ಗುಜರಾತ್ ಸಿಎಂ ವಿಜಯ್ ರೂಪಾನಿ ದಿಢೀರ್ ರಾಜೀನಾಮೆಗೆ ಕಾರಣ ಏನಿರಬಹುದು?
ಅಹಮದಾಬಾದ್, ಸೆಪ್ಟೆಂಬರ್ 11: ದಿಢೀರ್ ಬೆಳವಣಿಗೆಯಲ್ಲಿ, ಗುಜರಾತ್ ಸಿಎಂ ವಿಜಯ್ ರೂಪಾನಿ ಶನಿವಾರ ರಾಜೀನಾಮೆ ನೀಡಿರುವುದು ರಾಜ್ಯ ರಾಜಕೀಯದಲ್ಲಿ ಅಚ್ಚರಿಗೆ ಕಾರಣವಾಗಿದೆ.
ಶನಿವಾರ ಸಂಜೆ ವೇಳೆಗೆ ವಿಜಯ್ ರೂಪಾನಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜ್ಯಪಾಲ ಆಚಾರ್ಯ ದೇವವ್ರತ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಆದರೆ ರಾಜೀನಾಮೆ ನೀಡುತ್ತಿರುವ ಕಾರಣದ ಕುರಿತು ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ.
ವಿಜಯ್ ರೂಪಾನಿ ಐದು ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಇಂದು ಏಕಾಏಕಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಚರ್ಚೆಗೆ ಎಡೆಮಾಡಿಕೊಟ್ಟಿದೆ.
'5 ವರ್ಷಗಳ ಕಾಲ ಜನರ ಸೇವೆ ಮಾಡಲು ಬಿಜೆಪಿ ನನಗೆ ಅವಕಾಶ ನೀಡಿದೆ. ಪಕ್ಷಕ್ಕೆ ನಾನು ಬದ್ಧನಾಗಿ ಕೆಲಸ ನಿರ್ವಹಿಸುತ್ತೇನೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೇನೆ' ಎಂದಷ್ಟೇ ಹೇಳಿದ್ದಾರೆ. ಆದರೆ ಗುಜರಾತ್ನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ದಿಢೀರನೆ ವಿಜಯ್ ರೂಪಾನಿ ರಾಜೀನಾಮೆ ನೀಡಿರುವುದು ಅಚ್ಚರಿ ಬೆಳವಣಿಗೆಯೆನಿಸಿದೆ. ಅವರ ರಾಜೀನಾಮೆ ಹಿಂದಿನ ಕಾರಣಗಳ ಕುರಿತು ವಿಶ್ಲೇಷಣೆ ಸಾಗಿದೆ. ಮುಂದೆ ಓದಿ...

ಚುನಾವಣಾ ಪೂರ್ವ ತಯಾರಿಗಾಗಿ ರೂಪಾನಿಯಿಂದ ರಾಜೀನಾಮೆ?
ಶುಕ್ರವಾರ ರಾತ್ರಿಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಜರಾತ್ನ ಗಾಂಧಿನಗರಕ್ಕೆ ಭೇಟಿ ನೀಡಿದ್ದು, ಅವರ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆದಿದೆ. ಅಲ್ಲೇ ಮುಖ್ಯಮಂತ್ರಿ ರಾಜೀನಾಮೆ ಕುರಿತು ಚರ್ಚೆ ನಡೆದಿರುವ ಮಾತುಗಳು ಕೇಳಿಬಂದಿವೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಭಾನುವಾರದಂದು (ಸೆಪ್ಟೆಂಬರ್ 12) ನಡೆಯುವ ಸಾಧ್ಯತೆಯಿದೆ. ಚುನಾವಣಾ ಪೂರ್ವ ತಯಾರಿಗಾಗಿ ರೂಪಾನಿ ಅವರಿಂದ ರಾಜೀನಾಮೆ ಪಡೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಈ ವರ್ಷ ಬಿಜೆಪಿ ಕೈಬಿಡುತ್ತಿರುವ ನಾಲ್ಕನೇ ಸಿಎಂ ರೂಪಾನಿ
ಉತ್ತರಾಖಂಡದಲ್ಲಿ ಇಬ್ಬರು ಸಿಎಂ ಹಾಗೂ ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪ ನಂತರ ಈ ವರ್ಷ ಬಿಜೆಪಿ ಕೈಬಿಡುತ್ತಿರುವ ನಾಲ್ಕನೇ ಮಂತ್ರಿ ವಿಜಯ್ ರೂಪಾನಿ ಆಗಿದ್ದಾರೆ. ಇದೀಗ ಮುಖ್ಯಮಂತ್ರಿಗಳ ರೇಸ್ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್. ಪಾಟೀಲ್, ಡಿಸಿಎಂ ನಿತಿನ್ ಪಾಟೀಲ್ ಹಾಗೂ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಕೇಳಿಬರುತ್ತಿದೆ.
ಕೇಂದ್ರ ಮೀನುಗಾರಿಕಾ, ಪಶು ಸಂಗೋಪನಾ ಸಚಿವ ಪುರುಷೋತ್ತಮ್ ರೂಪಾಲ ಅವರ ಹೆಸರು ಬಿಜೆಪಿ ಹಾಗೂ ಆರ್ಎಸ್ಎಸ್ ವಲಯದಲ್ಲಿ ಹರಿದಾಡುತ್ತಿವೆ.

