ತಿರುಪತಿ ತಿಮ್ಮಪ್ಪನ ಹುಂಡಿ : ಸಾರ್ವಕಾಲಿಕ ದಾಖಲೆ
ಅಮರಾವತಿ, ಸೆ 12: ವಿಶ್ವದ ಸಿರಿವಂತ ದೇವಾಲಯಗಳಲ್ಲಿ ಒಂದಾದ ತಿರುಮಲ ತಿರುಪತಿ ದೇವಸ್ಥಾನ, ಹುಂಡಿ ಗಳಿಕೆಯಲ್ಲಿ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ಶ್ರಾವಣ ಮಾಸದಲ್ಲಿ ಶ್ರೀವಾರಿ ಹುಂಡಿಯಲ್ಲಿ ಕೋಟಿ ಕೋಟಿ ಹಣ ಸಂಗ್ರಹವಾಗಿದೆ.
ಕೋವಿಡ್ ನಿರ್ಬಂಧ ತೆರವು, ಸಾಲುಸಾಲು ರಜೆಗಳು, ಶ್ರಾವಣ ಮಾಸದಿಂದಾಗಿ ಟಿಟಿಡಿಗೆ ದಾಖಲೆಯ ದೇಣಿಗೆ ಮೊತ್ತ ಹರಿದು ಬಂದಿದೆ. ಕಳೆದ ಮೇ ತಿಂಗಳಿನಿಂದ ಪ್ರತೀ ತಿಂಗಳು ನೂರು ಕೋಟಿಗೂ ಹೆಚ್ಚು ಹಣ ಹುಂಡಿಯ ಮೂಲಕ ಬಂದಿದೆ.
ಎರಡು ವರ್ಷಗಳಿಂದ ಕೋವಿಡ್ ನಿರ್ಬಂಧದಿಂದಾಗಿ ಸಿಬ್ಬಂದಿಗಳಿಗೆ ವೇತನ ನೀಡಲೂ ಟಿಟಿಡಿ ಪರದಾಡುತ್ತಿತ್ತು, ದೇವಾಲಯದ ಕೆಲವೊಂದು ಆಸ್ತಿಗಳನ್ನು ಮಾರಾಟ ಮಾಡಿ ಸಂಬಳ ನೀಡಲಾಗಿತ್ತು.

"ಶ್ರಾವಣ ಮಾಸದ ಹಿನ್ನಲೆಯಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಸುಮಾರು 22 ಲಕ್ಷಕ್ಕೂ ಹೆಚ್ಚು ಭಕ್ತರು ಶ್ರೀವಾರಿಯ ದರ್ಶನವನ್ನು ಪಡೆದಿದ್ದಾರೆ. ತಲೆಮುಡಿ ಮತ್ತು ಲಡ್ಡು ಪ್ರಸಾದದಿಂದಲೂ ಅಧಿಕ ದೇಣಿಗೆ ಸಂಗ್ರಹವಾಗಿದೆ"ಎಂದು ಟಿಟಿಡಿ ಅಧಿಕಾರಿ ಧರ್ಮಾರೆಡ್ಡಿ ಹೇಳಿದ್ದಾರೆ.
ಕಳೆದ ನಾಲ್ಕು ತಿಂಗಳಲ್ಲಿ ತಿರುಪತಿ ದೇವಾಲಯದಲ್ಲಿ ಹುಂಡಿಯ ಮೂಲಕ ಸಂಗ್ರಹವಾದ ದೇಣಿಗೆ ಮೊತ್ತ ಹೀಗಿದೆ:
ಮೇ : 130.29 ಕೋಟಿ ರೂಪಾಯಿ
ಜೂನ್ : 123.76 ಕೋಟಿ ರೂಪಾಯಿ
ಜುಲೈ : 139.46 ಕೋಟಿ ರೂಪಾಯಿ
ಆಗಸ್ಟ್ : 140.34 ಕೋಟಿ ರೂಪಾಯಿ
ದಸರಾ ವೇಳೆ ಕ್ಷೇತ್ರದಲ್ಲಿ ಬ್ರಹ್ಮೋತ್ಸವ ಇರುವುದರಿಂದ ವಿಐಪಿ ದರ್ಶನ ಮತ್ತು ವಿಶೇಷ ದರ್ಶನದ ಟಿಕೆಟ್ ಅನ್ನು ರದ್ದು ಮಾಡಲು ಟಿಟಿಡಿ ನಿರ್ಧರಿಸಿದೆ. ಭಕ್ತರಿಗೆ ಅನುಕೂಲವಾಗಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸೆಪ್ಟಂಬರ್ 27ರಿಂದ ಒಂಬತ್ತು ದಿನ ಬ್ರಹ್ಮೋತ್ಸವ ನಡೆಯಲಿದೆ.












Click it and Unblock the Notifications