಟೋಬರ್ 19; ಕೋವಿಡ್ನಿಂದ ಸಾವನ್ನಪ್ಪಿದ ಸರ್ಕಾರಿ ನೌಕರರ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲು ಆಂಧ್ರ ಪ್ರದೇಶ ಸರ್ಕಾರ ನಿರ್ಧರಿಸಿದೆ.
ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿ ಕುರಿತು ಸೋಮವಾರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಪ್ರಗತಿ ಪರಿಶೀಲನೆ ನಡೆಸಿದರು. ನವೆಂಬರ್ 30ರೊಳಗೆ ಅನುಕಂಪದ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವೈದ್ಯಕೀಯ ಮತ್ತು ಆರೋಗ್ಯ, ಕಂದಾಯ ಮತ್ತು ಪೋಲಿಸ್ನಂತಹ ಮುಂಚೂಣಿ ಇಲಾಖೆಗಳಲ್ಲಿ ಹಲವಾರು ಉದ್ಯೋಗಿಗಳು ರಾಜ್ಯದಲ್ಲಿ ಕೋವಿಡ್ ಕರ್ತವ್ಯದ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ. ಇಂತಹ ಕೋವಿಡ್ ಕರ್ತವ್ಯದಲ್ಲಿ ಮೃತಪಟ್ಟ ಸರ್ಕಾರಿ ನೌಕರರ ಮಾಹಿತಿಯನ್ನು ಸಂಗ್ರಹಿಸಲು ಸೂಚಿದರು.
ಪರಿಶೀಲನಾ ಸಭೆಯಲ್ಲಿ ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಗುರುತಿಸಲಾಗಿರುವ ಹುದ್ದೆಗಳ ಸಂಖ್ಯೆಯನ್ನು ಆಧರಿಸಿ ಉದ್ಯೋಗ ಕ್ಯಾಲೆಂಡರ್ ತಯಾರಿಸಲಾಗಿದೆ. ಅಕ್ಟೋಬರ್ 20ರಂದು ನೇಮಕಾತಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ತಿಳಿಸಿದರು.
ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಧಿಸೂಚನೆಯಾದ ಹುದ್ದೆಗಳ ನೇಮಕಾತಿ ಆದೇಶ ಮತ್ತು ವಿತರಣೆ ಪ್ರಕ್ರಿಯೆ ಡಿಸೆಂಬರ್ 10ರೊಳಗೆ ಪೂರ್ಣಗೊಳ್ಳಲಿದೆ. ಇನ್ನೂ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ (ಡಿಎಂಇ) ಅಧೀನದಲ್ಲಿರುವ ಎಲ್ಲಾ ಅಧಿಸೂಚಿತ ಹುದ್ದೆಗಳ ಆಯ್ಕೆ ಪ್ರಕ್ರಿಯೆ ಡಿಸೆಂಬರ್ 5ರೊಳಗೆ ಪೂರ್ಣಗೊಳ್ಳಲಿದೆ.
ಜೊತೆಗೆ ಆಂಧ್ರ ಪ್ರದೇಶ ವೈದ್ಯ ವಿಧಾನ ಪರಿಷತ್ (ಎಪಿವಿವಿಪಿ) ಗೆ ಸಂಬಂಧಿಸಿದಂತೆ, ಅಕ್ಟೋಬರ್ 20 ರಿಂದ 23 ರೊಳಗೆ ಉದ್ಯೋಗ ಅಧಿಸೂಚನೆ ಹೊರಡಿಸಲಾಗುವುದು ಮತ್ತು ಡಿಸೆಂಬರ್ 25 ರೊಳಗೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ವಿವರಿಸಿದರು.
ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ರಾಷ್ಟ್ರೀಯ ಮಾನದಂಡಗಳ ಪ್ರಕಾರ ಸಾಕಷ್ಟು ಸಿಬ್ಬಂದಿ ಇರುವಂತೆ ನೋಡಿಕೊಳ್ಳುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು. ರಾಜ್ಯದಲ್ಲಿ 176 ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಗಳ ನಿರ್ಮಾಣವನ್ನು ಜನವರಿ 2022ರೊಳಗೆ ಕೈಗೆತ್ತಿಕೊಳ್ಳಬೇಕು ಮತ್ತು 9 ತಿಂಗಳಲ್ಲಿ ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಕೋವಿಡ್ನ ಮೂರನೇ ಅಲೆ ಎದುರಿಸಲು ರಾಜ್ಯ ಸಿದ್ಧವಾಗಿದೆ. ರಾಜ್ಯದಲ್ಲಿ ಇದುವರೆಗೆ 3,00,38,454 ಜನರಿಗೆ ಕೋವಿಡ್ ಲಸಿಕೆ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 1,33,80,259 ಜನರು ಒಂದು ಡೋಸ್ ಪಡೆದಿದ್ದರೆ, 1,66,58,195 ಜನರಿಗೆ ಎರಡು ಡೋಸ್ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದರು.
ರಾಜ್ಯದಲ್ಲಿ 4,66,96,649 ಲಸಿಕೆ ಡೋಸ್ಗಳನ್ನು ಬಳಸಲಾಗಿದೆ. ಸರ್ಕಾರಿ ಹಾಸ್ಪ್ಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು. ಜೊತೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಗುರುತಿಸಲಾಗಿರುವ ಹುದ್ದೆಗಳ ಸಂಖ್ಯೆಯನ್ನು ಆಧರಿಸಿ ಉದ್ಯೋಗ ಕ್ಯಾಲೆಂಡರ್ ತಯಾರಿಸಲಾಗಿದ್ದು, ಅಕ್ಟೋಬರ್ 20 ರಂದು ಅಧಿಸೂಚನೆ ಹೊರಡಿಸಲಾಗುವುದು. ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸೂಚಿಸಲಾದ ಹುದ್ದೆಗಳ ಆಯ್ಕೆ ಪ್ರಕ್ರಿಯೆ ಡಿಸೆಂಬರ್ 10 ರೊಳಗೆ ಪೂರ್ಣಗೊಳ್ಳಲಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಆಂದ್ರ ಸಿಎಂ ಜಗನ್ ಮೋಹನ್ ಅವರ ಈ ಮಹತ್ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕುಟುಂಬ ಸದಸ್ಯರನ್ನು ಕಳೆದುಕೊಂಡ ಅದೆಷ್ಟೋ ಜನರ ಪಾಲಿಗೆ ಆಂಧ್ರ ಸರ್ಕಾರ ನೀಡಿದ ಈ ಆದೇಶ ಜೀವನ ಕೊಟ್ಟಂತಾಗಿದೆ.
ಆಂಧ್ರಪ್ರದೇಶ ಸೋಮವಾರದವರೆಗೆ ಕೊರೊನಾ ವೈರಸ್ನಿಂದ 14,313 ಸಾವುಗಳನ್ನು ವರದಿ ಮಾಡಿದೆ. ಕಳೆದ ವರ್ಷ ಮಾರ್ಚ್ 12ರಂದು ಮೊದಲ ಪ್ರಕರಣ ವರದಿಯಾದ ನಂತರ ರಾಜ್ಯದಲ್ಲಿ ದೃಢಪಟ್ಟ ಒಟ್ಟು ಧನಾತ್ಮಕ ಪ್ರಕರಣಗಳ ಸಂಖ್ಯೆ 20,60,804 ರಷ್ಟಿದೆ.
ಚೇತರಿಕೆಯ ಪ್ರಮಾಣ ಶೇಕಡಾ 99ರಷ್ಟಿದ್ದರೆ, ರಾಜ್ಯದಲ್ಲಿ ಪ್ರಸ್ತುತ 5,709 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಇತ್ತೀಚಿಗೆ ದಿನನಿತ್ಯದ ಪ್ರಕರಣಗಳಲ್ಲಿ ಭಾರೀ ಇಳಿಕೆಯಾಗಿದೆ. ಸೋಮವಾರ ಬೆಳಗ್ಗೆ 332 ಪ್ರಕರಣಗಳು ವರದಿಯಾಗಿವೆ.