ರೂಪಾನಿ ನಾಯಕತ್ವದಲ್ಲಿ ಚುನಾವಣೆ ಎದುರಿಸುವ ವಿಶ್ವಾಸವಿಲ್ಲ...
ರೂಪಾನಿ ಅವರಿಗೆ ಕಳೆದ ತಿಂಗಳಷ್ಟೇ 65 ವರ್ಷ ತುಂಬಿತು. ರೂಪಾನಿ ನಾಯಕತ್ವದಲ್ಲಿ ಗುಜರಾತ್ನಲ್ಲಿ ಮುಂದಿನ ಚುನಾವಣೆ ಎದುರಿಸುವ ವಿಶ್ವಾಸವಿಲ್ಲದ ಕಾರಣ ಬಿಜೆಪಿ ಅವರನ್ನು ಕೈಬಿಡುವ ನಿರ್ಧಾರ ತೆಗೆದುಕೊಂಡಿದೆ ಎಂದು ಮೂಲಗಳಿಂದ ಕೇಳಿಬಂದಿದೆ.
ಕಳೆದ ಚುನಾವಣೆಗಳಲ್ಲಿಯೂ, ಗುಜರಾತ್ನಲ್ಲಿ ಕಾಂಗ್ರೆಸ್ ಉತ್ಸಾಹದಿಂದ ಸ್ಪರ್ಧೆ ಎದುರಿಸಿತ್ತು ಹಾಗೂ ಬಿಜೆಪಿಯನ್ನು ಸಮೀಪ ಅಂತರದಿಂದ ಸೋಲಿಸಿತ್ತು. ಅಂತಿಮವಾಗಿ ರಾಜ್ಯದಲ್ಲಿ ಪ್ರಧಾನಿ ಮೋದಿ ಪ್ರಚಾರ ಬಿಜೆಪಿ ಉಳಿವಿಗೆ ಕಾರಣವಾಗಿತ್ತು.

ಚುನಾವಣೆಗೆ 15 ತಿಂಗಳ ಮುನ್ನವೇ ಸಿಎಂ ಬದಲಾವಣೆ
ಎರಡು ದಶಕಗಳಿಂದ ಬಿಜೆಪಿ ಗುಜರಾತ್ನಲ್ಲಿ ಅಧಿಕಾರದಲ್ಲಿ ಕುಳಿತಿದೆ. ಆದರೆ ಕಳೆದ ಐದು ವರ್ಷಗಳಿಂದ ಆಡಳಿತ ನಡೆಸುತ್ತಿರುವ ರೂಪಾನಿ ಕ್ರಿಯಾತ್ಮಕವಾಗಿಲ್ಲದ ಕಾರಣ, ಚುನಾವಣೆಗೆ ಹದಿನೈದು ತಿಂಗಳ ಮುನ್ನವೇ ಬಿಜೆಪಿ ಈ ಬದಲಾವಣೆ ಮಾಡಿದೆ. ಚುನಾವಣೆ ಎದುರಿಸಲು ಹೊಸ ನಾಯಕನ ಆಯ್ಕೆ ಮಾಡುವ ಯೋಜನೆ ರೂಪಿಸಿದೆ ಎಂದು ತಿಳಿದುಬಂದಿದೆ. ಮುಂದಿನ ವರ್ಷ ಟಿಕೆಟ್ ಹಂಚಿಕೆಯಲ್ಲಿಯೂ ಕೆಲವು ಬದಲಾವಣೆಗಳು ನಿರೀಕ್ಷಿತವಾಗಿದ್ದು, ಹಲವು ಹಾಲಿ ಶಾಸಕರನ್ನು ಕೈಬಿಡಬಹುದು ಎಂದು ಮೂಲಗಳು ತಿಳಿಸಿವೆ.

