ಕರ್ನಾಟಕದಿಂದ ಆಂಧ್ರಕ್ಕೆ ಸಂಚರಿಸಲು ಹೊಸ ಮಾರ್ಗಸೂಚಿ
ಅಮರಾವತಿ, ಜುಲೈ 14 : ಆಂಧ್ರಪ್ರದೇಶ ಸರ್ಕಾರ ಕ್ವಾರಂಟೈನ್ ನಿಯಮಗಳಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಿರುವ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳನ್ನು 'ಅತಿ ಅಪಾಯಕಾರಿ' ರಾಜ್ಯಗಳ ಪಟ್ಟಿಗೆ ಸೇರಿಸಿದೆ.
ಕರ್ನಾಟಕ ಮತ್ತು ತೆಲಂಗಾಣದಿಂದ ಜನರು ಸುಲಭವಾಗಿ ಆಂಧ್ರಪ್ರದೇಶಕ್ಕೆ ಹೋಗುವಂತಿಲ್ಲ. ಬೇರೆ ರಾಜ್ಯಗಳಿಂದ ಆಗಮಿಸುವ ಜನರ ರೀತಿ ಕಡ್ಡಾಯವಾಗಿ ಸ್ಕ್ರೀನಿಂಗ್ಗೆ ಒಳಗಾಗಬೇಕು. ರಾಜ್ಯಕ್ಕೆ ಸಂಚಾರ ನಡೆಸಲು ಪಾಸು ಪಡೆಯುವುದು ಕಡ್ಡಾಯವಾಗಿದೆ.
ಆಂಧ್ರಪ್ರದೇಶದ ಕೋವಿಡ್ - 19 ನೋಡೆಲ್ ಅಧಿಕಾರಿ ಶ್ರೀಕಾಂತ್ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. "ರಾಜ್ಯಕ್ಕೆ ಕರ್ನಾಟಕ, ತೆಲಂಗಾಣದಿಂದ ಆಗಮಿಸುವವರು ಕಡ್ಡಾಯವಾಗಿ ಸ್ಪಂದನಾ ವೆಬ್ ಸೈಟ್ ಮೂಲಕ ಪಾಸು ಪಡೆಯಬೇಕು. ರಾಜ್ಯದ ಗಡಿಯಲ್ಲಿ ಪಾಸುಗಳನ್ನು ತೋರಿಸಬೇಕು" ಎಂದು ಹೇಳಿದ್ದಾರೆ.

ಕರ್ನಾಟಕ, ತೆಲಂಗಾಣದಿಂದ ಆಗಮಿಸುವ ಜನರನ್ನು ಗಡಿಯಲ್ಲಿ ಸ್ಕ್ರೀನಿಂಗ್ಗೆ ಒಳಪಡಿಸಲಾಗುತ್ತದೆ. ಯಾರಿಗಾದರೂ ಕೋವಿಡ್ - 19 ಸೋಂಕಿನ ಲಕ್ಷಣಗಳು ಕಂಡು ಬಂದರೆ ಅವರನ್ನು ಕ್ವಾರಂಟೈನ್ಗೆ ಹಾಕಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಆಂಧ್ರಪ್ರದೇಶ ಸರ್ಕಾರ ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ತೆಲಂಗಾಣ ರಾಜ್ಯಗಳನ್ನು ಅತಿ ಅಪಾಯಕಾರಿ ಪಟ್ಟಿಗೆ ಸೇರಿಸಿದೆ. ಈ ಎಲ್ಲಾ ರಾಜ್ಯಗಳಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಿವೆ.
ಭಾನುವಾರ ಮತ್ತು ಸೋಮವಾರ ತೆಲಂಗಾಣದಿಂದ ಆಂಧ್ರಪ್ರದೇಶಕ್ಕೆ ಆಗಮಿಸಿದ 655 ಜನರು ಮತ್ತು ಕರ್ನಾಟಕದಿಂದ ಆಗಮಿಸಿದ 83 ಜನರಿಗೆ ಕೊರೊನಾ ವೈರಸ್ ಸೋಂಕಿನ ಲಕ್ಷಣಗಳು ಕಂಡುಬಂದಿದ್ದು ಅವರನ್ನು ಕ್ವಾರಂಟೈನ್ಗೆ ಹಾಕಲಾಗಿದೆ.
ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿಗಳ ಪ್ರಕಾರ ವಿದೇಶದಿಂದ ಆಗಮಿಸುವವರಿಗೆ 7 ದಿನದ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. 5 ಮತ್ತು 7ನೇ ದಿನ ಅವರಿಗೆ ಪರೀಕ್ಷೆಯನ್ನು ನಡೆಸಿ ಯಾವುದೇ ಲಕ್ಷಣಗಳು ಇಲ್ಲದಿದ್ದಲ್ಲಿ ಮನೆಗೆ ಕಳಿಸಲಾಗುತ್ತದೆ.












Click it and Unblock the Notifications