'ಬಾಲಕೋಟ್ ದಾಳಿಯಲ್ಲಿ ಪಾಕ್ ಸೈನಿಕರಾಗಲಿ, ನಾಗರಿಕರಾಗಲಿ ಸಾವನ್ನಪ್ಪಿಲ್ಲ'
ಅಹ್ಮದಾಬಾದ್, ಏಪ್ರಿಲ್ 19: ಭಾರತೀಯ ವಾಯು ಸೇನೆಯು ಕಳೆದ ಫೆಬ್ರವರಿಯಲ್ಲಿ ನಡೆಸಿದ ಬಾಲಕೋಟ್ ದಾಳಿಯಲ್ಲಿ ಪಾಕಿಸ್ತಾನಿ ಯೋಧರಾಗಲಿ ಅಥವಾ ನಾಗರಿಕರಾಗಲಿ ಸಾವನ್ನಪ್ಪಿಲ್ಲ ಎಂದು ಗುರುವಾರ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಫೆಬ್ರವರಿ ಇಪ್ಪತ್ತಾರರಂದು ಬಾಲಕೋಟ್ ನಲ್ಲಿರುವ ಜೈಷ್-ಇ-ಮೊಹ್ಮದ್ ಉಗ್ರ ನೆಲೆ ಮೇಲೆ ಭಾರತೀಯ ವಾಯು ಸೇನೆ ದಾಳಿ ನಡೆಸಿತ್ತು.
ಫೆಬ್ರವರಿ ಹದಿನಾಲ್ಕನೇ ತಾರೀಕು ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಗೆ ಪ್ರತಿಯಾಗಿ ಆ ದಾಳಿ ನಡೆದಿತ್ತು. "ಆ ದಾಳಿ ನಡೆಸಿದ್ದು ಸ್ವ ರಕ್ಷಣೆಗಾಗಿ" ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ. "ಪುಲ್ವಾಮಾ ಉಗ್ರ ದಾಳಿ ನಡೆದ ಮೇಲೆ ಗಡಿಯಾಚೆಗೆ ನಾವು ನಡೆಸಿದ ವಾಯು ದಾಳಿಯು ಸ್ವರಕ್ಷಣೆಗಾಗಿ ಎಂಬುದನ್ನು ಜಾಗತಿಕ ಸಮುದಾಯಕ್ಕೆ ತಿಳಿಸಿದೆವು" ಎಂದು ಅವರು ಹೇಳಿದ್ದಾರೆ.
ದಾಳಿಯ ವೇಳೆ ಪಾಕಿಸ್ತಾನಿ ನಾಗರಿಕರಿಗಾಗಲೀ ಅಥವಾ ಆ ದೇಶದ ಸೈನಿಕರಿಗಾಗಲೀ ಯಾವುದೇ ಹಾನಿ ಆಗಬಾರದು ಎಂದು ನಮ್ಮ ಸಶಸ್ತ್ರ ಪಡೆಗೆ ತಿಳಿಸಿದ್ದೆವು. ಅದನ್ನೇ ಜಾಗತಿಕ ಸಮುದಾಯದ ಮುಂದೆ ಹೇಳಿದ್ದೆವು ಎಂದಿದ್ದಾರೆ ಸುಷ್ಮಾ ಸ್ವರಾಜ್.

ಪುಲ್ವಾಮಾ ದಾಳಿಗೆ ಕಾರಣವಾದ ಜೈಷ್-ಇ-ಮೊಹ್ಮದ್ ಉಗ್ರ ಸಂಘಟನೆಯ ನೆಲೆಗಳನ್ನು ನಾಶ ಮಾಡಲು ಮಾತ್ರ ಸೇನೆಗೆ ತಿಳಿಸಲಾಗಿತ್ತು. ಮತ್ತು ನಮ್ಮ ಸೈನ್ಯವು ಅದೇ ರೀತಿ ಪಾಕಿಸ್ತಾನಿ ನಾಗರಿಕರಿಗಾಗಲೀ ಅಥವಾ ಸೈನಿಕರಿಗಾಗಲೀ ಹಾನಿ ಮಾಡದೆ ಕೆಲಸ ಮುಗಿಸಿತ್ತು ಎಂದು ಅವರು ಹೇಳಿದ್ದಾರೆ.
ನರೇಂದ್ರ ಮೋದಿ ಅವರು ಇಷ್ಟೊಂದು ಕೆಲಸವನ್ನು ಐದು ವರ್ಷದಲ್ಲಿ ಮಾಡಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಬರಬಹುದು. ಬಹುಮತದ ಸರಕಾರ ಇದ್ದುದರಿಂದ ಆಯಿತು. ಒಂದು ವೇಳೆ ಸಮ್ಮಿಶ್ರ ಸರಕಾರ ಆಗಿದ್ದರೆ ಅದು ಆಗುತ್ತಿರಲಿಲ್ಲ. ಅವರ ಮೇಲೆ ಒತ್ತಡ ಇರುತ್ತಿತ್ತು. ವಾಜಪೇಯಿ ಸರಕಾರದಲ್ಲಿ ನಾನು ಸಚಿವೆ ಆಗಿ ಕೆಲಸ ಮಾಡಿದ್ದರಿಂದ ನನಗೆ ಗೊತ್ತಿದೆ. ಅಟಲ್ ಜೀ ಹಲವಾರು ಕೆಲಸ ಮಾಡಬೇಕು ಅಂದುಕೊಂಡಿದ್ದರು. ಆದರೆ ಸಮ್ಮಿಶ್ರ ಸರಕಾರವಾದ್ದರಿಂದ ಎಲ್ಲ ಮಾಡಲು ಆಗಲಿಲ್ಲ ಎಂದಿದ್ದಾರೆ.












Click it and Unblock the Notifications