ಕೆಲವು ತಿಂಗಳಿನಿಂದ ರಾಜ್ಯದಲ್ಲಿ ಪಕ್ಷದ ಪರಿಸ್ಥಿತಿ ಪರಿಶೀಲನೆ
ಬಿಜೆಪಿ ಹಿರಿಯ ನಾಯಕ ಹಾಗೂ ಗುಜರಾತ್ ಉಸ್ತುವಾರಿ ಭೂಪೇಂದರ್ ಯಾದವ್, ಪಕ್ಷದ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ಪಕ್ಷದ ಪರಿಸ್ಥಿತಿ ಪರಿಶೀಲನೆ ನಡೆಸಿದ್ದು, ರೂಪಾನಿ ರಾಜ್ಯದಲ್ಲಿ ಬೃಹತ್ ಮತದಾರರನ್ನು ಹೊಂದಿರುವ ನಾಯಕರಾಗಿ ಗುರುತಿಸಿಕೊಂಡಿಲ್ಲ ಹಾಗೂ ಪಾಟೀದಾರ್ ಸಮುದಾಯದ ಮತ ಮುಂದೆ ಬಿಜೆಪಿಗೆ ದೊಡ್ಡ ಅಂಶವಾಗಿರುವ ಕಾರಣ ಈ ಬದಲಾವಣೆ ಮಾಡಿರುವುದಾಗಿ ತಿಳಿದುಬಂದಿದೆ.

2017ರ ಚುನಾವಣೆಗೆ ಮುನ್ನವೂ ಇದೇ ರೀತಿ ಆಗಿತ್ತು
ರಾಜ್ಯದಲ್ಲಿ ರೂಪಾನಿ ನೇತೃತ್ವದ ಬಿಜೆಪಿ ಸರ್ಕಾರ ಕೊರೊನಾ ಪರಿಸ್ಥಿತಿ ನಿರ್ವಹಣೆ ಸಂಬಂಧ ಕೆಲವು ಆಕ್ಷೇಪಗಳನ್ನು ಎದುರಿಸಿತ್ತು ಎನ್ನಲಾಗಿದೆ. ಜೊತೆಗೆ ರಾಜ್ಯದಲ್ಲಿ ಪಕ್ಷವನ್ನು ಪುನಶ್ಚೇತನಗೊಳಿಸಲು ಸಿ.ಆರ್.ಪಾಟೀಲ್ ಅವರನ್ನು ಕಳೆದ ವರ್ಷ ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಲಾಯಿತು.
ಸದ್ಯ ಪ್ರಾಸಂಗಿಕವಾಗಿ ಹೇಳುವುದಾದರೆ, ರಾಜ್ಯದಲ್ಲಿ 2017ರ ವಿಧಾನಸಭಾ ಚುನಾವಣೆಗೆ ಮುನ್ನ 15 ತಿಂಗಳು ಮುಂಚಿತವಾಗಿ, ಇದೇ ರೀತಿ ಆನಂದಿಬೆನ್ ಪಟೇಲ್ ಅವರ ಬದಲಿಗೆ ರೂಪಾನಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲಾಗಿತ್ತು.
2016ರಲ್ಲಿ ಸಿಎಂ ಆಗಿದ್ದ ವಿಜಯ್ ರೂಪಾನಿ
2016ರ ಆಗಸ್ಟ್ 7 ರಂದು ಗುಜರಾತ್ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಪ್ರಮಾಣವಚನ ಸ್ವೀಕರಿಸಿದ್ದರು. ಐದು ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಆನಂದಿ ಬೆನ್ ಪಟೇಲ್ ವಿರುದ್ಧ ಪಕ್ಷದಲ್ಲಿ ಭಾರಿ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಅಮಿತ್ ಶಾ ಆಪ್ತರೆನಿಸಿಕೊಂಡಿದ್ದ ವಿಜಯ್ ರೂಪಾನಿ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಲಾಗಿತ್ತು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications