ನಾಯ್ಡು ಸರಕಾರದಿಂದ ನಿರುದ್ಯೋಗಿಗಳಿಗೆ ತಿಂಗಳಿಗೆ ಒಂದು ಸಾವಿರ ಭತ್ಯೆ
ಅಮರಾವತಿ, ಅಕ್ಟೋಬರ್ 2: ಆಂಧ್ರಪ್ರದೇಶ ಸರಕಾರ 'ಮುಖ್ಯಮಂತ್ರಿ ಯುವ ನೇಸ್ತಂ' (ನಿರುದ್ಯೋಗಿಗಳಿಗೆ ಮೀಸಲಾದ ಯೋಜನೆ) ಆರಂಭಕ್ಕೆ ಎಲ್ಲ ಸಿದ್ಧತೆ ಮುಗಿಸಿ, ನಿರುದ್ಯೋಗ ಭತ್ಯೆಗೆ ಮಂಗಳವಾರ ಚಾಲನೆ ನೀಡಲಾಗಿದೆ. ಈ ಸಂಬಂಧ ಸೋಮವಾರದಂದು ಪರಿಶೀಲನಾ ಸಭೆ ನಡೆದಿದೆ ಎಂದು ಆಂಧ್ರಪ್ರದೇಶದ ಮಾಹಿತಿ ತಂತ್ರಜ್ಞಾನ ಸಚಿವ ನಾರಾ ಲೋಕೇಶ್ ಮಾಹಿತಿ ನೀಡಿದ್ದಾರೆ.
ಈ ವರೆಗೆ ಆರು ಲಕ್ಷ ಮಂದಿ ಭತ್ಯೆಗಾಗಿ ಅರ್ಜಿ ಹಾಕಿದ್ದಾರೆ. ಎರಡು ಲಕ್ಷಕ್ಕೂ ಹೆಚ್ಚು ಮಂದಿಯ ಅರ್ಜಿ ಪರಿಶೀಲನೆ ಆಗಿದೆ. ಎರಡು ಸಾವಿರದ ಆರುನೂರು ಅರ್ಜಿಗಳು ಬಾಕಿ ಉಳಿದಿವೆ. ಆರಂಭದ ಮೊತ್ತ ಒಂದು ರುಪಾಯಿ ಮೊತ್ತವನ್ನು 1,87,000 ಫಲಾನುಭವಿಗಳ ಖಾತೆಗೆ ಪ್ರಾಯೋಗಿಕವಾಗಿ ಹಾಕಲಾಗಿದೆ.
700 ಹುದ್ದೆಗೆ 10.58 ಲಕ್ಷ ಅರ್ಜಿ; ಅರ್ಹತೆ ಏನು, ಅಭ್ಯರ್ಥಿಗಳು ಯಾರು!
ಅದು ಸರಿಯಾಗಿದೆ ಅಂತಾದರೆ ಬಾಕಿ ಮೊತ್ತ 999 ರುಪಾಯಿಯನ್ನು ಅಕ್ಟೋಬರ್ 3ನೇ ತಾರೀಕು ಬ್ಯಾಂಕ್ ಖಾತೆಗೆ ಹಾಕಲಾಗುವುದು. ಇನ್ನೂ 20 ಸಾವಿರ ಫಲಾನುಭವಿಗಳ ಖಾತೆಗೆ ಅಕ್ಟೋಬರ್ 4ನೇ ತಾರೀಕು ವರ್ಗಾವಣೆ ಆಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರಮಾಣ ಪತ್ರ ವಿತರಣೆಗೆ ಬುಧವಾರದಂದು 175 ಕ್ಷೇತ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. 400 ಫಲಾನುಭವಿಗಳ ಜತೆ ಅಮರಾವತಿಯಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಂವಾದ ನಡೆಸಲಿದ್ದಾರೆ. ಫಲಾನುಭವಿಗಳು ಪ್ರತಿ ತಿಂಗಳು ಬಯೋಮೆಟ್ರಿಕ್ಸ್ ಮಾಹಿತಿ ನೀಡಿಯೇ ಭತ್ಯೆ ಪಡೆಯಬೇಕು.
ಈ ಯೋಜನೆಯನ್ನು ನಾಲ್ಕು ಹಂತದಲ್ಲಿ ರೂಪಿಸಲಾಗಿದೆ. ನಿರುದ್ಯೋಗ ಭತ್ಯೆ, ಕೌಶಲ ಅಭಿವೃದ್ಧಿ ತರಬೇತಿ, ಅಪ್ರೆಂಟಿಸ್ ಷಿಪ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ. ಈ ಯೋಜನೆಗೆ ನೋಂದಣಿ ಮಾಡಿಕೊಳ್ಳುವುದು ನಿರಂತರ ಪ್ರಕ್ರಿಯೆ ಆಗಿರುತ್ತದೆ. ಪ್ರತಿ ತಿಂಗಳು 25ನೇ ತಾರೀಕಿನ ತನಕ ಅವಕಾಶ. ಮುಂದಿನ ತಿಂಗಳ ಭತ್ಯೆ ಪಡೆಯಲು ಅಲ್ಲಿಯ ತನಕ ಕಾಲಾವಕಾಶ ಇರುತ್ತದೆ ಎಂದು ತಿಳಿಸಲಾಗಿದೆ.
ಭಾರತೀಯರು ಹೆಚ್ಚು ಚಿಂತೆಗೀಡಾಗಿರುವುದು ಯಾವುದರ ಬಗ್ಗೆ ಗೊತ್ತೇ?
ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಲೋಕೇಶ್, ಇದು ದುರುದ್ದೇಶದಿಂದ ಕೂಡಿದ ಆರೋಪ ಎಂದಿದ್ದಾರೆ. ಯಾವುದೇ ಅನುಮಾನಗಳಿದ್ದರೆ 1100ಗೆ ಕರೆ ಮಾಡಿದರೆ ಮನೆ ಬಾಗಿಲಿಗೆ ಬಂದು, ಸಮಸ್ಯೆ ನಿವಾರಣೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ.