"ವಂದೇ ಮಾತರಂ ಗೊತ್ತಿಲ್ವಾ ಹಾಗಾದರೆ ಭಾರತ ಬಿಟ್ಟು ತೊಲಗಿ"
ಗಾಂಧಿನಗರ, ಜನವರಿ.20: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ವಿರುದ್ಧ ಮಾತನಾಡುವ ಜನರ ವಿರುದ್ಧ ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ನೀಡಿರುವ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
ಭಾರತದಲ್ಲಿ ಇದ್ದುಕೊಂಡು ನಿಮಗೆ ವಂದೇ ಮಾತರಂ ಬಗ್ಗೆ ನಂಬಿಕೆಯಿಲ್ಲವೇ, ಹಾಗಿದ್ದರೆ ಅಂಥವರಿಗೆ ದೇಶದಲ್ಲಿ ಬದುಕುವ ಹಕ್ಕು ಇಲ್ಲ ಎನ್ನುವ ಮೂಲಕ ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಬಾಂಗ್ಲಾ ಪ್ರಧಾನಿ ಹೀಗೆ ಹೇಳುವುದೇ?
ಕೇಂದ್ರ ಸರ್ಕಾರವು ಸಿಎಎ ಹಾಗೂ ಎನ್ಆರ್ ಸಿ ಮೂಲಕ ನೊಂದ ಜನರಿಗೆ ಆಶ್ರಯ ನೀಡಲು ಮುಂದಾಗಿದೆ. ಆದರೆ ವಿರೋಧ ಪಕ್ಷಗಳು ಇದನ್ನು ತಪ್ಪಾಗಿ ಬಿಂಬಿಸುತ್ತಿವೆ ಎಂದು ಆರೋಪಿಸಿದ್ದಾರೆ.
"ವಂದೇ ಮಾತರಂ ಗೊತ್ತಿಲ್ಲದವರಿಗೆ ಇಲ್ಲಿರುವ ಹಕ್ಕಿಲ್ಲ"
ಭಾರತದಲ್ಲಿ ಜೀವಸಬೇಕಾದರೆ ದೇಶದಲ್ಲಿನ ಸ್ವಾತಂತ್ರ್ಯ, ಏಕತೆ, ಸಾರ್ವಭೌಮತೆ ಜೊತೆಗೆ ವಂದೇ ಮಾತರಂ ಮೇಲೆ ನಂಬಿಕೆ ಹೊಂದಿರಬೇಕು. ವಂದೇ ಮಾತರಂ ತಿಳಿಯದೇ ಇದ್ದಲ್ಲಿ ಅಂಥವರು ಭಾರತಕದಲ್ಲಿ ಉಳಿಯಲು ಯೋಗ್ಯರಲ್ಲ. ಇಲ್ಲಿ ಜೀವಿಸುವ ಹಕ್ಕು ಅವರಿಗಿಲ್ಲ ಎಂದು ಪ್ರತಾಪ್ ಚಂದ್ರ ಸಾರಂಗಿ ಹೇಳಿದ್ದಾರೆ.
ಸಿಎಎ ಬಗ್ಗೆ ಕಾಂಗ್ರೆಸ್ ನಿಂದ ತಪ್ಪು ಸಂದೇಶ ರವಾನೆ
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ಜಾರಿಗೊಳಿಸಿರುವ ಹಿಂದಿನ ಉದ್ದೇಶ ಒಳ್ಳೆಯದ್ದೇ ಆಗಿದೆ. ಕೇಂದ್ರ ಸರ್ಕಾರದ ಉದ್ದೇಶವನ್ನು ಕಾಂಗ್ರೆಸ್ ನಾಯಕರು ತಪ್ಪಾಗಿ ಬಿಂಬಿಸುತ್ತಿದ್ದಾರೆ. ಪ್ರಜೆಗಳಿಗೆ ತಪ್ಪು ಸಂದೇಶವನ್ನು ರವಾನಿಸುತ್ತಿದ್ದಾರೆ ಎಂದು ಸಾರಂಗಿ ಆರೋಪಿಸಿದ್ದಾರೆ.
ಕಾಂಗ್ರೆಸ್ ತಪ್ಪಿಗೆ ಕೇಂದ್ರ ಸರ್ಕಾರದಿಂದ ಪ್ರಾಯಶ್ಚಿತ
70 ವರ್ಷಗಳ ಹಿಂದೆ ದೇಶ ವಿಭಜನೆ ಆದಾಗಲೇ ಪೌರತ್ವ ತಿದ್ದುಪಡಿ ಕಾಯ್ದೆಯಂತಾ ಕಾನೂನು ಜಾರಿಗೆ ಬರಬೇಕಿತ್ತು. ಆದರೆ, ಅಂದಿನ ಕಾಂಗ್ರೆಸ್ ಸರ್ಕಾರ ಇಂಥ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ಕಾಂಗ್ರೆಸ್ ನವರು ಅಂದು ಮಾಡಿದ ತಪ್ಪಿಗೆ ಈಗ ಪ್ರಾಯಶ್ಚಿತ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸಿಎಎಯನ್ನು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ ಕೇಂದ್ರ ಸಚಿವರು
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿದ್ದಕ್ಕಾಗಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಹೇಳಿದರು. ಸಿಎಎ ಜಾರಿಯಾಗಿದ್ದರಿಂದ ಪಾಕಿಸ್ತಾನ್, ಅಫ್ಘಾನಿಸ್ತಾನ್, ಬಾಂಗ್ಲಾದೇಶದಿಂದ 2014ರ ಡಿಸೆಂಬರ್.31ರೊಳಗೆ ಭಾರತಕ್ಕೆ ವಲಸೆ ಬಂದಿರುವ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಧರ್ಮದ ಜನರಿಗೆ ದೇಶದ ಪೌರತ್ವ ಸಿಗುತ್ತದೆ ಎಂದರು.