ಪಾಟೀದಾರ್ ವಿರೋಧ, ಪೊಲೀಸ್ ಭದ್ರತೆಯಲ್ಲಿ ದಲಿತನ ಮದುವೆ
ಅಹ್ಮದಾಬಾದ್, ಮೇ 13: ಗುಜರಾತಿನ ಅರಾವಳಿ ಜಿಲ್ಲೆಯ ಖಂಬಿಯಾಸರ್ ಎಂಬ ಹಳ್ಳಿಯಲ್ಲಿ ದಲಿತ ಮದುಮಗನನ್ನು ತಡೆದು, ಆತನ ಮದುವೆಗೆ ಅಡ್ಡಿ ಪಡಿಸಿದ ಘಟನೆ ನಡೆದಿದೆ.
ಭಾನುವಾರ ಮದುವೆ ಸಂಭ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಪಾಟೀದಾರ್ ಸಮುದಾಯದ ಜನರು ಮದುವೆಗೆ ತಡೆಯೊಡ್ಡಿದ್ದರು. ಮದುವೆಯ ದಿಬ್ಬಣ ಮುಂದೆ ಹೋಗುವುದಕ್ಕೇ ಬಿಡದಂತೆ, ರಸ್ತೆಯುದ್ದಕ್ಕೂ ಭಜನೆ ಹೇಳುತ್ತ, ಯಜ್ಞ-ಯಾಗ ಮಾಡುತ್ತ ಮದುವೆಗೆ ತಡೆಯೊಡ್ಡಿದ್ದರು ಎಂದು ಅಲ್ಲಿದ್ದ ದಲಿತರು ಆರೋಪಿಸಿದ್ದಾರೆ.
ಮೊದಲು ಮಾತಿನ ಚಕಮಕಿಯಿಂದ ಆರಂಬವಾದ ಗಲಾಟೆ, ನಂತರ ಕಲ್ಲು ಎಸೆತಕ್ಕೂ ತಿರುಗಿದ ಪರಿಣಾಮ ಪೊಲೀಸರು ಬಂದು ಪರಿಸ್ಥಿತಿಯನ್ನು ತಣ್ಣಾಗಿಸುವ ಸನ್ನಿವೇಶ ಏರ್ಪಾಡಾಗಿತ್ತು. ಕಲ್ಲೆಸತದಿಂದ ಹಲವರಿಗೆ ಗಾಯವಾಗಿದ್ದು, ಮದುವೆ ಮನೆ ರಣರಂಗವಾಗಿತ್ತು.

ಪೊಲೀಸ್ ಭದ್ರತೆಯ ನಡುವೆ ಮದುವೆ ಆಚರಣೆ ನಡೆಯುತ್ತಿದ್ದರೂ ಆಗಾಗ ಗಲಾಟೆ ಕಂಡುಬಂತು. ಇಂದು ಮದುವೆ ಕಾರ್ಯಕ್ರಮ ಮುಂದುವರಿಯಲಿರುವುದರಿಂದ, ಪೊಲೀಸ್ ಭದ್ರತೆಯನ್ನು ಇಂದೂ ಮುಂದುವರಿಸಲಾಗುವುದು ಎಂದು ಗಾಂಧಿನಗರ ವ್ಯಾಪ್ತಿಯ ಐಜಿಪಿ ಮಯಾಂಕ್ ಚಾವ್ಡಾ ಹೇಳಿದ್ದಾರೆ.
"ನಮಗೆ ಪೊಲೀಸ್ ಭದ್ರತೆ ಸಿಗಲಿಲ್ಲ, ಪೊಲೀಸರು ಬಂದ ನಂತರವೇ ಗಲಾಟೆ ಮತ್ತಷ್ಟು ಹೆಚ್ಚಾಯಿತು" ಎಂದು ದಲಿತರೊಬ್ಬರು ಹೇಳಿದ್ದಾರೆ.
ಇಂಥದೇ ಇನ್ನೊಂದು ಘಟನೆ ಭಾನುವಾರ ನಡೆದಿದ್ದು, ಗುಜರಾತಿನ ಸಬರಕಂಠ ಜಿಲ್ಲೆಯಲ್ಲಿ ವಧುವೊಬ್ಬರಿಗೆ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಲು ಅವಕಾಶ ನೀಡಿರಲಿಲ್ಲ. ಅವರ ಮದುವೆಯೂ ಪೊಲೀಸ್ ಭದ್ರತೆಯ ನಡುವೆಯೇ ನಡೆದಿದೆ.












Click it and Unblock the Notifications